ಸಾಲ ಮರುಪಾವತಿಗೆ ವಿಫಲ: ಸೈಟ್ ಹರಾಜಿಗೆ ನಿರ್ಬಂಧ ವಿಧಿಸಲಾಗದು – ಹೈಕೋರ್ಟ್

ಬೆಂಗಳೂರು: ನಿವೇಶನದಲ್ಲಿ ಮನೆ ನಿರ್ಮಾಣಕ್ಕಾಗಿ ಸಾಲ ಪಡೆದು ಸಾಲ ಮರುಪಾವತಿಸಲು ವಿಫಲರಾದರೇ ಆಸ್ತಿಯನ್ನು ಹರಾಜು ಹಾಕುವುದಕ್ಕೆ ಬ್ಯಾಂಕ್ ಗೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ನಿಯಮ 1969ರ ಅಡಿ ಪೂರ್ಣಿಮಾ ಎಂಬವರಿಗೆ ಆಶ್ರಯ ಯೋಜನೆಯಡಿ ರಾಜ್ಯ ಸರ್ಕಾರ ಉಚಿತ ನಿವೇಶನ ಮಂಜೂರು ಮಾಡಿತ್ತು. ನಿವೇಶನದಲ್ಲಿ ಮನೆ ನಿರ್ಮಾಣಕ್ಕಾಗಿ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ ನಲ್ಲಿ ಈ ನಿವೇಶವನ ಅಡಮಾನವಿಟ್ಟು ಸಾಲ ಪಡೆದಿದ್ದರು. ಆದರೆ, ಸಾಲ ಮರುಪಾವತಿಸುವಲ್ಲಿ ಪೂರ್ಣಿಮಾ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಡಮಾನ ಇಟ್ಟ ಆಸ್ತಿಯನ್ನು ಮಾರಾಟಕ್ಕೆ ತರುವ ಮೂಲಕ ಅಡಮಾನ ಜಾರಿಗೊಳಿಸಲು ಪ್ರಯತ್ನಿಸಿತ್ತು. ಇದಕ್ಕೆ ಬ್ರಹ್ಮಾವರ ತಹಸೀಲ್ದಾರ್ ನಿರಾಕರಿಸಿ ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠವು, ಅರ್ಜಿದಾರ ಬ್ಯಾಂಕ್ ಗೆ ತಹಶೀಲ್ದಾರ್ ಅವರು 2023ರ ಜುಲೈ 18ರಂದು ನೀಡಿದ್ದ ಹಿಂಬರಹ ರದ್ದುಪಡಿಸಿದೆ. ಜೊತೆಗೆ, ಅಡಮಾನ ಜಾರಿಗೊಳಿಸುವ ಸಂಬಂಧಪಟ್ಟ ಆಸ್ತಿ ಮಾರಾಟ ಮಾಡಲು ಅರ್ಜಿದಾರರಿಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿ ಆದೇಶಿಸಿದೆ.
ಹಾಗೆಯೇ ಆಶ್ರಯ ಯೋಜನೆಯಲ್ಲಿ ಮಂಜೂರಾದ ನಿವೇಶನದಲ್ಲಿ ಮನೆ ನಿರ್ಮಾಣಕ್ಕೆ ಅಡವಿಟ್ಟು ಸಾಲ ಪಡೆಯಲು ಸರ್ಕಾರ ಅನುಮತಿ ನೀಡಿದಾಗ ಆ ಸಾಲ ಮರುಪಾವತಿ ಮಾಡಲು ವಿಫಲವಾದಲ್ಲಿ, ಆಸ್ತಿಯನ್ನು ಹರಾಜು ಹಾಕುವುದಕ್ಕೆ ಸಾಲ ನೀಡಿದ ಬ್ಯಾಂಕ್ ಗೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಆಶ್ರಯ ಯೋಜನೆಯಲ್ಲಿಮಂಜೂರಾದ ನಿವೇಶನ 25 ವರ್ಷಗಳ ಕಾಲ ಪರಾಭಾರೆ ಮಾಡಬಾರದು ಎಂಬ ಷರತ್ತು ವಿಧಿಸಲಾಗಿದೆ. ಆದರೆ, ಆ ನಿವೇಶನದಲ್ಲಿ ಮನೆ ನಿರ್ಮಾಣಕ್ಕಾಗಿ ಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಸಾಲ ಮರುಪಾವತಿ ಮಾಡದಿದ್ದಲ್ಲಿ ಹರಾಜು ಹಾಕಬಾರದು ಎಂದು ನಿರ್ಬಂಧಿಸುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದಲ್ಲಿ ಫಲಾನುಭವಿಯಾಗಿರುವವರು ತಮಗೆ ಮಂಜೂರಾದ ನಿವೇಶನ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದಾಗಿ ಸರ್ಕಾರ ಅಭಿಪ್ರಾಯಪಟ್ಟಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು. ಹಾಗೂ ಅವರ ಕುಟುಂಬವನ್ನು ಕಪ್ಪು ಪಟ್ಟಿಗೆ ಸೇರಿಸಿ ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆದುಕೊಳ್ಳದಂತೆ ಕಾನೂನುಗಳನ್ನು ಮಾಡುವುದಕ್ಕೆ ಬ್ಯಾಂಕ್ ಸ್ವತಂತ್ರವಾಗಿರಲಿದೆ. ನಿವೇಶನ ಅಡಮಾನವಿಟ್ಟುಕೊಂಡ ಸಂಸ್ಥೆ ಅಡಮಾನ ಜಾರಿಗೊಳಿಸುವ ಆಸ್ತಿ ಮಾರಾಟ ಮಾಡುವುದನ್ನು ಮತ್ತು ನಿಗದಿತ ಅವಧಿಯೊಳಗೆ ತನ್ನ ಸಾಲ ವಸೂಲಿ ಮಾಡುವುದನ್ನು ಕಾನೂನಿನಲ್ಲಿ ನಿಷೇಧಿಸುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ