ಕೋರ್ಟ್ ಕಲಾಪ ಬಹಿಷ್ಕಾರ ಕರೆ ಧಿಕ್ಕರಿಸುವ ವಕೀಲರ ವಿರುದ್ದ ಕ್ರಮಕೈಗೊಳ್ಳುವ ಅಧಿಕಾರ, ಹಕ್ಕು ವಕೀಲರ ಸಂಘಕ್ಕಿದೆಯೇ..?
ತ್ರಿಪುರ: ಕೋರ್ಟ್ ಕಲಾಪ ಬಹಿಷ್ಕಾರ ಮಾಡುವಂತೆ ನೀಡಿದ ಕರೆಯನ್ನು ಧಿಕ್ಕರಿಸುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳಲು ವಕೀಲರ ಸಂಘಕ್ಕೆ ಯಾವುದೇ ಹಕ್ಕು, ಅಧಿಕಾರವಿಲ್ಲ ಎಂದು ತ್ರಿಪುರ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಕೀಲರ ಸಂಘದ “ಬಹಿಷ್ಕಾರ ನಿರ್ಣಯ’ವನ್ನು ಧಿಕ್ಕರಿಸಿ ಅಗರ್ತಲಾದಲ್ಲಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗದ ಮುಂದೆ ಹಾಜರಾದ ವಕೀಲರನ್ನು ವಕೀಲರ ಸಂಘ ಅಮಾನತುಗೊಳಿಸಿತ್ತು.
ತ್ರಿಪುರಾ ಬಾರ್ ಅಸೋಸಿಯೇಷನ್ ಸದಸ್ಯರು ಮತ್ತು ಕಿರಿಯ ವಕೀಲರು, ತಮ್ಮ ವೃತ್ತಿಪರ ಬಾಧ್ಯತೆಗಳಿಗೆ ಅನುಗುಣವಾಗಿ ಗ್ರಾಹಕ ವೇದಿಕೆಯ ಮುಂದೆ ಹಾಜರಾದ ಹಿನ್ನೆಲೆಯಲ್ಲಿ ಅವರಿಗೆ ಫೆಬ್ರವರಿ 7 ರಂದು ನೀಡಲಾದ ಶೋಕಾಸ್ ನೋಟಿಸ್ ಮತ್ತು ಅದರ ಪಶ್ಚಾತ್ ಪರಿಣಾಮವಾದ ಅಮಾನತು ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಸಂಬಂಧ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸಿದ್ದಕ್ಕಾಗಿ ತ್ರಿಪುರ ಬಾರ್ ಅಸೋಸಿಯೇಷನ್ ನಿಂದ ಅಮಾನತು ಮತ್ತು ಶಿಸ್ತು ಕ್ರಮವನ್ನು ಎದುರಿಸಿದ ಕಿರಿಯ ವಕೀಲರಿಗೆ ತ್ರಿಪುರ ಹೈಕೋರ್ಟ್ ನ್ಯಾಯಮೂರ್ತಿ ಟಿ ಅಮರನಾಥ್ ಗೌಡ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನ್ಯಾಯಪೀಠವು ಮಧ್ಯಂತರ ಪರಿಹಾರ ನೀಡಿದೆ.
2026ರ ಜನವರಿ 19 ರಂದು ಬಾರ್ ಅಸೋಸಿಯೇಷನ್ ತೆಗೆದುಕೊಂಡ ನಿರ್ಣಯದ ಜಾರಿಯನ್ನು ಹಾಗೂ ಕಿರಿಯ ವಕೀಲರ ವಿರುದ್ಧ ಪ್ರಾರಂಭಿಸಲಾದ ಶೋಕಾಸ್ ನೋಟಿಸ್ ಮತ್ತು ಅಮಾನತು ಸೇರಿದಂತೆ ಎಲ್ಲಾ ಶಿಸ್ತು ಕ್ರಮಗಳನ್ನು ನ್ಯಾಯಪೀಠ ತಡೆಹಿಡಿಯಿತು ವಕೀಲರ ಸಂಘ ಬಹಿಷ್ಕಾರದ ಕರೆ ನೀಡಿದ್ದರೂ ಸಹ ನ್ಯಾಯಾಲಯಕ್ಕೆ ಹಾಜರಾಗಿದ್ದಕ್ಕಾಗಿ ಬಾರ್ ಅಸೋಸಿಯೇಷನ್ ಗಳು ವಕೀಲರಿಗೆ ದಂಡ ವಿಧಿಸಲು ಸಾಧ್ಯವಿಲ್ಲ. ಕಕ್ಷಿದಾರರನ್ನು ಪ್ರತಿನಿಧಿಸಲು ಮತ್ತು ನ್ಯಾಯಾಲಯಕ್ಕೆ ಸಹಾಯ ಮಾಡಲು ವಕೀಲರ ಕಾಯ್ದೆಯ ಅಡಿಯಲ್ಲಿ ವಕೀಲರು ಶಾಸನಬದ್ಧ ಕರ್ತವ್ಯವನ್ನು ಹೊಂದಿದ್ದಾರೆ. ಈ ಕರ್ತವ್ಯವನ್ನು ವಕೀಲರ ಸಂಘದ ಯಾವುದೇ ನಿರ್ಣಯ ಅಥವಾ ಉಪಕಾನೂನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
“ವಕೀಲರ ಸಂಘದ ಪದಾಧಿಕಾರಿಗಳ ಕ್ರಮವು ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾಗಿದೆ ಮತ್ತು ವಕೀಲರ ಸಂಘದ ಪದಾಧಿಕಾರಿಗಳ ಅಂತಹ ಕ್ರಮ ದೋಷಪೂರಿತವಾಗಿದೆ. ಈ ಅಮಾನತನ್ನು ಮನ್ನಿಸಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಅದನ್ನು ಸರಿಪಡಿಸಬೇಕಾಗಿದೆ. ಯಾವುದೇ ಬಾರ್ ಕೌನ್ಸಿಲ್ ಅಥವಾ ಬಾರ್ ಅಸೋಸಿಯೇಷನ್ ನಿಯಮಗಳು ಮತ್ತು ನಿಬಂಧನೆಗಳು ಅಥವಾ ಅದರ ಉಪ ಕಾನೂನುಗಳು ನ್ಯಾಯಾಲಯಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸುವುದಿಲ್ಲ” ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ದಾಖಲೆಗಳ ಪ್ರಕಾರ, ಬಾರ್ ಅಸೋಸಿಯೇಷನ್ ಜನವರಿ 19 ರಂದು ಅಗರ್ತಲಾದ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗದ ಮುಂದೆ ಹಾಜರಾಗದಂತೆ ತನ್ನ ಸದಸ್ಯರನ್ನು ಕರೆಯುವ ನಿರ್ಣಯವನ್ನು ಅಂಗೀಕರಿಸಿತ್ತು. ಫೆಬ್ರವರಿ 6 ರಂದು ಅರ್ಜಿದಾರರು ವೇದಿಕೆಯ ಮುಂದೆ ಹಾಜರಾದಾಗ, ಅವರು ಉದ್ದೇಶಪೂರ್ವಕವಾಗಿ ನಿರ್ಣಯವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಂಘವು ಶೋಕಾಸ್ ನೋಟಿಸ್ ನೀಡಿತ್ತು.
ಕಿರಿಯ ವಕೀಲರು ತಮ್ಮ ವಿವರಣೆಯನ್ನು ಸಲ್ಲಿಸಿ ತ್ರಿಪುರಾದ ಬಾರ್ ಕೌನ್ಸಿಲ್ ಮೊರೆ ಹೋಗಿದ್ದರು. ಬಾರ್ ಕೌನ್ಸಿಲ್ ಕೂಡ ವಕೀಲರ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಆದರೆ, ಸ್ಥಳೀಯ ವಕೀಲರ ಸಂಘ ಶಿಸ್ತು ಕ್ರಮವನ್ನು ಮುಂದುವರೆಸಿದ್ದು, ರಾಜ್ಯ ವಕೀಲರ ಪರಿಷತ್ತಿನ ಮಧ್ಯಪ್ರವೇಶಿಸುವ ಅಧಿಕಾರವನ್ನು ಪ್ರಶ್ನಿಸಿತು. ಇದನ್ನು ಗಮನಿಸಿದ ನ್ಯಾಯಾಲಯವು, ಅರ್ಜಿದಾರರ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಿದ ವಿಧಾನಕ್ಕೆ ತೀವು ಅಸಮ್ಮತಿ ವ್ಯಕ್ತಪಡಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
