ಡಿಜಿಟಲ್ ಅರೆಸ್ಟ್ ಪ್ರಕರಣಗಳ ಬಗ್ಗೆ ಸುಪ್ರೀಂ ಕಳವಳ: ಎಫ್ ಐಆರ್ ಗಳ ಮಾಹಿತಿ ನೀಡಡುವಂತೆ ರಾಜ್ಯಗಳಿಗೆ ನೋಟಿಸ್
ನವದೆಹಲಿ: ದೇಶಾದ್ಯಂತ ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದರಿಂದಾಗಿ ಸಾಕಷ್ಟು ಜನರು ಮೋಸ ಹೋಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಈಎಲ್ಲಾ ಪ್ರಕರಣಗಳ ತನಿಖೆಯನ್ನ ಸಿಬಿಐಗೆ ವಹಿಸುವ ಬಗ್ಗೆ ಒಲವು ತೋರಿದ್ದು ಈ ಸಂಬಂಧ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಎಫ್ ಐಆರ್ ಮಾಹಿತಿ ನೀಡಿವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.
ಡಿಜಿಟಲ್ ಅರೆಸ್ಟ್ ಮೂಲಕ ಹಣ ಕಳೆದುಕೊಂಡ ವೃದ್ಧೆಯೊಬ್ಬರು ಸಲ್ಲಿಸಿದ ದೂರನ್ನು ಆಧರಿಸಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್, ಅನಧಿಕೃತವಾಗಿ ಡಿಜಿಟಲ್ ಅರೆಸ್ಟ್ ಮೂಲಕ ಜನರನ್ನು ವಂಚಿಸುತ್ತಿರುವ ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ ಮಾಹಿತಿಯನ್ನು ರಾಜ್ಯಗಳು ಸಲ್ಲಿಸಬೇಕು. ಅದರಿಂದ ಈ ಹಗರಣದ ಆಳವನ್ನು ಅರಿಯಲು ಸಿಬಿಐಗೆ ಅನುಕೂಲವಾಗಲಿದೆ’ ಎಂದು ಹೇಳಿದೆ.
ದೇಶದಲ್ಲಿ ವ್ಯಾಪಕವಾಗಿರುವ ಡಿಜಿಟಲ್ ಅರೆಸ್ಟ್ ಎಂಬ ವಂಚನೆ ಕುರಿತು ಕಳವಳ ವ್ಯಕ್ತಪಡಿಸಿರುವ ನ್ಯಾ. ಸೂರ್ಯ ಕಾಂತ್ ಮತ್ತು ನ್ಯಾ. ಜಾಯ್ಲ್ಯಾ ಬಗಚಿ ಅವರಿದ್ದ ಪೀಠವು, ಇಂಥ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮ್ಮಲ್ಲಿ ದಾಖಲಾಗಿರುವ ಎಲ್ಲಾ ಎಫ್ಐಆರ್ ಮಾಹಿತಿಯನ್ನು ಸಲ್ಲಿಸುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ.
ಸಿಬಿಐ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರು, ‘ಡಿಜಿಟಲ್ ಅರೆಸ್ಟ್ ಪ್ರಕರಣಗಳು ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ನಿಂದ ನಿರ್ವಹಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ತನಿಖೆಯ ಯೋಜನೆಯನ್ನು ರೂಪಿಸುವಂತೆ ಸಿಬಿಐಗೆ ತಿಳಿಸಲಾಗಿದೆ ಎಂದು ಪೀಠದ ಗಮನಕ್ಕೆ ತಂದರು.
‘ರಾಷ್ಟ್ರವ್ಯಾಪಿ ನಡೆಯುತ್ತಿರುವ ಈ ಸೈಬರ್ ಹಗರಣದ ಸ್ವರೂಪ ಮತ್ತು ಆಳವನ್ನು ಗಮನಿಸಿದರೆ ಇದರ ತನಿಖೆ ಸಮಗ್ರವಾಗಿ ಆಗಬೇಕಿದೆ. ಹೀಗಾಗಿ ರಾಜ್ಯಗಳಲ್ಲಿ ದಾಖಲಾಗಿರುವ ಇಂಥ ವಂಚನೆ ಪ್ರಕರಣಗಳನ್ನು ಕೂಡಲೇ ಸಿಬಿಐಗೆ ಹಸ್ತಾಂತರಿಸಬೇಕು. ಸೈಬರ್ ಕ್ರೈಂ ಹಾಗೂ ಡಿಜಿಟಲ್ ಅರೆಸ್ಟ್ ಪ್ರಕರಣಗಳು ದೇಶದ ಹೊರಗಿನಿಂದ ನಡೆಯುತ್ತಿವೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಇದನ್ನು ಬೇಧಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸಿಬಿಐ ತನಿಖೆಯ ಪ್ರಗತಿಯನ್ನು ನಾವೇ ನಿರ್ವಹಿಸುತ್ತೇವೆ. ಅದಕ್ಕೆ ತಕ್ಕಂತೆ ಕಾಲಕಾಲಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು ಎಂದು ನ್ಯಾಯಪೀಠ ಹೇಳಿದೆ.
ಈ ಪ್ರಕರಣದ ತನಿಖೆಗೆ ಇನ್ನೂ ಹೆಚ್ಚಿನ ಮೂಲಸೌಕರ್ಯ ಬೇಕಿದ್ದಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲದೆ ಹೊರಗಿನ ಸೈಬರ್ ತಜ್ಞರ ಅಗತ್ಯವಿದ್ದಲ್ಲಿ ತಿಳಿಸುವಂತೆಯೂ ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಾಲಯ ಮತ್ತು ತನಿಖಾ ಸಂಸ್ಥೆಗಳ ನಕಲಿ ಆದೇಶ ಪ್ರತಿಗಳನ್ನು ತೋರಿಸಿ ವಂಚಕರು ಹರಿಯಾಣದ ದಂಪತಿಯಿಂದ ₹1.05 ಕೋಟಿ ಸುಲಿಗೆ ಮಾಡಿರುವ ಘಟನೆ ನಡೆದಿತ್ತು. ವಂಚಕರು ಸೆಪ್ಟೆಂಬರ್ 3 ರಿಂದ 16ರ ನಡುವೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿದ್ದಾರೆ. ಅದಕ್ಕಾಗಿ, ನ್ಯಾಯಾಲಯದ ನಕಲಿ ದಾಖಲೆಗಳನ್ನು ತೋರಿಸಿರುವುದನ್ನು ದೂರುದಾರ ಮಹಿಳೆಯು ಪತ್ರದ ಮೂಲಕ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದರು. ವಂಚಕರು ಸಿಬಿಐ ಮತ್ತು ಇ.ಡಿ ಅಧಿಕಾರಿಗಳೆಂದು ಹೇಳಿ ಆಡಿಯೊ ಮತ್ತು ವಿಡಿಯೊ ಕರೆ ಮಾಡಿ ನ್ಯಾಯಾಲಯದ ನಕಲಿ ದಾಖಲೆಗಳನ್ನು ತೋರಿಸಿದ್ದರು ಎಂದು ಪತ್ರದಲ್ಲಿ ತಿಳಿಸಿದ್ದರು.
ಅ. 17ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಪೀಠವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ವಂಚನೆಗೆ ಒಳಗಾದ 73 ವರ್ಷದ ಮಹಿಳೆಯು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದಲ್ಲಿ ಸ್ವಯಂಪ್ರೇರಿತ ದೂರು ದಾಖಲಾದ ಪ್ರಕರಣದಲ್ಲಿ ಪೀಠವು ಕೇಂದ್ರ ಸರ್ಕಾರ ಮತ್ತು ಸಿಬಿಐನ ಪ್ರತಿಕ್ರಿಯೆ ಕೋರಿತ್ತು.
‘ಹಿರಿಯ ನಾಗರಿಕರು ಸೇರಿದಂತೆ ಅಮಾಯಕರನ್ನು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಲು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ ಆದೇಶಗಳು, ನ್ಯಾಯಾಧೀಶರ ಸಹಿಗಳನ್ನು ನಕಲಿ ಮಾಡುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರು ಇಟ್ಟಿರುವ ನಂಬಿಕೆಯ ಮೇಲೆ ಬಲವಾದ ಹೊಡೆತ ನೀಡುತ್ತದೆ. ಇಂತಹ ಕ್ರಮವು ನ್ಯಾಯಾಂಗದ ಘನತೆಯ ಮೇಲಿನ ನೇರ ದಾಳಿಯಾಗಿದೆ’ ಎಂದು ಪೀಠ ಹೇಳಿತ್ತು.
ಇದಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಅವರ ಸಹಾಯವನ್ನು ಕೋರಿದ ಪೀಠ, ಹಿರಿಯ ದಂಪತಿಯನ್ನು ವಂಚಿಸಿದ ಪ್ರಕರಣದಲ್ಲಿ ಇದುವರೆಗಿನ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಹರಿಯಾಣ ಸರ್ಕಾರ ಮತ್ತು ಅಂಬಾಲ ಸೈಬರ್ ಅಪರಾಧ ವಿಭಾಗಕ್ಕೆ ನಿರ್ದೇಶನ ನೀಡಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
