ಡೈವರ್ಸ್: ಹೆಣ್ಣು ಮಕ್ಕಳಿಗಾಗಿ ತಂದೆಯೊಬ್ಬರು ಪಟ್ಟ ಪಾಡು, ಕಠಿಣ ಹೋರಾಟದ ಮನಕಲಕುವ ಕಥೆಯಿದು…!
ಬೆಂಗಳೂರು: ಹೊಂದಾಣಿಕೆ ಸಮಸ್ಯೆ, ಸಂಬಂಧದಲ್ಲಿ ಬಿರುಕು ಎಲ್ಲಾ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ವಿಚ್ಚೇದನ ಪ್ರಕರಣ ಹೆಚ್ಚುತ್ತಿವೆ. ಡೈವೋರ್ಸ್ ಕೂಡ ಮದುವೆಯಂತೆಯೇ ಸಾಮಾನ್ಯ ಸಹಜ ಪ್ರಕ್ರಿಯೆಯಾಗುತ್ತಿದೆ.. ಸಮಾಜಕ್ಕೆ ಇದು ಸಾಮಾನ್ಯ ಎನಿಸಿದ್ದರೂ, ಈ ಒಂದು ಸ್ಥಿತಿಯಲ್ಲಿ ನಡೆಯುವ ಹೋರಾಟ ಸಾಮಾನ್ಯವಲ್ಲ, ಅನೇಕರು ಮಾನಸಿಕವಾಗಿ ಈ ಅವಧಿಯಲ್ಲಿ ಬಹಳ ಕಷ್ಟಪಡುತ್ತಾರೆ.
ಮಕ್ಕಳಿರುವ ದಂಪತಿಯ ವಿಚ್ಚೇದನಕ್ಕೆ ಹೋಲಿಸಿದರೆ ಮಕ್ಕಳಿಲ್ಲದ ದಂಪತಿಯ ವಿಚ್ಚೇದನ ತುಸು ಸಲೀಸು ಇಬ್ಬರ ಒಪ್ಪಿಗೆ ಇದ್ದರೆ ಸಲೀಸಾಗಿ ವಿಚ್ಚೇದನ ಪಡೆಯಬಹುದಾಗಿದೆ. ಆದರೆ ಮಕ್ಕಳಿರುವ ದಂಪತಿಯ ವಿಚ್ಚೇದನ ಪಡೆದರೇ ದೊಡ್ಡ ಗೋಳೋ ಗೋಳು, ಮಕ್ಕಳು ಸಣ್ಣವರಿದ್ದರೆ, ಅವರ ಸುಪರ್ದಿಯನ್ನು ತಾಯಿಗೆ ಬಹುತೇಕ ಕೋರ್ಟ್ ನೀಡಿ ಬಿಡುತ್ತದೆ. ಆದರೆ ಇಲ್ಲಿ ತಂದೆ ಪಡುವ ನರಕಯಾತನೆ ಅಷ್ಟಿಷ್ಟಲ್ಲ, ಮಕ್ಕಳು ತಾಯಿಯ ಸುಪರ್ದಿಗೆ ಬಂದ ನಂತರ ತಂದೆ ಭೇಟಿಗೆ ಅವಕಾಶ ನೀಡದಿರುವುದು ಸೇರಿದಂತೆ ಅನೇಕ ಮಾನಸಿಕ ಕಿರುಕುಳವನ್ನು ನೀಡಲಾಗುತ್ತದೆ. ಮಕ್ಕಳಿಬ್ಬರಿದ್ದರೆ ಒಂದು ಮಗುವನ್ನು ತಂದೆಯ ಸುಪರ್ದಿಗೆ ಇನ್ನೊಂದು ಮಗುವನ್ನು ತಾಯಿಯ ಸುಪರ್ದಿಗೆ ನೀಡಲಾಗುತ್ತದೆ. ಈ ವೇಳೆ ಮಕ್ಕಳು ಒಡಹುಟ್ಟಿದವರ ಪ್ರತ್ಯೇಕತೆಯಿಂದ ಅನುಭವಿಸುವ ಗೋಳು ಮತ್ತೊಂದು ರೀತಿಯದ್ದು.
ಅಂತೆಯೇ ಇಲ್ಲೊಬ್ಬರು ತಂದೆ ತನ್ನ ಹೆಂಡತಿಯಿಂದ ವಿಚ್ಚೇದನ ಪಡೆದ ಬಳಿಕ ತನ್ನ ಇಬ್ಬರೂ ಹೆಣ್ಣು ಮಕ್ಕಳು ಬೇರ್ಪಡಲು ಬಿಡದೆ ತನ್ನ ಕಸ್ಟಡಿಗೆ ಪಡೆಯಲು ಹೋರಾಡಿದ್ದು, ಅದರಲ್ಲಿ ಆತ ಯಶಸ್ವಿಯೂ ಆಗಿದ್ದು, ಎರಡು ಹೆಣ್ಣು ಮಕ್ಕಳಿಗಾಗಿ ಅಪ್ಪ ಪಟ್ಟ ಪಾಡು, ಆತನ ಭಾವುಕ ಕಠಿಣ ಹೋರಾಟದ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಹಲವರ ಬದುಕಿನ ಕಥನಗಳನ್ನು ಹಂಚಿಕೊಳ್ಳುವ She the People ಇನ್ಸ್ಟಾ ಪೇಜ್ನಲ್ಲಿ ತಂದೆಯೊಬ್ಬರು ತನ್ನ ಇಬ್ಬರು ಹೆಣ್ಣು ಮಕ್ಕಳನ್ನ ತನ್ನ ಕಸ್ಟಡಿಗೆ ತೆಗೆದುಕೊಂಡು ಅವರ ಲಾಲನೆ ಪಾಲನೆಗಾಗಿ ಕೆಲಸವನ್ನ ಬಿಟ್ಟು ಹೋರಾಡಿದ ಸಾಹಸಿ ಕಥೆಯನ್ನ ಹಂಚಿಕೊಳ್ಳಲಾಗಿದೆ.
ಈ ಭಾವನಾತ್ಮಕವಾಗಿ ಬಹಳ ಕ್ಲಿಷ್ಟಕರವಾದ ತಮ್ಮ ಈ ಪಯಣವನ್ನು ವಿಚ್ಚೇದಿತ ತಂದೆ ಹಂಚಿಕೊಂಡಿದ್ದು ಹೀಗೆ…
ಕೆಲವರಿಗೆ, ನಾನು ಇಬ್ಬರು ಪುಟ್ಟ ಹುಡುಗಿಯರನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಸ್ಯಾಕ್ರಮೆಂಟೋದಲ್ಲಿ ಕಾರು ಚಲಾಯಿಸುತ್ತಾ ಡೆಲಿವರಿ ಕೆಲಸ ಮಾಡುವ ವ್ಯಕ್ತಿ. ಮತ್ತೆ ಕೆಲವರಿಗೆ ನಾನು ಸಾಮಾಜಿಕ ಜಾಲತಾಣದಲ್ಲಿ ತನ್ನ ಜೀವನದ ಕತೆಯನ್ನು ಸ್ವಲ್ಪ ಹಂಚಿಕೊಳ್ಳುವ ಒಂಟಿ ತಂದೆ. ಆದರೆ ಈ ಪ್ರಯಾಣ ನಿಜವಾಗಿಯೂ ಹೇಗೆ ಪ್ರಾರಂಭವಾಯಿತು ಎಂದು ಅನೇಕರಿಗೆ ಗೊತ್ತಿಲ್ಲ.
ನಾನು 2012 ರಲ್ಲಿ ಮೊದಲ ಬಾರಿಗೆ ನ್ಯೂಯಾರ್ಕ್ ನಲ್ಲಿ ನನ್ನ ಹೆಂಡತಿಯನ್ನು ಭೇಟಿ ಮಾಡಿದೆ. ಸರಳ ಸ್ನೇಹದಿಂದ ಆರಂಭವಾದ ಈ ಭೇಟಿ ನಂತರ ಸ್ನೇಹವನ್ನು ಮೀರಿ ಬೆಳೆಯಿತು. ಹೀಗಾಗಿ ಕೆಲವು ವರ್ಷಗಳ ಡೇಟಿಂಗ್ ನಲ್ಲಿದ್ದು, ನಂತರ ನಾವು ಮದುವೆಯಾದೆವು. ಇದಾದ ನಂತರ 2015ರಲ್ಲಿ, ನಮ್ಮ ಮೊದಲ ಮಗಳು ಕುದ್ರತ್ ಜನಿಸಿದಳು ಹೀಗೆ ಎಲ್ಲವೂ ಬದಲಾಯಿತು. ಒಂದೂವರೆ ವರ್ಷದ ನಂತರ, ನಮ್ಮ ಎರಡನೇ ಮಗಳು ಕಿಸ್ಮತ್ ಜನಿಸಿದಳು. ಇದಾದ ನಂತರ ನಮಗೆ ನಮ್ಮ ಜೀವನದಲ್ಲಿ ಎಲ್ಲವೂ ಸಿಕ್ಕಿತು ಎಂದು ನಾನು ಭಾವಿಸಿದೆ. ಆದರೆ ಅಪ್ಪ ಅಮ್ಮನಾಗಿದ್ದ ನಮ್ಮ ಸಂಬಂಧದಲ್ಲಿ ಒಡಕು ಶುರುವಾಗಿತ್ತು. ಕಾಲಾನಂತರದಲ್ಲಿ, ನನ್ನ ಹೆಂಡತಿ ಮತ್ತು ನನ್ನ ನಡುವಿನ ಅಸಮಾಧಾನ ಹೆಚ್ಚಾಯಿತು. ಭಿನ್ನಾಭಿಪ್ರಾಯಗಳು ತಲೆದೂರುತ್ತಿದ್ದಂತೆ ನಾವು ದೂರವಾಗಬೇಕು ಎಂಬುದನ್ನು ಅರಿತವು.
ಹೀಗಾಗಿ. ಕೋವಿಡ್ ನಂತರ ನಾವು ವಿಚ್ಛೇದನ ಪಡೆದೆವು. ಆದರೆ ಈ ವಿಚ್ಛೇದನ ಪ್ರಕ್ರಿಯೆಯು ಮೂರು ವರ್ಷಗಳ ಕಾಲ ನಡೆಯಿತು.ನನ್ನ ಹೆಂಡತಿ ಇಬ್ಬರು ಮಕ್ಕಳಲ್ಲಿ ಒಬ್ಬೊಬ್ಬರು ಒಬ್ಬೊಬ್ಬರನ್ನು ನೋಡಿಕೊಳ್ಳಬೇಕು ಎಂದು ಸೂಚಿಸಿದಳು. ಆದರೆ ಇದನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿರಲಿಲ್ಲ, ನನ್ನ ಇಬ್ಬರು ಹೆಣ್ಣುಮಕ್ಕಳನ್ನು ಬೇರ್ಪಡಿಸಲು ನಾನು ನಿರಾಕರಿಸಿದೆ. ಏಕೆಂದರೆ ನಮ್ಮ ಹೆಣ್ಣುಮಕ್ಕಳಾದ ಕುದ್ರತ್ ಮತ್ತು ಕಿಸ್ಮತ್ ಕೇವಲ ಸಹೋದರಿಯರಾಗಿರಲಿಲ್ಲ, ಅವರು ಆತ್ಮ ಸಂಗಾತಿಗಳು. ಆತ್ಮೀಯ ಸ್ನೇಹಿತರಾಗಿದ್ದರು, ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ, ಹೀಗಾಗಿ ಅವರನ್ನು ಬೇರ್ಪಡಿಸುವುದು ನನಗೆ ಇಷ್ಟವಿರಲಿಲ್ಲ, ಈ ವಿಚಾರವನ್ನು ನಾನು ಬೇರೆಯವರ ಜೊತೆ ಹಂಚಿಕೊಂಡಾಗ ಕೆಲವರು ಇದು ಹುಚ್ಚುತನ ಎಂದರೆ ಮತ್ತೆ ಕೆಲವರು ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗುತ್ತದೆ ಇದು ಹೆಚ್ಚುವರಿ ಜವಾಬ್ದಾರಿ ಇದನ್ನು ಹೇಗೆ ನಿರ್ವಹಿಸುತ್ತೀರಿ ಎಂದು ಹೇಳಿದರು. ಆದರೆ ಇದು ನನಗೆ ಸಾಧ್ಯ ಎಂಬುದು ತಿಳಿದಿತ್ತು. ಹಾಗೂ ನಾನು ಇದನ್ನು ಮಾಡಲೇಬೇಕಿತ್ತು. ಏಕೆಂದರೆ ಅವರು ನನ್ನ ಹೆಣ್ಣುಮಕ್ಕಳು ಮತ್ತು ನಾನು ಅವರನ್ನು ಬಿಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ವರ್ಷಗಳ ಹೋರಾಟದ ನಂತರ, ನನ್ನ ಇಬ್ಬರು ಹೆಣ್ಣುಮಕ್ಕಳ ಸಂಪೂರ್ಣ ಪಾಲನೆ ನನ್ನ ಪಾಲಿಗೆ ಒದಗಿ ಬಂತು. ಹೀಗಾಗಿ ನಾನು ಅವರ ಪಾಲಿಗೆ ಅತ್ಯುತ್ತಮ ಜೀವನವನ್ನು ನೀಡಲು ಸಿದ್ಧನಾದೆ.
ಶೀಘ್ರದಲ್ಲೇ ನಾನು ನನ್ನ ನನ್ನ ಟ್ರಕ್ ಕೆಲಸವನ್ನು ಬಿಟ್ಟುಬಿಟ್ಟೆ. ಇದರಿಂದ ಸಂಪಾದನೆ ಚೆನ್ನಾಗಿತ್ತು. ಆದರೆ ಅದು ರಸ್ತೆಯಲ್ಲಿ 12 ರಿಂದ 16 ಗಂಟೆ ಕಳೆಯಬೇಕಾದ ಕೆಲಸವಾಗಿತ್ತು. ಆದರೆ ನನ್ನ ಹೆಣ್ಣುಮಕ್ಕಳಿಗಾಗಿ ನಾನು ಇದನ್ನು ತೊರೆಯಬೇಕಾಗಿತ್ತು. ಇದಾದ ನಂತರ ನಾನು ಅವರನ್ನು ಬೆಳಗ್ಗೆ 7 ಗಂಟೆಗೆ ಶಾಲೆಗೆ ಬಿಡುತ್ತಿದ್ದೆ, 3 ಗಂಟೆಗೆ ಕರೆದುಕೊಂಡು ಹೋಗುತ್ತಿದ್ದೆ, ಅವರ ಟ್ಯೂಷನ್ಗಳನ್ನು ನಿರ್ವಹಿಸುತ್ತಿದ್ದೆ, ಊಟದ ಡಬ್ಬಿಯನ್ನು ತಯಾರಿಸುತ್ತಿದ್ದೆ ಮತ್ತು ಅವರ ಹೋಮ್ವರ್ಕ್ನಲ್ಲಿ ನಾನು ಅವರಿಗೆ ಸಹಾಯ ಮಾಡುತ್ತಿದ್ದೆ. ನಾನು ಆಹಾರ ಪೂರೈಕೆ ಮಾಡುವುದು ಸೇರಿದಂತೆ ನನ್ನ ಮಕ್ಕಳ ವೇಳಾಪಟ್ಟಿಗೆ ಸರಿಹೊಂದುವ ಯಾವುದೇ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಪ್ರಾರಂಭಿಸಿದೆ.
ಈಗ ವಾರಾಂತ್ಯದಲ್ಲಿ, ನಾನು ಕೆಲಸ ಮಾಡುವಾಗ ಅವರು ನನ್ನೊಂದಿಗೆ ಟ್ರಕ್ ನ ಹಿಂಭಾಗದಲ್ಲಿ ಕುಳಿತು ಸವಾರಿ ಮಾಡುತ್ತಾರೆ. ಅವರಿಗೆ, ಇದು ಖುಷಿ ನೀಡುತ್ತದೆ ಮತ್ತು ಅವರು ಅದನ್ನು ಇಷ್ಟಪಡುತ್ತಾರೆ. ಈಗ ಜಡೆ ಹೆಣೆಯುವುದು ತಲೆ ಕೂದಲು ಕಟ್ಟುವುದು ಹೇಗೆ ಎಂಬುದನ್ನು ನಾನು ಕಲಿತಿದ್ದೇನೆ. ಭಾವನೆಗಳ ಬಗ್ಗೆ ಹೇಗೆ ಮಾತನಾಡುವುದು. ತಾಳ್ಮೆ ಮತ್ತು ಯಾವುದೇ ಮುಜುಗರವಿಲ್ಲದೆ ಮುಟ್ಟನ್ನು ಹೇಗೆ ವಿವರಿಸುವುದು ಎಂಬುದನ್ನು ತಿಳಿದಿದ್ದೇನೆ. ತಂದೆ ತಾಯಿಯಾಗಲು ಸಾಧ್ಯವಿಲ್ಲ ಎಂದು ಜನರು ಹೇಳುತ್ತಿದ್ದರು. ಆದರೆ ನಾನು ಅದನ್ನು ಒಪ್ಪಲಿಲ್ಲ. ಇಂದು, ಕುದ್ರತ್ ಮತ್ತು ಕಿಸ್ಮತ್ ಬೆಳೆಯುತ್ತಿದ್ದಾರೆ, ಮತ್ತು ನಾನು ಕೂಡ. ನಾನು ಅವರನ್ನು ಬೆಳೆಸುತ್ತಿರುವಂತೆಯೇ ಅವರು ನನ್ನನ್ನು ಉಳಿಸಿದ್ದಾರೆ ಎಂದು ಆ ಇಬ್ಬರು ಹೆಣ್ಣು ಮಕ್ಕಳ ಹೆಮ್ಮೆಯ ತಂದೆ ಭಾವುಕರಾಗಿ ಹೇಳಿಕೊಂಡಿದ್ದಾರೆ
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
