05/03/2026

Law Guide Kannada

Online Guide

ಹೊರಗುತ್ತಿಗೆ ಕಾರ್ಮಿಕರಿಗೆ ಗುಡ್ ನ್ಯೂಸ್ : 13 ಸಾವಿರಕ್ಕೂ ಹೆಚ್ಚು ನೌಕರರ ಖಾಯಂ ನೇಮಕಾತಿಗೆ ಸರ್ಕಾರ ಚಿಂತನೆ

ಬೆಂಗಳೂರು: ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು , ಇಂಧನ ಇಲಾಖೆಯ13 ಸಾವಿರಕ್ಕೂ ಹೆಚ್ಚು ನೌಕರರ ಖಾಯಂ ನೇಮಕಾತಿಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಹೌದು, ಇಂಧನ ಇಲಾಖೆಯ ಸ್ವಾಮ್ಯಕ್ಕೊಳಪಟ್ಟಿರುವ ಕೆಪಿಟಿಸಿಎಲ್ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ (ಎಸ್ಕಾಂ) 15-20 ವರ್ಷಗಳಿಂದ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 13 ಸಾವಿರಕ್ಕೂ ಹೆಚ್ಚು ನೌಕರರ ಸೇವೆಯ ಕಾಯಂ ಅಥವಾ ಒಳ ಗುತ್ತಿಗೆಯಡಿ ನೇಮಕಾತಿಗೆ ಸಿದ್ಧತೆ ನಡೆದಿದೆ. ಇಂಧನ, ಆರೋಗ್ಯ, ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಕೆಲವು ಇಲಾಖೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಗುತ್ತಿಗೆ ನೌಕರರಿದ್ದಾರೆ. ರಾಜ್ಯ ಸರ್ಕಾರ ಅನುಮೋದನೆ ನೀಡಿದ ನಂತರ ಕೆಪಿಟಿಸಿಎಲ್ ನಿರ್ದೇಶಕರ ಮಂಡಳಿ ಸೂಕ್ತ ಆದೇಶ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ ಕೆಪಿಟಿಸಿಎಲ್ ಮತ್ತು ವಿವಿಧ ಎಸ್ಕಾಂಗಳಲ್ಲಿರುವ ಸ್ಟೇಷನ್ ಅಪರೇಟರ್, ಸ್ಟೇಷನ್ ಸಹಾಯಕ, ಗ್ಯಾಂಗ್ ಮನ್, ಮೀಟರ್ ರೀಡರ್, ಚಾಲಕರಿಗೆ ಸೇವಾ ಭದ್ರತೆ ಒದಗಿಸುವ ಉದ್ದೇಶದಿಂದ ‘ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಹೊರಗುತ್ತಿಗೆ ಸಿಬ್ಬಂದಿಯ ಕ್ರಮಬದ್ದ ಗೊಳಿಸುವಿಕೆ) ಆದೇಶ- 2025’ರ ಕರಡು ಸಿದ್ದಗೊಂಡಿದೆ.

‘ಹೊರಗುತ್ತಿಗೆ ಉದ್ಯೋಗಿಗಳ, ನ್ನು ಶೋಷಣೆಗೆ ಒಳಪಡಿಸಬಾರದು. ಆರ್ಥಿಕ ದುಃಸ್ಥಿತಿ ಅಥವಾ ಹುದ್ದೆ ಖಾಲಿ ಇಲ್ಲ ಎಂಬ ಕಾರಣ ನೀಡಿ ದೀರ್ಘ ಅವಧಿಗೆ ಸಕ್ರಮಾತಿ ನಿರಾಕರಿಸಬಾರದು’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪಿನ ಅನ್ವಯ ಇದೀಗ ಹೊರಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಲು ಅಥವಾ ಒಳ ಗುತ್ತಿಗೆಗೆ ಒಳಪಡಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಅಪಾಯಕಾರಿ ಕೆಲಸಗಳನ್ನು ಮಾಡುತ್ತಿರುವ ಸ್ಟೇಷನ್ ಆಪರೇಟರ್ ಸ್ಟೇಷನ್ ಸಹಾಯಕ, ಗ್ಯಾಂಗ್ ಮನ್, ಮೀಟರ್ ರೀಡರ್ ಮತ್ತು ಚಾಲಕರು ಮತ್ತು ಕನಿಷ್ಠ ಐದು ವರ್ಷ ನಿರಂತರವಾಗಿ ಕೆಲಸದಲ್ಲಿದ್ದು ಏಕಾಏಕಿ ವಜಾಗೊಂಡವರ ಸೇವೆ ಕಾಯಂಗೊಳಿಸುವ ಪ್ರಸ್ತಾವ ಈ ಕರಡು ಅಧಿಸೂಚನೆಯಲ್ಲಿದೆ.

ಖಾಯಮಾತಿಗೆ ಷರತ್ತುಗಳೇನು…
ಕಾರ್ಮಿಕರ ಹೊರಗುತ್ತಿಗೆ ಕಾಯಂಗೊಳಿಸಲು ಕೆಲ ಷರತ್ತುಗಳನ್ನು ಪ್ರಸ್ತಾಪಿಸಲಾಗಿದೆ. ಕಾಯಂಗೆ ಪರಿಗಣಿಸುವ ಹೊರಗುತ್ತಿಗೆ ಸಿಬ್ಬಂದಿ ವಯಸ್ಸು 58 ವರ್ಷ ಮೀರಬಾರದು. ಅಂತಹ ಸಿಬ್ಬಂದಿ ನೇಮಕಾತಿ ಪ್ರಾಧಿಕಾರದ ಅಡಿಯಲ್ಲಿ ನಿರಂತರ ಅವಧಿಯಿಂದ ಉದ್ಯೋಗದಲ್ಲಿರಬೇಕು. ಹುದ್ದೆಗಳ ವರ್ಗಗಳು, ಶೈಕ್ಷಣಿಕ ಅರ್ಹತೆ ಮತ್ತು ವೇತನ ಶ್ರೇಣಿಯನ್ನು ನಿಗಮ ಅಥವಾ ಸಂಬಂಧಿತ ಕಂಪನಿಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿರ್ದಿಷ್ಟ ಪಡಿಸಿದಂತೆ ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು. ಅಂತಹ ಸಿಬ್ಬಂದಿಯನ್ನು ಅವರು ಈಗಿರುವ ಸ್ಥಳದಲ್ಲಿಯೇ ‘ಇರುವಂತೆಯೇ’ ಕಾಯಂಗೊಳಿಸಲಾಗುವುದು ಎಂದೂ ಕರಡಿನಲ್ಲಿದೆ

ಹೀಗೆ ಕಾಯಂಗೊಂಡ ಹೊರಗುತ್ತಿಗೆ ಸಿಬ್ಬಂದಿಗೆ ಕಾಲಕ್ಕೆ ಕಾಲಕ್ಕೆ ಹೊರಡಿಸುವ ಆದೇಶಗಳ ಪ್ರಕಾರ ರಜೆ ಮತ್ತು ಇತರ ಸೇವಾ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಕಾಯಂಗೊಳಿಸುವ ಮೊದಲು ಹೊರಗುತ್ತಿಗೆ ಆಧಾರದಲ್ಲಿ ಮಾಡಿದ ಕೆಲಸಕ್ಕೆ ಯಾವುದೇ ಪ್ರಯೋಜನಗಳನ್ನು ಪಡೆಯಲು ಅವಕಾಶ ಇಲ್ಲ ಎಂದೂ ಸ್ಪಷ್ಟ ಪಡಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.