06/03/2026

Law Guide Kannada

Online Guide

ಚೆಕ್ ಬೌನ್ಸ್ ಕೇಸ್: ಫಿರ್ಯಾದಿಗೆ ವಹಿವಾಟಿನ ಸ್ಪಷ್ಟ ಮಾಹಿತಿ ಇಲ್ಲದಿದ್ರೆ ಪ್ರಕರಣ ಮುಂದುವರಿಕೆ ಸಾಧ್ಯವಿಲ್ಲ- ಹೈಕೋರ್ಟ್

ತಿರುವನಂತಪುರಂ: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿರ್ಯಾದಿಗೆ ವಹಿವಾಟಿನ ಸ್ಪಷ್ಟ ಮಾಹಿತಿ ಇಲ್ಲದಿದ್ದರೆ ಬೌನ್ಸ್ ಪ್ರಕರಣ ಮುಂದುವರಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ

ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಪಿ.ವಿ. ಬಾಲಕೃಷ್ಣನ್ ಅವರಿದ್ದ ನ್ಯಾಯಪೀಠ ತೀರ್ಪು ನೀಡಿದೆ. ಚೆಕ್ ಅಮಾನ್ಯ ಪ್ರಕರಣದ ವಹಿವಾಟಿನ ಬಗ್ಗೆ ನೇರ ಜ್ಞಾನವಿಲ್ಲದ ಅಧಿಕೃತ ಪ್ರತಿನಿಧಿಯಿಂದ ಚೆಕ್ ಬೌನ್ಸ್ ಪ್ರಕರಣ ಮುಂದುವರಿಸಲು ಸಾಧ್ಯವಾಗದು. ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ನೇರ ಅನುಭವ ಇಲ್ಲದೆ ಚೆಕ್ ಅಮಾನ್ಯ ಸಂಬಂಧ ದೂರು ಸಲ್ಲಿಸುವ ಕಂಪನಿಯನ್ನು ಪವರ್ ಆಫ್ ಅಟಾರ್ನಿ ಹೊಂದಿದ ವ್ಯಕ್ತಿಯ ಮೂಲಕ ಪ್ರತಿನಿಧಿಸಬಹುದು; ಆದರೆ ಆ ವ್ಯಕ್ತಿಯು ಸಂಬಂಧಿತ ವ್ಯವಹಾರವನ್ನು ಕಣ್ಣಾರೆ ಕಂಡಿರಬೇಕು ಅಥವಾ ಅದಕ್ಕೆ ಸಂಬಂಧಿಸಿದ ನೇರ ಜ್ಞಾನ ಹೊಂದಿರಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

“ಕಂಪನಿ ಒಂದು ಕಾನೂನು ವ್ಯಕ್ತಿತ್ವ (ಜ್ವುರಿಸ್ಟಿಕ್ ಪರ್ಸನ್) ಆಗಿರುವುದರಿಂದ, ಅದು ಸ್ವತಃ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ; ಅದು ಮಾನವ ಏಜೆನ್ಸಿಯ ಮೂಲಕವೇ ಕಾರ್ಯನಿರ್ವಹಿಸಬೇಕು. ಕಂಪನಿಗೆ ನೆಗೋಷಿಯಬಲ್ ಇನ್ ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138 ಅಡಿಯಲ್ಲಿ ಕಾರ್ಯಾಚರಣೆ ಆರಂಭಿಸುವ ಅರ್ಹತೆ ಇದೆ ಮತ್ತು ಅದನ್ನು ಅಧಿಕೃತ ವ್ಯಕ್ತಿಯ ಮೂಲಕ ಮಾಡಬಹುದು. ಪವರ್ ಆಫ್ ಅಟಾರ್ನಿ ಹೊಂದಿದ ವ್ಯಕ್ತಿ ಕಂಪನಿಯ ಅಧಿಕೃತ ಪ್ರತಿನಿಧಿಯಾಗಿರುವುದರಿಂದ ದೂರು ಸಲ್ಲಿಸಿ ಸಾಕ್ಷ್ಯ ನೀಡಬಹುದು. ಆದರೆ ಅವನು/ಅವಳು ವ್ಯವಹಾರವನ್ನು ಕಣ್ಣಾರೆ ಕಂಡಿರಬೇಕು ಅಥವಾ ವ್ಯವಹಾರದ ಬಗ್ಗೆ, ನೇರ ಜ್ಞಾನ ಹೊಂದಿರಬೇಕು ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರ ಆರೋಪಿಗಳು ಖಾಸಗಿ ಲಿಮಿಟೆಡ್ ಕಂಪನಿ ಮತ್ತು ಅದರ ನಿರ್ದೇಶಕರಾಗಿದ್ದು, ದೂರುದಾರರೂ ಸಹ ಒಂದು ಕಂಪನಿಯೇ ಆಗಿದ್ದಾರೆ. ಆರೋಪಿತ ಕಂಪನಿಯು ದೂರುದಾರ ಕಂಪನಿಯಿಂದ ಸಿಮೆಂಟ್ ಖರೀದಿಸಿ, ಬಾಕಿ ಮೊತ್ತ ತೀರಿಸಲು 28,71,695/- ಮೊತ್ತದ ಚೆಕ್ ನೀಡಿತ್ತು. ಆದರೆ ಚೆಕ್ ಮಂಡನೆಯಾಗುವಾಗ ಖಾತೆಯಲ್ಲಿ ಪರ್ಯಾಪ್ತ ಹಣ ಇಲ್ಲದ ಕಾರಣ ಚೆಕ್ ಅನಾದರಿತವಾಯಿತು. ನಂತರ ದೂರುದಾರ ಕಂಪನಿಯು ವರ್ಗಾವಣೀಯ ಪತ್ರಗಳ ಕಾಯ್ದೆ (ಎನ್ಐ ಆಕ್ಟ್) ಸೆಕ್ಷನ್ 138 ಅಡಿಯಲ್ಲಿ ದೂರು ದಾಖಲಿಸಿತ್ತು.

ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ದೋಷಿ ಎಂದು ಘೋಷಿಸಿ, ಆರೋಪಿತ ಕಂಪನಿಗೆ 5000/-ರೂಪಾಯಿ ದಂಡ ವಿಧಿಸಿತು. ಜೊತೆಗೆ, ವೈಯಕ್ತಿಕವಾಗಿ ಆರೋಪಿತರಾಗಿ ಸೇರಿಸಲಾದ ವ್ಯಕ್ತಿಗಳಿಗೆ ಮೂರು ತಿಂಗಳ ಸರಳ ಕಾರಾಗೃಹ ಶಿಕ್ಷೆ ಮತ್ತು ಪ್ರತಿಯೊಬ್ಬರೂ 28 ಲಕ್ಷ ಪರಿಹಾರವನ್ನು ದೂರುದಾರರಿಗೆ ಪಾವತಿಸಬೇಕೆಂದು ಆದೇಶಿಸಿತು.

ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಅಪೀಲು ಸಲ್ಲಿಸಿದ್ದರು. ಆದರೆ ಅದು ವಜಾಗೊಂಡಿತು. ನಂತರ ಅವರು ಹೈಕೋರ್ಟ್ ಗೆ ರಿವಿಷನ್ ಅರ್ಜಿ ಸಲ್ಲಿಸಿದ್ದರು. ನ್ಯಾಯಪೀಠವು ಮೇಲ್ಮನವಿಯ ಪುರಸ್ಕರಿಸಿ, ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.