ವಿದ್ಯಾರ್ಥಿನಿಗೆ 15 ಲಕ್ಷ ರೂ. ಪರಿಹಾರ ನೀಡಿ: ಡಾ.ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಸಂಸ್ಥೆಗೆ ಹೈಕೋರ್ಟ್ ಆದೇಶ
ಬೆಂಗಳೂರು: ಅರ್ಹತಾ ಮಾನದಂಡಗಳನ್ನು ಪೂರೈಸಿದ್ದರೂ ಎಂಬಿಬಿಎಸ್ ಕೋರ್ಸ್ಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಗೆ 15 ಲಕ್ಷ ರೂ. ಪರಿಹಾರ ನೀಡುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ತುಮಕೂರಿನ ಶ್ರೀ ಸಿದ್ದಾರ್ಥ ಸಂಸ್ಥೆಗೆ ಹೈಕೋರ್ಟ್ ಆದೇಶ ಹೊರಡಿಸಿದೆ.
2017-18ನೇ ಸಾಲಿನಲ್ಲಿ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದರೂ ಎಂಬಿಬಿಎಸ್ ಕೋರ್ಸ್ಗೆ ಪ್ರವೇಶ ನಿರಾಕರಿಸಲ್ಪಟ್ಟ ವಿದ್ಯಾರ್ಥಿನಿಗೆ 15 ಲಕ್ಷ ರೂ. ಪರಿಹಾರ ನೀಡುವಂತೆನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿಗೆ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ ಮತ್ತು ನ್ಯಾಯಮೂರ್ತಿ ಕೆ ಮನ್ಮಧ ರಾವ್ ಅವರ ವಿಭಾಗೀಯ ಪೀಠವು ಸೂಚಿಸಿತು.
ನೀಟ್-2017 ರಲ್ಲಿ ಅಖಿಲ ಭಾರತ 195911 ಶ್ರೇಯಾಂಕ ಪಡೆದ ತುಮಕೂರಿನ ವಿದ್ಯಾರ್ಥಿನಿ ಸಂಜನಾ ವಿ, ಸೆಪ್ಟೆಂಬರ್ 2017 ರಲ್ಲಿ ಪ್ರಥಮ ವರ್ಷದ ಶುಲ್ಕವನ್ನು ಪಾವತಿಸಿದ್ದಾರೆ ಮತ್ತು ಸಮಯಕ್ಕೆ ಸರಿಯಾಗಿ ಬ್ಯಾಂಕ್ ಗ್ಯಾರಂಟಿ ಸಲ್ಲಿಸಿದ್ದಾರೆ. ಹಾಗಿದ್ದರೂ, ಕಾಲೇಜು ಎತ್ತಿದ ಕಾನೂನುಬಾಹಿರ ಬೇಡಿಕೆಯಿಂದಾಗಿ ಪ್ರವೇಶವನ್ನು ನಿರಾಕರಿಸಲಾಗಿದೆ. ಬದಲಾಗಿ, ಕಡಿಮೆ ಅರ್ಹತೆ ಹೊಂದಿರುವ ಅಭ್ಯರ್ಥಿಗೆ ಸೀಟನ್ನು ನೀಡಲಾಗಿದೆ ಎಂಬುದನ್ನ ನ್ಯಾಯಪೀಠವು ಗಮನಿಸಿತು.
2018-19ರಲ್ಲಿ ಉಚಿತ ಮ್ಯಾನೇಜ್ಮೆಂಟ್ ಕೋಟಾ ಸೀಟನ್ನು ಖಾತರಿಪಡಿಸುವ ದಾಖಲೆಯು ನಿಜವಾದದ್ದಲ್ಲ ಮತ್ತು ಬಲವಂತದ ಮೂಲಕ ಪಡೆಯಲಾಗಿದೆ ಎಂದು ಸಂಸ್ಥೆ ವಾದಿಸಿದರೆ, ಈ ಹಕ್ಕನ್ನು ಸ್ಥಾಪಿಸಲು ಕಾಲೇಜು ಅಥವಾ ಅದರ ಪ್ರಾಂಶುಪಾಲರು ಯಾವುದೇ ದೂರು ಅಥವಾ ಕಾನೂನು ಕ್ರಮಗಳನ್ನು ತೆಗೆದುಕೊಂಡಿಲ್ಲ. 2018-19ನೇ ಸಾಲಿನಲ್ಲಿ ಉಚಿತ ವೈದ್ಯಕೀಯ ಸೀಟು ನೀಡುವುದಾಗಿ ಕುಲಪತಿಗಳು ಅಕ್ಟೋಬರ್ 11, 2017 ರಂದು ಕಾಲೇಜು ಪ್ರಾಂಶುಪಾಲರು ಭರವಸೆ ನೀಡಿದ್ದರು. 2018-19ನೇ ಶೈಕ್ಷಣಿಕ ವರ್ಷಕ್ಕೆ ಉಚಿತ ಮ್ಯಾನೇಜ್ಮೆಂಟ್ ಕೋಟಾ ಸೀಟು ನೀಡುವುದಾಗಿ ಕುಲಪತಿಗಳು ಭರವಸೆ ನೀಡಿದ್ದರು. ಆದರೆ, ಆ ಭರವಸೆಯನ್ನು ಎಂದಿಗೂ ಈಡೇರಿಸಲಾಗಿಲ್ಲ. ಬೇರೆ ದಾರಿಯಿಲ್ಲದೆ, ವಿದ್ಯಾರ್ಥಿನಿ ಆಗಸ್ಟ್ 2018 ರಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ, ತನ್ನ ಎಂಬಿಬಿಎಸ್ ಕೋರ್ಸ್ಗೆ 24 ಲಕ್ಷ ರೂ.ಗಳಿಗೂ ಹೆಚ್ಚು ಪಾವತಿಸಿದ್ದಾರೆ ಎಂದು ನ್ಯಾಯಪೀಠ ತಿಳಿಸಿತು.
ಹೀಗಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತಮ್ಮದೇ ಆದ ತಪ್ಪಿನಿಂದ ಸಂತ್ರಸ್ಥರನ್ನಾಗಿ ಮಾಡಬಾರದು. ನಿರಂಕುಶವಾಗಿ ಪ್ರವೇಶ ನಿರಾಕರಿಸಿದಾಗ ಪರಿಹಾರವನ್ನು ನೀಡಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪೀಠವು ಅವಲಂಬಿಸಿದೆ. ಭರವಸೆ ಪತ್ರವನ್ನು ಕಟ್ಟುಕಥೆ ಎಂಬ ಕಾಲೇಜಿನವರು ಹೇಳಿಕೊಂಡಿವ ವಾದವನ್ನ ನ್ಯಾಯಾಧೀಶರು ತಳ್ಳಿಹಾಕಿದರು. ಅದನ್ನು ನಕಲಿ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ನೀಡಲಾಗಿಲ್ಲ ಎಂದು ನ್ಯಾಯಪೀಠ ಗಮನಿಸಿತು.
ಇನ್ನು ವಿದ್ಯಾರ್ಥಿನಿ 5 ಕೋಟಿ ರೂ. ಪರಿಹಾರ ಮತ್ತು ಆಕೆಯ ಶಿಕ್ಷಣ ವೆಚ್ಚದ ಮರುಪಾವತಿಯನ್ನು ಕೋರಿದ್ದರು. ಆದರೆ ನ್ಯಾಯಾಲಯವು ಪರಿಹಾರವನ್ನು 15 ಲಕ್ಷ ರೂ.ಗೆ ಸೀಮಿತಗೊಳಿಸಿ, ಎರಡು ತಿಂಗಳೊಳಗೆ ಪಾವತಿಸುವಂತೆ ಕಾಲೇಜಿಗೆ ನಿರ್ದೇಶನ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
