08/03/2026

Law Guide Kannada

Online Guide

ದೇವಾಲಯದ ಹಣ ದೇವರಿಗೆ ಮಾತ್ರ ಸೇರಿದ್ದು: ಬೇರೆ ಚಟುವಟಿಕೆಗಳಿಗೆ ಬಳಸುವಂತಿಲ್ಲ – ಹೈಕೋರ್ಟ್

ಮದ್ರಾಸ್: ದೇವಸ್ಥಾನಗಳಿಗೆ ಭಕ್ತರು ನೀಡುವ ದೇಣಿಗೆ ಹಣ ದೇವರಿಗೆ ಮಾತ್ರ ಸೇರಿದ್ದಾಗಿದೆ. ಹೀಗಾಗಿ ಆ ಹಣವನ್ನ ಬೇರೆ ಚಟುವಟಿಕೆಗಳಿಗೆ ಬಳಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠದ ನ್ಯಾಯಮೂರ್ತಿಗಳಾದ ಎಸ್.ಎಂ.ಸುಬ್ರಮಣಿಯಂ ಮತ್ತು ಜಿ.ಅರುಲ್ ಮುರುಗನ್ ಅವರ ನ್ಯಾಯಪೀಠವು ಈ ಆದೇಶ ಹೊರಡಿಸಿದ್ದು ಭಕ್ತರು ನೀಡುವ ದೇವಾಲಯದ ನಿಧಿ ದೇವರಿಗೆ ಮಾತ್ರ ಸೇರಿದ್ದು, ಅದನ್ನು ಬೇರೆ ಯಾವುದೇ ಚಟುವಟಿಕೆಗಳಿಗೆ ಬಳಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಅಲ್ಲದೆ ಅಂತಹ ಹಣವನ್ನು ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಮಾತ್ರ ಕಟ್ಟುನಿಟ್ಟಾಗಿ ಬಳಸಬೇಕು ಎಂದು ಒತ್ತಿಹೇಳಿದ ನ್ಯಾಯಪೀಠವು 2023 ಮತ್ತು 2025 ರ ನಡುವೆ ತಮಿಳುನಾಡು ಸರ್ಕಾರ ಹೊರಡಿಸಿದ ಐದು ಸರ್ಕಾರಿ ಆದೇಶಗಳನ್ನು (ಜಿಒ) ರದ್ದುಗೊಳಿಸಿದೆ.

ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ (ಎಚ್ಆರ್ &ಸಿಇ) ಕಾಯ್ದೆ, 1959 ದೇವಾಲಯದ ಹಣವನ್ನು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಾದ “ಪೂಜೆಗಳು, ಅನ್ನದಾನ, ಯಾತ್ರಾರ್ಥಿಗಳ ಕಲ್ಯಾಣ ಮತ್ತು ಬಡವರಿಗೆ ಸಹಾಯ” ಕ್ಕಾಗಿ ಮಾತ್ರ ಖರ್ಚು ಮಾಡಲು ಅನುಮತಿಸುತ್ತದೆ ಮತ್ತು ಆದಾಯವನ್ನು ಉತ್ಪಾದಿಸುವ ಚಟುವಟಿಕೆಗಳಿಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ ತಮಿಳುನಾಡು ಸರ್ಕಾರವು ದೇವಾಲಯಗಳ ಸಂಪನ್ಮೂಲಗಳನ್ನು ದೇವಾಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿ ಮತ್ತು ಸಂಬಂಧಿತ ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಬಳಸಲು ಬದ್ಧವಾಗಿದೆ. ಸಮಾರಂಭಗಳಿಗಾಗಿ ಬಾಡಿಗೆಗೆ ನೀಡಲಾದ ಕಲ್ಯಾಣ ಮಂಟಪಗಳಂತಹ ವಾಣಿಜ್ಯ ಉದ್ಯಮಗಳಿಗೆ ದೇವಾಲಯದ ಹಣವನ್ನು ತಿರುಗಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.