2ನೇ ಹೆರಿಗೆ ರಜೆ ನಿರಾಕರಣೆ: ತೋಟಗಾರಿಕಾ ಇಲಾಖಾ ನಿರ್ದೇಶಕರಿಗೆ ನ್ಯಾಯಾಂಗ ನಿಂದನೆ ನೋಟೀಸ್ ಜಾರಿ
ಅಲಹಾಬಾದ್: ಎರಡು ವರ್ಷಗಳ ಅಂತರವಿಲ್ಲ ಎಂಬ ಕಾರಣಕ್ಕೆ ಎರಡನೇ ಹೆರಿಗೆ ರಜೆ ನಿರಾಕರಿಸಿದ ತೋಟಗಾರಿಕೆ ಇಲಾಖೆಯ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಅಲಹಾಬಾದ್ ಹೈಕೋರ್ಟ್, ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದೆ.
ಹೆರಿಗೆ ರಜೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳಾ ಉದ್ಯೋಗಿ ಸುಶೀಲಾ ಪಟೇಲ್ ಎಂಬವರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಅಜಿತ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ತೋಟಗಾರಿಕಾ ಇಲಾಖೆಯ ನಿರ್ದೇಶಕರಿಗೆ ನ್ಯಾಯಾಂಗ ನಿಂದನೆ ನೋಟೀಸ್ ಜಾರಿಗೊಳಿಸಿದೆ.
ಮಹಿಳಾ ಉದ್ಯೋಗಿಯೊಬ್ಬರು ಹೆರಿಗೆ ರಜೆಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಮೊದಲ ಮತ್ತು ಎರಡನೇ ಹೆರಿಗೆ ರಜೆಯ ನಡುವೆ ಎರಡು ವರ್ಷಗಳ ಅಂತರ ಇರಲಿಲ್ಲ ಎಂಬ ಕಾರಣಕ್ಕಾಗಿ ಅರ್ಜಿಯನ್ನು ಎರಡನೇ ಬಾರಿಯೂ ತಿರಸ್ಕರಿಸಲಾಯಿತು. ಉತ್ತರ ಪ್ರದೇಶದ ತೋಟಗಾರಿಕೆ ಮತ್ತು ಆಹಾರ ಸಂಸ್ಕರಣಾ ಇಲಾಖೆಯ ನಿರ್ದೇಶಕರು ಅರ್ಜಿಯನ್ನು ತಿರಸ್ಕರಿಸಿದ ಈ ನಡವಳಿಕೆಗೆ ಅಲಹಾಬಾದ್ ಹೈಕೋರ್ಟ್ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ತೋಟಗಾರಿಕಾ ಇಲಾಖೆಯ ನಿರ್ದೇಶಕರು ನ್ಯಾಯಾಲಯದ ಬದ್ದ ನಿರ್ದೇಶನಗಳನ್ನು ನಿರ್ಲಕ್ಷಿಸಿರುವುದು ಮತ್ತು ಈಗಾಗಲೇ ರದ್ದುಗೊಳಿಸಲಾದ ಕ್ರಮವನ್ನು ಮತ್ತೆ ಪುನರಾವರ್ತಿಸಿರುವುದು ‘ದುರದೃಷ್ಟಕರ’ ಎಂದು ಗಮನಿಸಿದ ನ್ಯಾಯಪೀಠ, ತೋಟಗಾರಿಕಾ ಇಲಾಖೆಯ ನಿರ್ದೇಶಕರು ಸೆಪ್ಟೆಂಬರ್ 2024 ರಲ್ಲಿ ಮತ್ತು ನವೆಂಬರ್ 2024 ರಲ್ಲಿ ಹೊರಡಿಸಿದ ಎರಡು ನಿರಾಕರಣೆ ಆದೇಶಗಳನ್ನು ರದ್ದುಗೊಳಿಸಿತು.
ಸರ್ಕಾರಿ ಸೇವೆಯಲ್ಲಿ ಹೆರಿಗೆ ರಜೆ ಮಂಜೂರು ಮಾಡಲು ಎರಡು ಗರ್ಭಧಾರಣೆಯ ನಡುವೆ ಕನಿಷ್ಠ 180 ದಿನಗಳು ಅಥವಾ ಎರಡು ವರ್ಷಗಳ ಅಂತರವನ್ನು ಒತ್ತಾಯಿಸುವುದು ಕಡ್ಡಾಯವಲ್ಲ. ಇದರ ಹೊರತಾಗಿಯೂ, ಅರ್ಜಿದಾರರು ಡಿಸೆಂಬರ್ 7, 2024 ರಂದು ಹೈಕೋರ್ಟ್ ಆದೇಶದ ಪ್ರತಿಯನ್ನು ಲಗತ್ತಿಸಿ ಹೊಸದಾಗಿ ಅರ್ಜಿ ಸಲ್ಲಿಸಿದಾಗ, ತೋಟಗಾರಿಕಾ ಇಲಾಖೆಯ ನಿರ್ದೇಶಕರು ಮತ್ತೆ ಅದೇ ಆಧಾರದ ಮೇಲೆ ಅವರ ಅರ್ಜಿಯನ್ನು ತಿರಸ್ಕರಿಸಿದರು. ಅರ್ಜಿ ತಿರಸ್ಕರಿಸಿದ ಇಲಾಖಾ ನಿರ್ದೇಶಕರ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಹಲವಾರು ಅರ್ಜಿಗಳಲ್ಲಿ ಎರಡು ಗರ್ಭಧಾರಣೆಯ ನಡುವೆ ಕನಿಷ್ಠ ಎರಡು ವರ್ಷಗಳ ಅವಧಿಯನ್ನು ಹಾದು ಹೋಗಬೇಕೆಂಬ ಅವಶ್ಯಕತೆಯು ಮಾತೃತ್ವ ರಜೆಯ ಪ್ರಯೋಜನವನ್ನು ಪಡೆಯಲು ಕಡ್ಡಾಯವಲ್ಲ ಎಂದು ನಿರ್ದೇಶನಗಳನ್ನು ನೀಡಿದ್ದರೂ ಅದನ್ನು ನಿರ್ಲಕ್ಷಿಸಿರುವುದು ದುರದೃಷ್ಟಕರ” ಎಂದು ತೀರ್ಪಿನಲ್ಲಿ ಹೇಳಿದೆ.
ಉತ್ತರ ಪ್ರದೇಶ ಸರ್ಕಾರದ ತೋಟಗಾರಿಕೆ ಮತ್ತು ಆಹಾರ ಸಂಸ್ಕರಣಾ ಇಲಾಖೆ ನಿರ್ದೇಶಕರು ಹೈಕೋರ್ಟ್ ಆದೇಶವನ್ನು ಪಾಲಿಸಲು ವಿಫಲರಾಗಿದ್ದಾರೆ ಮತ್ತು ಯಾವುದೇ ಸಮರ್ಥನೀಯ ಕಾರಣಗಳಿಲ್ಲದೆ ಮಾತೃತ್ವ ರಜೆ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ನ್ಯಾಯಪೀಠ ಹೇಳಿತು. ಅಧಿಕಾರಿಯ ಇಂತಹ ಕೃತ್ಯ ಮತ್ತು ನಡವಳಿಕೆಯು ಹೈಕೋರ್ಟ್ ಆದೇಶದ ಸ್ಪಷ್ಟ ತಿರಸ್ಕಾರಕ್ಕೆ ಸಮನಾಗಿರುತ್ತದೆ ಎಂದು ನ್ಯಾಯಾಲಯವು ಹೇಳಿದೆ.
ಹೀಗಾಗಿ ಸೆಪ್ಟೆಂಬರ್ 1 ರಂದು ತೋಟಗಾರಿಕೆ ಮತ್ತು ಆಹಾರ ಸಂಸ್ಕರಣಾ ನಿರ್ದೇಶಕರು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಲು ಮತ್ತು ನ್ಯಾಯಾಲಯ ನಿಂದನೆ ಕಾಯ್ದೆ, 1971 ರ ಅಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಿದ್ದಕ್ಕಾಗಿ ಆರೋಪಗಳನ್ನು ರೂಪಿಸುವ ಮೂಲಕ ಅವರ ವಿರುದ್ಧ ಏಕೆ ವಿಚಾರಣೆ ನಡೆಸಬಾರದು ಎಂಬುದಕ್ಕೆ ಕಾರಣವನ್ನು ತೋರಿಸಲು ನ್ಯಾಯಾಪೀಠ ಆದೇಶ ಹೊರಡಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
