ಹೈಕೋರ್ಟ್ ಜಡ್ಜ್ ಹೆಸರು ಬಳಸಿ ನಕಲಿ ನೇಮಕಾತಿ ಪತ್ರ ನೀಡಿ ವಂಚನೆ: ಆರೋಪಿ ಅರೆಸ್ಟ್
ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಹೆಸರನ್ನ ಬಳಸಿಕೊಂಡು ನಕಲಿ ನೇಮಕಾತಿ ಮಾಡುವುದಾಗಿ ಲಕ್ಷಾಂತರ ರೂ. ಹಣ ಪಡೆದು ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಎರಡನೇ ಆರೋಪಿ ಮಹಿಳೆಯನ್ನ ಬಂಧಿಸಿದ್ದಾರೆ.
ಕೊಪ್ಪಳ ಮೂಲದ ವಿಜಯಾ ಹಿರೇಮಠ ಬಂಧಿತ ಆರೋಪಿ. ಹೈಕೋರ್ಟ್ ನ್ಯಾಯಮೂರ್ತಿ ಹೆಸರಿನಲ್ಲಿ ಇತ್ತೀಚೆಗೆ ಏಳು ಮಂದಿ ಉದ್ಯೋಗ ಆಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ಆರೋಪದಡಿ ಈಗಾಗಲೇ ಸಿದ್ದಲಿಂಗಯ್ಯ ಹಿರೇಮರ್ ಎಂಬ ಆರೋಪಿಯನ್ನ ಬಂಧಿಸಲಾಗಿತ್ತು. ಇದೀಗ ಮತ್ತೊಬ್ಬ ಆರೋಪಿ ವಿಜಯಾ ಹಿರೇಮಠ ಎಂಬುವವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಮಹಿಳೆ ಸುಮಾರು ಏಳು ಮಂದಿಗೆ 48 ಲಕ್ಷ ರೂ. ವಂಚಿಸಿದ್ದರು. 2024ರ ಸೆಪ್ಟೆಂಬರ್ 3ರಂದು ಸಿಸಿಬಿ ಪೊಲೀಸ್ ಠಾಣೆಯಲ್ಲಿ ಆರ್. ಟಿ. ನಗರ ನಿವಾಸಿ ಅಬ್ದುಲ್ ರಜಾಕ್ ಅವರು ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೊದಲ ಆರೋಪಿ ಸಿದ್ದಲಿಂಗಯ್ಯ ಹಿರೇಮಠನನ್ನು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಎರಡನೇ ಆರೋಪಿ ವಿಜಯಾ ಹಿರೇಮಠ ಇದೀಗ ಅಂದರ್ ಆಗಿದ್ದಾರೆ.
ಸಿದ್ದಲಿಂಗಯ್ಯ ಹಿರೇಮರ್ನ ವಂಚನೆ ಕೃತ್ಯಕ್ಕೆ ವಿಜಯಾ ಸಹಕಾರ ನೀಡುತ್ತಿದ್ದರು. ಈಕೆ ಕೊಪ್ಪಳ ನಗರಸಭೆ ಮಾಜಿ ಸದಸ್ಯೆ ಎನ್ನಲಾಗಿದೆ. ಕೊಪ್ಪಳದ ಸಿದ್ದಲಿಂಗಯ್ಯ ಹಿರೇಮಠ, ನಗರದ ಸಹಕಾರ ನಗರದಲ್ಲಿ ವಾಸಿಸುತ್ತಿದ್ದರು. ತನಗೆ ನ್ಯಾಯಮೂರ್ತಿಗಳ ನೇರ ಪರಿಚಯವಿದ್ದು, ನೇಮಕಾತಿ ಮೂಲಕ ನ್ಯಾಯಾಲಯದಲ್ಲಿ ಕೆಳ ಹಂತದ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಉದ್ಯೋಗ ಆಕಾಂಕ್ಷಿಗಳಿಂದ ಹಣ ಪಡೆದು ವಂಚಿಸಿದ್ದರು ಎಂದು ಆರೋಪಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
