ಭೂ ಕಬಳಿಕೆಗೆ ಯತ್ನ ಪ್ರಕರಣ: ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರ
ನವದೆಹಲಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆಗೆ ಯತ್ನಿಸಿದವರ ವಿರುದ್ದ ದಾಖಲಾಗಿದ್ದ ಎಫ್ ಐಆರ್ ರದ್ದುಗೊಳಿಸುವಂತೆ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಅಲ್ಲದೆ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.
100 ಕೋಟಿ ರೂ. ಮೌಲ್ಯದ 13 ಎಕರೆ ಭೂಕಬಳಿಕೆಗೆ ಯತ್ನಿಸಿದವರ ವಿರುದ್ಧ ಅವಲಹಳ್ಳಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿತ್ತು. ಸಿವಿಲ್ ಮೊಕದ್ದಮೆಗಳು ಬಾಕಿ ಇದ್ದ ಮಾತ್ರಕ್ಕೆ ಗಂಭೀರ ಅಪರಾಧಗಳ ತನಿಖೆಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಹೈಕೋರ್ಟ್, ಎಫ್ಐಆರ್ ರದ್ದುಪಡಿಸಲು ನಿರಾಕರಿಸಿತ್ತು.
ಈ ಆದೇಶ ಪ್ರಶ್ನಿಸಿ ವೆಂಕಟರಾಮ ನಾಯ್ಡು ಕೋಲ ಸುಪ್ರೀಂಕೋರ್ಟ್ ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಹಾಗೂ ಸತೀಶ್ ಚಂದ್ರ ಶರ್ಮಾ ಪೀಠವು ಈ ಅರ್ಜಿಯನ್ನ ವಜಾಗೊಳಿಸಿದೆ.
ಪ್ರಕರಣದ ವಿವರ…
ಜಮೀನಿನ ಮೂಲ ಮಾಲೀಕರಾದ ಆರ್. ರಾಧಾ (ಜಿಪಿಎ ಪಡೆದಿರುವ ವೆಂಕಟಪ್ಪ ಕೆ. ದೂರುದಾರರು) ಅವರ ಪತಿ ಎಸ್. ಕೃಷ್ಣನ್ ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಬಂಡಾಪುರ ಗ್ರಾಮದ 3 ವಿವಿಧ ಸರ್ವೆ ನಂಬರ್ಗಳಲ್ಲಿ 13 ಎಕರೆ 29 ಗುಂಟೆಗಳನ್ನು 1978ರಲ್ಲಿ ಖರೀದಿಸಿದ್ದರು. ಕೃಷ್ಣನ್ 1986ರಲ್ಲಿ ಮೃತಪಟ್ಟ ಬಳಿಕ ಎಲ್ಲ ಆಸ್ತಿಗಳಿಗೆ ಪತ್ನಿ ರಾಧಾ ಉತ್ತರಾಧಿಕಾರಿಯಾಗಿದ್ದರು. ಪತಿಯ ಮರಣದ ನಂತರ ತಮಿಳುನಾಡಿನ ತವರು ಮನೆಗೆ ತೆರಳಿದ್ದ ರಾಧಾ ಆಗಾಗ ಬೆಂಗಳೂರಿನಲ್ಲಿರುವ ಜಮೀನುಗಳಿಗೆ ಭೇಟಿ ನೀಡುತ್ತಿದ್ದರು.
ಈ ಮಧ್ಯೆ, ಕೆಲವು ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಯತ್ನಿಸಿದ್ದರು. ನಾಲ್ವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ರಾಧಾ ಹೆಸರಿನಲ್ಲಿ ಸಹಿ ಹಾಕಿದ್ದರು. ಈ ಬಗ್ಗೆ ವೆಂಕಟಪ್ಪ ಅವರು ಅವಲಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ಸತ್ವ ಗ್ರೂಪ್ ನ ಪಾಲುದಾರ ಅಶ್ವಿನ್ ಸಂಚೆಟಿ, ಬಸವೇಶ್ವರ ನಗರದ ನಿವಾಸಿ ರಾಧಾ, ಲೋಕ ಸುಂದರ್, ಧ್ರುವ ಕುಮಾರ್, ಮೀನಾಕ್ಷಿ, ಲಾವಣ್ಯ, ಡಾಲರ್ಸ್ ಕಾಲೊನಿಯ ನಿವಾಸಿ ರಾಧಾ, ವೆಂಕಟರಾಮ ನಾಯ್ಡು ಕೋಲ, ಶಿವರುದ್ರಪ್ಪ, ಶ್ರೀನಿವಾಸ್ ಆರ್. ಅಲಕಟ್ಟಿ, ಲಿಂಗರಾಜ್, ಮಧುಸೂದನ್ ಮತ್ತು ಮುನೇಂದ್ರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
