ನಿರೀಕ್ಷಣಾ ಜಾಮೀನಿಗೆ ನೇರವಾಗಿ ಹೈಕೋರ್ಟ್ ಮೆಟ್ಟಿಲೇರುವಂತಿಲ್ಲ – ಸುಪ್ರೀಂಗೆ ವರದಿ, ಅಮಿಕಸ್ ಕ್ಯೂರಿಗಳ ಶಿಫಾರಸು
ನವದೆಹಲಿ: ನಿರೀಕ್ಷಣಾ ಜಾಮೀನು ಕೋರಿ ನೇರವಾಗಿ ಹೈಕೋರ್ಟ್ ಮೆಟ್ಟಿಲೇರುವಂತಿಲ್ಲ. ಕೇವಲ ನಾಲ್ಕು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ಸಂಪರ್ಕಿಸಬೇಕು ಎಂದು ಸುಪ್ರೀಂ ಕೋರ್ಟ್ ನೇಮಿಸಿದ ಅಮಿಕಸ್ ಕ್ಯೂರಿಗಳು ಅಭಿಪ್ರಾಯಪಟ್ಟಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಆಲಿಸಲು ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್ಗೆ ಏಕಕಾಲೀನ ಅಧಿಕಾರ ವ್ಯಾಪ್ತಿ ಇದ್ದರೂ, ಮೊದಲಿಗೆ ಸೆಷನ್ಸ್ ನ್ಯಾಯಾಲಯವನ್ನೇ ಸಂಪರ್ಕಿಸಬೇಕು. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ನಿರೀಕ್ಷಣಾ ಜಾಮೀನಿಗೆ ನೇರವಾಗಿ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಎಂದು ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಮತ್ತು ವಕೀಲ ಜಿ. ಅರುಧ್ರ ರಾವ್ ಅವರನ್ನೊಳಗೊಂಡ ಅಮಿಕಸ್ ಕ್ಯೂರಿ ಶಿಫಾರಸು ಮಾಡಿದೆ.
ಮೊಹಮ್ಮದ್ ರಸಲ್ ಸಿ. ಮತ್ತು ಕೇರಳ ರಾಜ್ಯ ನಡುವಣ ಪ್ರಕರಣದಲ್ಲಿ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಪೀಠಕ್ಕೆ ಈ ಕುರಿತ ವರದಿಯನ್ನು ಸಲ್ಲಿಸಲಾಗಿದೆ.
ಸೆಷನ್ಸ್ ನ್ಯಾಯಾಲಯವನ್ನು ಬೈಪಾಸ್ ಮಾಡಿ ನೇರವಾಗಿ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಸ್ವೀಕರಿಸುವ ಹೈಕೋರ್ಟ್ಗಳ, ವಿಶೇಷವಾಗಿ ಕೇರಳ ಹೈಕೋರ್ಟ್ನ, ಅಭ್ಯಾಸವನ್ನು ಸುಪ್ರೀಂ ಕೋರ್ಟ್ ಈ ಹಿಂದೆ ಅನುಮೋದಿಸಿರಲಿಲ್ಲ. “ತಾತ್ವಿಕವಾಗಿ, ಮೊದಲು ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಬೇಕು” ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯ, ಈ ವಿಷಯವನ್ನು ಪರಿಗಣಿಸಲು ಅಮಿಕಸ್ ಕ್ಯೂರಿಗಳನ್ನು ನೇಮಿಸಿತ್ತು.
ಇದೀಗ ನ್ಯಾಯಪೀಠಕ್ಕೆ ಅಮಿಕಸ್ ಕ್ಯೂರಿಗಳು ವರದಿ ಸಲ್ಲಿಸಿದ್ದು, ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 438 (ಈಗ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 482) ಅಡಿಯಲ್ಲಿ ನಿರೀಕ್ಷಣಾ ಜಾಮೀನು ನೀಡಲು ಸೆಷನ್ಸ್ ನ್ಯಾಯಾಲಯಗಳು ಮತ್ತು ಹೈಕೋರ್ಟ್ಗಳಿಗೆ ಸಮಾನ ಅಧಿಕಾರವಿದ್ದರೂ, ಸೆಷನ್ಸ್ ನ್ಯಾಯಾಲಯವನ್ನೇ ಪ್ರಾಥಮಿಕ ವೇದಿಕೆಯಾಗಿ ಪರಿಗಣಿಸಬೇಕು ಎಂದು ವರದಿಯಲ್ಲಿ ಅಮಿಕಸ್ ಕ್ಯೂರಿಗಳು ಉಲ್ಲೇಖಿಸಿದ್ದಾರೆ.
ನೇರವಾಗಿ ಹೈಕೋರ್ಟ್ ಅನ್ನು ಸಂಪರ್ಕಿಸಲು ವರದಿಯು ನಾಲ್ಕು ಅಸಾಧಾರಣ ಸಂದರ್ಭಗಳನ್ನು ಪಟ್ಟಿಮಾಡಿದ್ದು ಅವುಗಳು ಈ ಕೆಳಕಂಡಂತಿದೆ
ಸಂಬಂಧಪಟ್ಟ ಸೆಷನ್ಸ್ ನ್ಯಾಯಾಲಯದ ವ್ಯಾಪ್ತಿಯಲ್ಲಿ ಆರೋಪಿಯು ವಾಸಿಸುತ್ತಿಲ್ಲದಿದ್ದಾಗ.
ಪ್ರಕರಣವನ್ನು ವಿಶೇಷ ಕಾನೂನಿನ ಅಡಿಯಲ್ಲಿ ಹೆಚ್ಚುವರಿ ಸೆಷನ್ಸ್/ಸೆಷನ್ಸ್ ನ್ಯಾಯಾಧೀಶರ ಶ್ರೇಣಿಯ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸುತ್ತಿರುವಾಗ.
ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ, ಮುಷ್ಕರ, ಅಥವಾ ವ್ಯಕ್ತಿ ಮತ್ತು ಅವರ ಕುಟುಂಬದ ವಿರುದ್ಧ ದ್ವೇಷದ ವಾತಾವರಣದಿಂದಾಗಿ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ.
ವೈದ್ಯಕೀಯ ಅಥವಾ ಇತರ ತುರ್ತು ಪರಿಸ್ಥಿತಿಗಳಿಂದಾಗಿ ಆರೋಪಿಯು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದಾಗ ನಿರೀಕ್ಷಣ ಜಾಮೀನಿಗೆ ನೇರವಾಗಿ ಹೈಕೋರ್ಟ್ ಸಂಪರ್ಕಿಸಬಹುದು
“ನ್ಯಾಯದ ಪ್ರವೇಶವನ್ನು ಖಾತರಿಪಡಿಸುವುದು ಪ್ರಜಾಪ್ರಭುತ್ವದ ಮೂಲಾಧಾರ” ಎಂದು ಹೇಳಿದ ಅಮಿಕಸ್ ಕ್ಯೂರಿಗಳು, ರಾಜಧಾನಿ ನಗರಗಳಲ್ಲಿರುವ ಹೈಕೋರ್ಟ್ ಗಳಲ್ಲಿ ಪರಿಹಾರವನ್ನು ಕೇಂದ್ರೀಕರಿಸುವ ಬದಲು, ನ್ಯಾಯದ ಪ್ರವೇಶವನ್ನು ಹೆಚ್ಚಿಸುವ ಚೌಕಟ್ಟಿನ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಮೊದಲು ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸುವುದರಿಂದ ಅರ್ಜಿದಾರರಿಗೆ ಎರಡು ಅವಕಾಶಗಳು ಸಿಗುತ್ತವೆ. ಒಂದು ಸೆಷನ್ಸ್ ನ್ಯಾಯಾಲಯದಲ್ಲಿ ಮತ್ತು ಇನ್ನೊಂದು ಹೈಕೋರ್ಟ್ನಲ್ಲಿ. ಇದರಿಂದ ಹೈಕೋರ್ಟ್ ಗಳಿಗೆ ಸೆಷನ್ಸ್ ನ್ಯಾಯಾಲಯದ ತೀರ್ಮಾನಗಳ ಲಾಭವೂ ದೊರೆಯುತ್ತದೆ. ಇದೇ ವೇಳೆ, ಶಾಸಕಾಂಗವು ನೀಡಿರುವ ಏಕಕಾಲೀನ ಅಧಿಕಾರ ವ್ಯಾಪ್ತಿಯನ್ನು ನ್ಯಾಯಾಂಗವು ಮೊಟಕುಗೊಳಿಸಲು ಪ್ರಯತ್ನಿಸಬಾರದು, ಏಕೆಂದರೆ ಅದು “ನ್ಯಾಯಾಂಗೀಯ ಶಾಸನ”ವಾಗುತ್ತದೆ ಎಂದು ವರದಿಯು ಎಚ್ಚರಿಸಿದೆ.
ಅಸಾಧಾರಣ ಪ್ರಕರಣಗಳಲ್ಲಿ ನೇರವಾಗಿ ಅರ್ಜಿಗಳನ್ನು ಸ್ವೀಕರಿಸುವ ಅಧಿಕಾರವನ್ನು ಉಳಿಸಿಕೊಂಡು, ಉಳಿದ ಪ್ರಕರಣಗಳಲ್ಲಿ ಸೆಷನ್ಸ್ ನ್ಯಾಯಾಲಯವನ್ನು ಮೊದಲು ಸಂಪರ್ಕಿಸಲು ಪ್ರೋತ್ಸಾಹಿಸುವಂತೆ ಹೈಕೋರ್ಟ್ಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಬಹುದು ಎಂದು ಶಿಫಾರಸು ಮಾಡಲಾಗಿದೆ. ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠವು ನವೆಂಬರ್ 12ಕ್ಕೆ ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
