ಅನ್ಯಜಾತಿ ದಂಪತಿ ಡಿವೋರ್ಸ್ ಪಡೆದ್ರೆ ಯಾವ ಜಾತಿಗೆ ಮಕ್ಕಳು..? ಸುಪ್ರೀಂಕೋರ್ಟ್ ಕೊಟ್ಟ ಮಹತ್ವದ ತೀರ್ಪಿದು

ನವದೆಹಲಿ: ಪರಸ್ಪರ ಒಪ್ಪಿ ಅನ್ಯಜಾತಿಯ ಮದುವೆಯಾಗಿ ನಂತರ ದಂಪತಿಗಳು ನಾನಾ ಕಾರಣಗಳಿಂದ ವಿಚ್ಚೇದನ ಪಡೆದರೇ ಅವರ ಮಕ್ಕಳು ಯಾವ ಜಾತಿಗೆ ಸೇರುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದಲಿತೇತರ ಮಹಿಳೆ ಮತ್ತು ದಲಿತ ಪುರುಷನ ನಡುವಿನ ಮದುವೆಯನ್ನು ಸಂವಿಧಾನದ 142ನೇ ವಿಧಿಯಡಿ ತನ್ನ ವಿಶೇಷಾಧಿಕಾರವನ್ನು ಬಳಸಿಕೊಂಡು ರದ್ದುಗೊಳಿಸಿರುವ ಸುಪ್ರೀಂಕೋರ್ಟ್ , ಕಳೆದ ಆರು ವರ್ಷಗಳಿಂದ ತಾಯಿಯೊಂದಿಗೆ ಇರುವ ಅಪ್ರಾಪ್ತ ಮಕ್ಕಳಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುವಂತೆ ಪತಿಗೆ ಆದೇಶ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಈ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಜೂಹಿ ಪೋರಿಯಾ ನೀ ಜವಾಲ್ಕರ್ ಮತ್ತು ಪ್ರದೀಪ್ ಪೋರಿಯಾ ದಂಪತಿಗೆ ಕೋರ್ಟ್ ವಿಚ್ಚೇದನ ಮಂಜೂರು ಮಾಡಿದೆ. ದಲಿತೇತರ ಮಹಿಳೆಯೊಬ್ಬಳು ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಮದುವೆಯಾದ ಮಾತ್ರಕ್ಕೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಲು ಸಾಧ್ಯವಿಲ್ಲವಾದರೂ ಪರಿಶಿಷ್ಟ ಜಾತಿಯ ಪುರುಷನಿಗೆ ಜನಿಸಿದ ಅವರ ಮಕ್ಕಳು ಎಸ್ ಸಿ ಟ್ಯಾಗ್ ಗೆ ಅರ್ಹರಾಗಿರುತ್ತಾರೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವರ್ಷದ ಮಗ ಮತ್ತು 6 ವರ್ಷದ ಮಗಳು ಕಳೆದ ಆರು ವರ್ಷಗಳಿಂದ ರಾಯ್ಪುರದ ತನ್ನ ಹೆತ್ತವರ ಮನೆಯಲ್ಲಿ ದಲಿತೇತರ ಮಹಿಳೆಯೊಂದಿಗೆ ವಾಸಿಸುತ್ತಿದ್ದಾರೆ. ಸದ್ಯ ದಂಪತಿಗೆ ಸುಪ್ರೀಂ ಕೋರ್ಟ್ ವಿಚ್ಛೇದನ ಮಂಜೂರು ಮಾಡಿದ್ದು, ಮಕ್ಕಳು ದಲಿತೇತರ ಕುಟುಂಬದಲ್ಲಿಯೇ ಇರಲಿದ್ದಾರೆ. ಆದರೂ ಸಹ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಉದ್ಯೋಗದ ಉದ್ದೇಶಕ್ಕಾಗಿ ಅವರನ್ನು ಪರಿಶಿಷ್ಟ ಜಾತಿಗೆ ಸೇರಿದವರೆಂದೇ ಪರಿಗಣಿಸಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಆರು ತಿಂಗಳೊಳಗೆ ಇಬ್ಬರು ಮಕ್ಕಳಿಗೆ ಎಸ್ಸಿ ಪ್ರಮಾಣಪತ್ರಗಳನ್ನು ಪಡೆಯುವಂತೆ ಪತಿ ನ್ಯಾಯಮೂರ್ತಿ ಕಾಂತ್ ನೇತೃತ್ವದ ನ್ಯಾಯಪೀಠ ಸೂಚಿನೆ ನೀಡಿತು.
ಪ್ರವೇಶ ಮತ್ತು ಬೋಧನಾ ಶುಲ್ಕ, ಊಟ ಮತ್ತು ವಸತಿ ವೆಚ್ಚಗಳು ಸೇರಿದಂತೆ ಸ್ನಾತಕೋತ್ತರ ಪದವಿಯವರೆಗೆ ಅವರ ಶಿಕ್ಷಣದ ಎಲ್ಲಾ ವೆಚ್ಚಗಳನ್ನು ತಂದೆಯೇ ಭರಿಸುತ್ತಾರೆ ಎಂದಿರುವ ಕೋರ್ಟ್ ಮಹಿಳೆ ಮತ್ತು ಮಕ್ಕಳ ಜೀವನಪರ್ಯಂತ ನಿರ್ವಹಣೆಗಾಗಿ ಪುರುಷನು ಮಹಿಳೆಗೆ ಒಂದು ಬಾರಿಯ ಪರಿಹಾರವಾಗಿ ಈಗಾಗಲೇ 42 ಲಕ್ಷ ರೂ. ಪಾವತಿಸಿದ್ದಾನೆ. ಅಲ್ಲದೆ ವ್ಯಕ್ತಿಯು ರಾಯ್ಪುರದಲ್ಲಿ ತನ್ನ ಒಡೆತನದಲ್ಲಿರುವ ಪ್ಲಾಟ್ ಒಂದನ್ನು ಸಹ ಮಹಿಳೆಗೆ ನೀಡಬೇಕಿದೆ ಎಂದು ಆದೇಶಿಸಿದೆ.
ಹಾಗೆಯೇ, ಮುಂದಿನ ವರ್ಷ ಆಗಸ್ಟ್ 31 ರೊಳಗೆ ಮಹಿಳೆಯ ವೈಯಕ್ತಿಕ ಬಳಕೆಗಾಗಿ ದ್ವಿಚಕ್ರ ವಾಹನವೊಂದನ್ನು ಖರೀದಿಸಿ ನೀಡುವಂತೆ ವಿಚ್ಛೇದನಕ್ಕಾಗಿ ಷರತ್ತು ಹಾಕಲಾಗಿದೆ. ಪರಸ್ಪರರ ವಿರುದ್ಧ ಪಕ್ಷಗಳು ದಾಖಲಿಸಿದ ಅಡ್ಡ-ಎಫ್ಐಆರ್ ಮತ್ತು ಪ್ರಕರಣಗಳನ್ನು ನ್ಯಾಯಪೀಠ ರದ್ದುಗೊಳಿಸಿತು.
ನಿಯಮಿತವಾಗಿ ಮಕ್ಕಳನ್ನು ಭೇಟಿ ಮಾಡಲು ತಂದೆಗೆ ಅನುಕೂಲ ಮಾಡಿಕೊಡಬೇಕು, ಅವರನ್ನು ರಜೆಯ ಮೇಲೆ ಕರೆದೊಯ್ಯಲು ಅವಕಾಶ ನೀಡಬೇಕು. ಅವರ ನಡುವೆ ಉತ್ತಮ ಸಂಬಂಧವನ್ನು ಬೆಳೆಸಬೇಕು ಎಂದು ಸುಪ್ರೀಂ ಕೋರ್ಟ್ ಮಹಿಳೆಗೆ ಸೂಚನೆ ಕೊಟ್ಟಿದೆ
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ