ಗುತ್ತಿಗೆ ನೌಕರರಿಗೆ ಕೆಲಸ ಖಾಯಂ: ಸರ್ಕಾರಕ್ಕೆ ಚುರುಕು ಮುಟ್ಟಿಸಿ ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್
ಚಂಢಿಗಡ: ಸರ್ಕಾರಿ ಕಚೇರಿಗಳಲ್ಲಿ ದಿನಗೂಲಿ ಅಥವಾ ಗುತ್ತಿಗೆ ಆಧಾರದ ಮೇಲೆ ವರ್ಷಗಟ್ಟಲೆ ಬೆವರಿಳಿಸಿ ದುಡಿಯುತ್ತಿರುವ ಗುತ್ತಿಗೆ ನೌಕರರಿಗೆ ಪ್ರತಿ ದಿನವೂ “ನನ್ನ ಕೆಲಸ ಎಂದು ಖಾಯಂ ಆಗುತ್ತೋ ಏನೋ, ನನ್ನ ಭವಿಷ್ಯವೇನು?” ಎಂಬ ಆತಂಕ ಕಾಡಿಯೇ ಕಾಡುತ್ತಿರುತ್ತದೆ. ಆದರೆ ಇದೀಗ ಇಂತಹ ನೌಕರರ ಪರವಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿಂತಿದ್ದು 10 ವರ್ಷಗಳ ಕಾಲ ದುಡಿದ ಗುತ್ತಿಗೆ ನೌಕರರ ಕೆಲಸ ಖಾಯಂ ಕುರಿತು ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಹೌದು ಸರ್ಕಾರಗಳು ತಮಗೆ ಬೇಕಾದಾಗ ನಿಮ್ಮನ್ನು ಬಳಸಿಕೊಂಡು, ಕೆಲಸ ಖಾಯಂ ಮಾಡುವ ಸಮಯ ಬಂದಾಗ ಕೈತೊಳೆದುಕೊಳ್ಳುವಂತಿಲ್ಲ. ಯಾವುದೇ ನೌಕರರು 10 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರೆ, ಅಂತಹವರನ್ನು ಸರ್ಕಾರ ಕಡ್ಡಾಯವಾಗಿ ಖಾಯಂಗೊಳಿಸಲೇಬೇಕು (Regularize)” ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಸಂದೀಪ್ ಮೌದ್ಗಿಲ್ ಅವರ ಪೀಠವು ಈ ಖಡಕ್ ಆದೇಶ ನೀಡಿದ್ದು, ನೌಕರರಿಂದ ದಶಕಗಳ ಕಾಲ ಕಡಿಮೆ ಸಂಬಳಕ್ಕೆ ಕೆಲಸ ಮಾಡಿಸಿಕೊಂಡು, ವಯಸ್ಸಾದ ಮೇಲೆ ಅವರನ್ನು ಖಾಯಂ ಮಾಡಲು ನಿರಾಕರಿಸುವುದು ಘೋರ ಅನ್ಯಾಯ ಮತ್ತು ಶೋಷಣೆ ಸರ್ಕಾರಕ್ಕೆ ಚುರುಕು ಮುಟ್ಟಿಸಿದೆ.
1994ರಿಂದಲೂ ತಾತ್ಕಾಲಿಕವಾಗಿ ದುಡಿಯುತ್ತಿರುವವರನ್ನು ಇನ್ನೂ ಖಾಯಂ ಮಾಡದಿರುವುದಕ್ಕೆ ಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿರುವ ನ್ಯಾಯಪೀಠವು, ಯಾವುದೇ ನೌಕರರು 10 ವರ್ಷಗಳಿಗಿಂತ ಹೆಚ್ಚು ಕಾಲ ದುಡಿದಿದ್ದರೇ ಅಂತಹ ನೌಕರರಿಗೆ ಸರ್ಕಾರಿ ಕೆಲಸ ಖಾಯಂ ಮಾಡಲೇಬೇಕು ಎಂದು ತೀರ್ಪು ನೀಡಿದೆ.
ಈ ತೀರ್ಪು ಸದ್ಯಕ್ಕೆ ಹರಿಯಾಣ ಸರ್ಕಾರಕ್ಕೆ ನೀಡಿದ್ದರೂ, ಇದು ಇಡೀ ದೇಶದ ಕಾನೂನು ವ್ಯವಸ್ಥೆಯಲ್ಲಿ ಒಂದು ಪ್ರಬಲವಾದ ‘ನಿದರ್ಶನ’ ಆಗಿ ನಿಲ್ಲುತ್ತದೆ. ಕರ್ನಾಟಕ ಸೇರಿದಂತೆ ಭಾರತದ ಯಾವುದೇ ರಾಜ್ಯದಲ್ಲಿ, ಗುತ್ತಿಗೆ ನೌಕರರು ತಮ್ಮ ಹಕ್ಕಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದಾಗ, ಹೈಕೋರ್ಟ್ ಈಗಾಗಲೇ ಈ ರೀತಿ ತೀರ್ಪು ನೀಡಿದೆ, ನಮಗೂ ಅದೇ ನ್ಯಾಯ ಕೊಡಿ” ಎಂದು ಕೇಳಲು ಇದು ಬ್ರಹ್ಮಾಸ್ತ್ರದಂತೆ ಕೆಲಸ ಮಾಡುತ್ತದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
