ವಕೀಲರಿಗೆ ಗುಡ್ ನ್ಯೂಸ್: ವಿಮಾ ಯೋಜನೆ ಜಾರಿ, ಶುಲ್ಕ ಹೆಚ್ಚಳ ಘೋಷಿಸಿದ ಕಾನೂನು ಸಚಿವರು
ಬಾಲೋತ್ರ: ವಕೀಲರಿಗೆ ವಿಮಾ ಯೋಜನೆ, ಕೇಂದ್ರ ಸರ್ಕಾರ ಪ್ರತಿನಿಧಿಸುವ ವಕೀಲರ ಶುಲ್ಕ ಹೆಚ್ಚಳ ಮಾಡುವುದಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾದ ಅರ್ಜುನ್ ರಾಮ್ ಮೇಘ್ರಾಲ್ ಅವರು ಘೋಷಿಸಿದ್ದಾರೆ.
ರಾಜಸ್ಥಾನದ ಬಾಲೋತ್ರದಲ್ಲಿ ಆಯೋಜಿಸಲಾದ ಅಖಿಲ ಭಾರತೀಯ ಅಧಿವಕ್ತ ಪರಿಷತ್ತಿನ 17ನೇ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ರಾಲ್ ಅವರು, ಕೇಂದ್ರ ಸರ್ಕಾರವು ವಕೀಲರಿಗಾಗಿ ವೈದ್ಯಕೀಯ ವಿಮೆ ಮತ್ತು ಅಪಘಾತ ವಿಮೆಯನ್ನು ಒಳಗೊಂಡಿರುವ ವಿಮಾ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಇದಲ್ಲದೆ, ಕೇಂದ್ರ ಸರ್ಕಾರ ಹಾಗೂ ಅದರ ಸಂಸ್ಥೆಗಳ ಪ್ಯಾನೆಲ್ ವಕೀಲರ ಶುಲ್ಕವನ್ನು ಹೆಚ್ಚಿಸಲಾಗುವುದು ಹಾಗೂ ಶುಲ್ಕ ಪಾವತಿಯಲ್ಲಿ ಆಗುತ್ತಿರುವ ವಿಳಂಬದ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
“ನಿಮ್ಮ ಶುಲ್ಕವನ್ನು ಹೆಚ್ಚಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಪಾವತಿ ಆಗುತ್ತಿಲ್ಲ. ಆ ಸಮಸ್ಯೆಯನ್ನೂ ನಾವು ಪರಿಹರಿಸುತ್ತಿದ್ದೇವೆ. ನಾವು ಪುಕರಣವನ್ನು ಹೋರಾಡಿದ್ದೇವೆ, ಆದರೆ ಕೋಲ್ ಇಂಡಿಯಾ (ಉದಾಹರಣೆಗೆ) ಪಾವತಿ ಮಾಡುತ್ತಿಲ್ಲ ಎಂದು ಹಲವರು ಹೇಳುತ್ತಾರೆ. ಇದು ಸಮಸ್ಯೆಯಲ್ಲವೇ?” ಎಂದು ಅವರು ನಗುತ್ತಾ ಪ್ರಶ್ನಿಸಿದರು. “ಆ ಸಮಸ್ಯೆಯನ್ನೂ ನಾವು ಪರಿಹರಿಸುತ್ತಿದ್ದೇವೆ” ಎಂದು ಕಾನೂನು ಸಚಿವರು ಪುನರುಚ್ಛರಿಸಿದರು.
“ನಾವು ನಿಮಗಾಗಿ ವಿಮಾ ಯೋಜನೆಯನ್ನು ತರುತಿದ್ದೇವೆ. ಇದರಲ್ಲಿ ವೈದ್ಯಕೀಯ ವಿಮೆ ಮತ್ತು ಗುಂಪು ವಿಮೆ ಎರಡೂ ಇರಲಿವೆ. ಅಪಘಾತವೂ ಇದರೊಳಗೆ ಒಳಗೊಳ್ಳಲಿದೆ. ವಕೀಲರ ರಕ್ಷಣಾ ಕಾಯ್ದೆ ಕಾನೂನು ಆಯೋಗದ ಮುಂದೆ ಬಾಕಿಯಿದೆ. ಉಳಿದ ಎಲ್ಲಾ ಸಮಸ್ಯೆಗಳನ್ನೂ ಸಹ ಪರಿಹರಿಸಲಾಗುವುದು” ಎಂದು ವಕೀಲರ ಸಭೆಗೆ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ರಾಲ್ ಭರವಸೆ ನೀಡಿದರು.
ಕಾನೂನು ಸಚಿವರು ಭಾರತೀಯ ಉತ್ತರಾಧಿಕಾರ ಕಾಯ್ದೆಗೆ ಇತ್ತೀಚೆಗೆ ತಂದಿರುವ ತಿದ್ದುಪಡಿ ಕುರಿತು ಮಾತನಾಡಿ, ಸಂಸತ್ತಿನಲ್ಲಿ ನಾವು ಆತುರದಲ್ಲಿ ಕಾನೂನು ತಂದಿದ್ದೇವೆ ಎಂದು ಹೇಳಲಾಯಿತು. ಆದರೆ ಅದು ಸತ್ಯವಲ್ಲ. ಪ್ರಧಾನಮಂತ್ರಿ ಮೋದಿಜಿಯವರು ಪ್ರಧಾನಿಯಾದ ನಂತರದಿಂದಲೇ ‘ಈಸ್ ಆಫ್ ಲಿವಿಂಗ್’ ಉಪಕ್ರಮದ ಭಾಗವಾಗಿ ಅನಗತ್ಯವಾದ ಕಾನೂನುಗಳನ್ನು ರದ್ದುಪಡಿಸಬೇಕೆಂದು ಹೇಳುತ್ತಾ ಬಂದಿದ್ಧಾರೆ. ಅಗತ್ಯವಿಲ್ಲದಿದ್ದರೂ ಅಸ್ತಿತ್ವದಲ್ಲಿದ್ದ 562 ಕಾನೂನುಗಳನ್ನು ನಾವು ಈಗಾಗಲೇ ರದ್ದುಪಡಿಸಿದ್ದೇವೆ. ಈಗ ಇನ್ನೂ 71 ಕಾನೂನುಗಳನ್ನು ರದ್ದು ಪಡಿಸಿದ್ದೇವೆ” ಎಂದರು.
ಸಮಾರಂಭದಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಜಯ್ ಬಿಯ್ ಅವರು ಭಾಷಾ ಪ್ರಾಂತೀಯತೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಪ್ರವೃತ್ತಿಗಳು ರಾಷ್ಟ್ರಕ್ಕೆ ಅಪಾಯಕಾರಿ. ಇಂತಹ ಮನೋಭಾವನೆಗಳನ್ನು ನಿರ್ಮೂಲನೆ ಮಾಡುವಲ್ಲಿ ವಕೀಲರು ತಮ್ಮ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರು, ನ್ಯಾಯಾಲಯಗಳ ಮೂಲಕ ಮೂಲಭೂತ ಹಕ್ಕುಗಳ ಜಾರಿಗೆ ಬೇಡಿಕೆ ಇಡುವ ಯಾವುದೇ ವ್ಯಕ್ತಿ ಮೊದಲು ಭಾರತೀಯ ಸಂವಿಧಾನದಲ್ಲಿ ನಿಗದಿಪಡಿಸಿರುವ ಮೂಲಭೂತ ಕರ್ತವ್ಯಗಳ ಪಾಲನೆಯನ್ನೂ ತೋರಿಸಬೇಕು ಎಂದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
