ಗಂಡನ ವಿರುದ್ದ ಅನೈತಿಕʼ ಸಂಬಂಧದ ಸುಳ್ಳು ಆರೋಪ ಮಾನಸಿಕ ಕಿರುಕುಳಕ್ಕೆ ಸಮ- ಹೈಕೋರ್ಟ್

ಕೋಲ್ಕತ್ತಾ: ಇತ್ತೀಚಿನ ದಿನಗಳಲ್ಲಿ ಪತಿ ವಿರುದ್ದ ಪತ್ನಿಯು ವರದಕ್ಷಿಣೆ ಕಿರುಕುಳ, ಅನೈತಿಕ ಸಂಬಂಧದ ಸುಳ್ಳು ಆರೋಪ ಹೊರಿಸುವ ಪ್ರಕರಣಗಳು ಹೆಚ್ಚುತ್ತಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪನ್ನ ನೀಡಿದೆ.
ಪತಿ ವಿರುದ್ದ ಪತ್ನಿಯು ಅನೈತಿಕʼ ಸಂಬಂಧದ ಸುಳ್ಳು ಆರೋಪ ಹೊರಿಸುವುದು ಮಾನಸಿಕ ಕಿರುಕುಳಕ್ಕೆ ಸಮ ಎಂದು ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ ಉದಯ್ ಕುಮಾರ್ ಅವರ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟು ಪತಿ ಸಲ್ಲಿಸಿದ್ದ ಕ್ರೌರ್ಯದ ವಿಚ್ಛೇದನ ಅರ್ಜಿಯನ್ನು ಮಾನ್ಯ ಮಾಡಿದೆ.
ಪತ್ನಿ, ತನ್ನ ಪತಿ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆಂದು ಆಧಾರ ರಹಿತವಾಗಿ ಆರೋಪಿಸುವುದು ಮಾನಸಿಕ ಕಿರುಕುಳಕ್ಕೆ ಸಮಾನ. ಪತ್ನಿಯ ಆಧಾರ ರಹಿತ ಆರೋಪಗಳಿಂದಾಗಿ ದಂಪತಿಗಳ ನಡುವಿನ ಸಂಬಂಧವು ಸರಿಪಡಿಸಲಾಗದಷ್ಟು ಹದಗೆಟ್ಟಿದೆ ಎಂದು ನ್ಯಾಯಪೀಠ ತಿಳಿಸಿದೆ.
ಪತ್ನಿಯಿಂದ ದೈಹಿಕ ಸಂಬಂಧ ಆರೋಪ ಸಂಬಂಧ ವಿಚ್ಚೇದನ ಕೋರಿ ಪತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ವೇಳೆ ಪತ್ನಿಯು ಯಾವುದೇ ಸಾಕ್ಷ್ಯವಿಲ್ಲದೆ ನನಗೆ ಮಹಿಳಾ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ನಿರಂತರವಾಗಿ ಆರೋಪಿಸಿದ್ದಾಳೆ. ಸಂಬಂಧಿಕರು ಮತ್ತು ಸಹೋದ್ಯೋಗಿಗಳ ಸಮ್ಮುಖದಲ್ಲಿ ಮಾಡಿದ ಈ ಆರೋಪಗಳು ತನಗೆ ತೀವ್ರ ಮಾನಸಿಕ ಆಘಾತ ಮತ್ತು ಸಾಮಾಜಿಕ ಮುಜುಗರವನ್ನು ಉಂಟುಮಾಡಿವೆ. ಪತ್ನಿಯು ಯಾವುದೇ ಸಮಂಜಸ ಆಧಾರವಿಲ್ಲದೆ ನನ್ನ ಮತ್ತು ಕುಟುಂಬ ಸದಸ್ಯರ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾಳೆ ಎಂದು ಪತಿ ವಾದಿಸಿದ್ದರು.
ಆದರೆ, ಕೌಟುಂಬಿಕ ನ್ಯಾಯಾಲಯವು ಪತಿಯ ಅರ್ಜಿಯನ್ನು ವಜಾ ಮಾಡಿ, ವೈವಾಹಿಕ ವಿವಾದಗಳು, ನಂಬಿಕೆ ದ್ರೋಹದ ಅನುಮಾನಗಳು, ಕ್ರೌರ್ಯಕ್ಕೆ ಕಾರಣವಾಗುವುದಿಲ್ಲ ಎಂದು ತೀರ್ಪು ನೀಡಿತ್ತು. ಈ ನಿರ್ಧಾರದಿಂದ ನೊಂದ ಪತಿ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮೇಲ್ಮನವಿ ಅರ್ಜಿ ವಿಚಾರಣೆ ನಡೆದಿದ ಕೋಲ್ಕತ್ತಾ ಹೈಕೋರ್ಟ್, ಪತಿ ಮತ್ತು ಅವರ ಕಚೇರಿ ಸಹೋದ್ಯೋಗಿಯ ನಡುವಿನ ಕೇವಲ ಸ್ನೇಹ ಮತ್ತು ಪತಿಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ನಡುವಿನ ಸಾಮೀಪ್ಯವನ್ನು (ಈ ಸಮಯದಲ್ಲಿ ಪತಿಯು ಮನೆಯಲ್ಲಿ ಪತ್ನಿಯೊಂದಿಗೆ ನಿರಂತರ ಸಂಘರ್ಷದಲ್ಲಿದ್ದರು) ಪತ್ನಿಯು ಅವರ ನಡುವಿನ ಅನೈತಿಕ ಸಂಬಂಧವೆಂದು ಗ್ರಹಿಸುವುದು ಸ್ವೀಕಾರಾರ್ಹವಲ್ಲ ಮತ್ತು ಯಾವುದೇ ಸ್ವತಂತ್ರ ಸಾಕ್ಷಿಯಿಂದ ದೃಢೀಕರಿಸದ ಹಿನ್ನೆಲೆಯಲ್ಲಿ, ಪ್ರಸ್ತುತ ಸಂದರ್ಭದಲ್ಲಿ ಆಧಾರ ರಹಿತವೆಂದು ಪರಿಗಣಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪತಿಯು ಕಚೇರಿ ಸಹೋದ್ಯೋಗಿ ಮತ್ತು ಸ್ನೇಹಿತೆಯೊಂದಿಗೆ ಅಕ್ರಮ ದೈಹಿಕ ಸಂಬಂಧ ಹೊಂದಿದ್ದಾರೆಂಬ ಆಧಾರರಹಿತ ಆರೋಪ ಮತ್ತು ಹಲವಾರು ಕ್ರಿಮಿನಲ್ ದೂರುಗಳನ್ನು ಆಧಾರರಹಿತವಾಗಿ ದಾಖಲಿಸಲಾಗಿದೆ. ಪತ್ನಿಯು ಕ್ರಿಮಿನಲ್ ದೂರುಗಳನ್ನು ಪತಿಯನ್ನು ತನ್ನ ಬಳಿಗೆ ಮರಳುವಂತೆ ಒತ್ತಾಯಿಸಲು ಒಂದು ಸಾಧನವಾಗಿ ಬಳಸುತ್ತಿದ್ದಾಳೆಂದು ಗಮನಿಸಿದ ನ್ಯಾಯಾಲಯವು, “ಪತ್ನಿಯು ತನ್ನ ಪತಿಯೊಂದಿಗೆ ವಾಸಿಸಲು ಬಯಸುವುದಾಗಿ ನಿರಂತರವಾಗಿ ಹೇಳುತ್ತಿದ್ದಾಳೆ, ಆದರೆ ಅದೇ ಸಮಯದಲ್ಲಿ ಒಂದರ ನಂತರ ಒಂದರಂತೆ ಕ್ರಿಮಿನಲ್ ದೂರುಗಳನ್ನು ದಾಖಲಿಸುತ್ತಿದ್ದಾಳೆ, ಇದು ಕೇವಲ ಕ್ರಿಮಿನಲ್ ಸ್ವರೂಪದ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು, ಆದರೆ ಸಮಾಜದಲ್ಲಿ ಮೇಲ್ಮನವಿದಾರ/ಪತಿಯ ಚಿತ್ರಣವನ್ನು ಸರಿಪಡಿಸಲಾಗದಂತೆ ಹಾನಿಗೊಳಿಸುತ್ತದೆ” ಎಂದು ನ್ಯಾಯಾಲಯವು ತಿಳಿಸಿದೆ.
ಕುಟುಂಬ ನ್ಯಾಯಾಲಯವು ಈ ನಿರ್ಣಾಯಕ ಅಂಶಗಳನ್ನು ಸರಿಯಾಗಿ ಪರಿಗಣಿಸಲು ವಿಫಲವಾಗಿದೆ ಎಂದು ನ್ಯಾಯಾಲಯವು ತೀರ್ಮಾನಿಸಿದೆ ಮತ್ತು ಪತಿಗೆ ವಿಚ್ಛೇದನವನ್ನು ನಿರಾಕರಿಸುವಾಗ, “ಎಂದಿಗೂ ಹೊಂದಾಣಿಕೆಯಾಗದ ಮತ್ತು ಭ್ರಮೆಯ ಬಂಧನಕ್ಕೆ ಬಲವಂತವಾಗಿ ಬಂಧಿಸುವುದು ಸಮರ್ಥನೀಯವಲ್ಲ ಎಂದು ಹೈಕೋರ್ಟ್ ತಿಳಿಸಿ , ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿ ವಿಚ್ಛೇದನದ ತೀರ್ಪನ್ನು ನೀಡಿತು. ಈ ಮೂಲಕ ಇಬ್ಬರ ನಡುವಿನ ವಿವಾಹವನ್ನು ರದ್ದುಗೊಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ