ಬಾಲ್ಯ ವಿವಾಹ ನಿಷೇಧ ಎಲ್ಲಾ ಧರ್ಮಗಳಿಗೂ ಅನ್ವಯ: ನೆಲದ ಕಾನೂನಿಗೆ ತಲೆಬಾಗಬೇಕು – ಹೈಕೋರ್ಟ್

ಕೇರಳ: ದೇಶದಲ್ಲಿ ನಡೆಯುವ ಬಾಲ್ಯ ವಿವಾಹಗಳ ತಡೆಗಾಗಿ ಜಾರಿ ಮಾಡಲಾಗಿರುವ ಬಾಲ್ಯ ವಿವಾಹ ನಿಷೇಧ ಕಾಯ್ದೆ – 2006ರ ನಿಯಮಗಳು ಎಲ್ಲ ಧರ್ಮಕ್ಕೂ ಅನ್ವಯವಾಗುತ್ತದೆ. ಇದು ಎಲ್ಲ ಧರ್ಮಗಳಿಗಿಂತಲೂ ಮಿಗಿಲಾಗಿದೆ. ಎಲ್ಲರೂ ಈ ನೆಲದ ಕಾನೂನಿಗೆ ತಲೆಬಾಗಬೇಕು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
2012 ರಲ್ಲಿ ನಡೆದಿದ್ದ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಬಾಲ್ಯ ವಿವಾಹ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಪತಿ ಹಾಗೂ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ನ ನ್ಯಾಯಮೂರ್ತಿ ಪಿ.ವಿ. ಕುಂಞಕೃಷ್ಣನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ ಯಾವ ಧರ್ಮವೂ ಹೊರತಾಗಿಲ್ಲ. ಪ್ರತಿಯೊಬ್ಬ ನಾಗರಿಕ ಮೊದಲು ದೇಶದ ಪ್ರಜೆಯಾಗುತ್ತಾನೆ. ಆ ಮೇಲೆಯೇ ಆತ ತನ್ನ ಧರ್ಮದ ಸದಸ್ಯನಾಗುತ್ತಾನೆ. ಆತ ಮೊದಲು ಭಾರತೀಯ. ಆ ಮೇಲೆ ಆತನ ಧರ್ಮ ಎಂದು ನ್ಯಾಯಪೀಠ ಸ್ಪಷ್ಟವಾಗಿ ತಿಳಿಸಿದೆ.
2006ರ ಬಾಲ್ಯ ವಿವಾಹ ನಿಷೇಧ ಕಾಯ್ದೆಯು ಬಾಲ್ಯ ವಿವಾಹವನ್ನು ನಿಷೇಧಿಸಿದೆ. ಮುಸ್ಲಿಂ ವೈಯಕ್ತಿಕ ಕಾನೂನಿಗಿಂತಲೂ ಈ ಕಾಯ್ದೆ ಮೇಲುಸ್ಥರದಲ್ಲಿ ಇದೆ. ಹಿಂದೂ, ಮುಸ್ಲಿಂ ಕ್ರೈಸ್ತ, ಪಾರ್ಸಿ ಸೇರಿದಂತೆ ಎಲ್ಲ ಧರ್ಮಕ್ಕೂ ಇದು ಅನ್ವಯವಾಗುತ್ತದೆ. ಪ್ರತಿ ಧರ್ಮದ ವೈಯಕ್ತಿಕ ಕಾನೂನಿಗಿಂತಲೂ ಮೊದಲು ನಾವು ಈ ನೆಲದ ಕಾನೂನಿಗೆ ತಲೆಬಾಗಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ