06/03/2026

Law Guide Kannada

Online Guide

ಅನಧಿಕೃತ ರಜೆ ಉದ್ಯೋಗಿಯ ಹಕ್ಕಲ್ಲ: ಶ್ರದ್ಧೆ ಇಲ್ಲದ ನೌಕರನಿಗೆ ಸಹಾನುಭೂತಿ ಬೇಡ ಎಂದ ಹೈಕೋರ್ಟ್

ಬೆಂಗಳೂರು: ಪೂರ್ವಾನುಮತಿ ಇಲ್ಲದೆ ನೌಕರಿಗೆ ಅನಧಿಕೃತವಾಗಿ ರಜೆ ಹಾಕುವುದು ಉದ್ಯೋಗಿಯ ಹಕ್ಕಲ್ಲ. ಶ್ರದ್ಧೆ ಇಲ್ಲದ ನೌಕರನಿಗೆ ಸಹಾನುಭೂತಿ ತೋರಬಾರದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾದ ಹಿನ್ನೆಲೆಯಲ್ಲಿ ಟೈನಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವೆಂಕಟರಾಮಯ್ಯ ಎಂಬುವರನ್ನು ಸೇವೆಯಿಂದ ತೆಗೆದುಹಾಕಿದ್ದ ಆದೇಶ ರದ್ದುಪಡಿಸಿದ್ದ ಕಾರ್ಮಿಕ ಕೋರ್ಟ್ ಆದೇಶ ಪ್ರಶ್ನಿಸಿ ಬಿಎಂಟಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ನ್ಯಾ.ಎಂ.ಜ್ಯೋತಿ ಅವರ ಪೀಠವು, ಪೂರ್ವಾನುಮತಿ ಇಲ್ಲದೆ ನೌಕರಿಗೆ ಗೈರಾಗುವುದು ದುರ್ನಡತೆಯಾಗಿದೆ. ಶ್ರದ್ದೆಯಿಂದ ಕೆಲಸ ಮಾಡದ ಉದ್ಯೋಗಿಗೆ ಸಹಾನುಭೂತಿ ತೋರುವ ಅಗತ್ಯವಿಲ್ಲ ಎಂದಿತು.

ಪೂರ್ವಾನುಮತಿ ಮತ್ತು ರಜೆ ಪಡೆಯದೆ ವೆಂಕಟರಾಮಯ್ಯ 2016ರ ಡಿ.1ರ ನಂತರ ಅನಧಿಕೃತವಾಗಿ ಉದ್ಯೋ ಗಕ್ಕೆ ಗೈರಾಗಿದ್ದಾರೆ. ಈ ಅಪರಾಧ ಸಾಬೀತಾಗಿದ್ದು ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಸೇವೆಯಿಂದ ವಜಾ ಗೊಳಿಸಿದೆ. ಉದ್ಯೋಗ ನಿರ್ವಹಣೆ ವೇಳೆ ಸಕಾರಣವಿಲ್ಲದೆ ಉದ್ಯೋಗಕ್ಕೆ ನೌಕರ ಅನಧಿಕೃತವಾಗಿ ಗೈರಾಗಬಾರದು. ರಜೆಯಿಲ್ಲದೆ ಗೈರಾಗುವುದು ದುರ್ನಡತೆ ಆಗಲಿದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಯಾವುದೇ ಉದ್ಯೋಗಿ ಗೈರು ಹಾಜರಿಯನ್ನು ಹಕ್ಕು ಆಗಿ ಕ್ಲೇಮು ಮಾಡಲಾಗದು. ರಜೆ ಇಲ್ಲದೆ ಉದ್ಯೋಗಕ್ಕೆ ಗೈರಾಗುವುದು ಶಿಸ್ತಿನ ಉಲ್ಲಂಘನೆಯಾಗಿದ್ದು. ಇಲ್ಲಿ ಅನಧಿಕೃತವಾಗಿ ನೌಕರಿಗೆ ಗೈರಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ನೀಡಲಾಗಿದೆ ಎಂದು ಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.