ಉಚಿತ ಕಾನೂನು ನೆರವು ನೀಡುವ ವಕೀಲರಿಗೆ ಪ್ರೋತ್ಸಾಹ ಧನ ಯೋಜನೆ ಜಾರಿಗೊಳಿಸಿ: ಕೇಂದ್ರಕ್ಕೆ ಶಿಫಾರಸು

ನವದೆಹಲಿ: ಬಡವರು ಹಾಗೂ ದುರ್ಬಲ ವರ್ಗದವರಿಗೆ ಉಚಿತ ಕಾನೂನು ನೆರವು ನೀಡುವ ವಕೀಲರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
ಉಚಿತ ಕಾನೂನು ನೆರವು ನೀಡುವ ವಕೀಲರಿಗಾಗಿ ರಾಷ್ಟ್ರೀಯ ರಿಜಿಸ್ಟ್ರಿಯೊಂದನ್ನು ಸ್ಥಾಪಿಸಿ ಅದರಲ್ಲಿ ಅವರ ಕೊಡುಗೆಗಳನ್ನು ನಮೂದಿಸುವ ಮೂಲಕ ಅವರ ವೃತ್ತಿಜೀವನದ ಏಳ್ಗೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ. ಸೂಕ್ತ ಪ್ರೋತ್ಸಾಹ ಧನ ನೀಡುವ ವ್ಯವಸ್ಥೆ ಇಲ್ಲದಿರುವುದರಿಂದ ವಕೀಲರು ಉಚಿತ ಕಾನೂನು ನೆರವು ನೀಡುವುದಕ್ಕೆ ಹಿಂದೇಟು ಹಾಕುವಂತಾಗಿದೆ. ಸಮಾಜದ ತಳ ಸಮುದಾಯಗಳಿಗೆ ಅಗತ್ಯ ಕಾನೂನು ಸೇವೆಗಳನ್ನು ನೀಡುವ ಸಾಮರ್ಥ್ಯದ ಹೊರತಾಗಿಯೂ ಪ್ಯಾರಾ-ಲೀಗಲ್ ಸ್ವಯಂಸೇವಕರ (ಪಿಎಲ್ವಿಗಳು) ಸೇವೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯಡಿ ಕಾನೂನು ನೆರವಿನ ಕಾರ್ಯನಿರ್ವಹಣೆಯ ಪರಾಮರ್ಶೆ ಕುರಿತ ತನ್ನ ಹಿಂದಿನ ವರದಿಯ ಮೇಲೆ ಕೈಗೊಂಡ ಕ್ರಮಗಳ ವರದಿಯಲ್ಲಿ, ಪ್ರೊ-ಬೋನೊ (ವಿಶೇಷವಾಗಿ ಬಡವರಿಗೆ ನೀಡಲಾಗುವ ಉಚಿತ ಕಾನೂನು ಸೇವೆ) ಕೆಲಸವನ್ನು ಉತ್ತೇಜಿಸುವ ಮತ್ತು ವಕೀಲರಿಗೆ ನೀಡಲಾಗುವ ಪ್ರೋತ್ಸಾಹ ಧನ ಹೆಚ್ಚಿಸುವ ಪ್ರಯತ್ನಗಳು ಪ್ರಗತಿಯಲ್ಲಿವೆ ಎಂದು ಸಮಿತಿ ಹೇಳಿದೆ.
ರಚನಾತ್ಮಕ ಪ್ರೋತ್ಸಾಹ ಮತ್ತು ಔಪಚಾರಿಕ ಮಾನ್ಯತೆಯ ಅನುಪಸ್ಥಿತಿಯಿಂದಾಗಿ ವಕೀಲರ ವ್ಯಾಪಕ ಭಾಗವಹಿಸುವಿಕೆಗೆ ಅಡ್ಡಿಯಂಟಾಗುತ್ತಿದೆ. ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯದ ಪ್ರಮುಖ ಪಾತ್ರವನ್ನು ಗುರುತಿಸಿ, ಸಾಂವಿಧಾನಿಕ ನ್ಯಾಯಾಲಯಗಳು (ಸುಪ್ರೀಂ ಕೋರ್ಟ್ ಮತ್ತು 25 ಹೈಕೋರ್ಟ್ಗಳು) ವಿಶೇಷವಾಗಿ ಕೈದಿಗಳಿಗೆ ಉಚಿತ ಕಾನೂನು ನೆರವು ಸೇವೆಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿವೆ” ಎಂದು ಅದು ಹೇಳಿದೆ.
ಸ್ವಯಂ ಪ್ರೇರಿತವಾಗಿ ಕೆಲಸ ಮಾಡುವ ವಕೀಲರಿಗಾಗಿ ರಾಷ್ಟ್ರೀಯ ನೋಂದಣಿಯನ್ನು ಸ್ಥಾಪಿಸಲು, ಮಾನ್ಯತೆ ನೀಡಲು ಮತ್ತು ಹಿರಿಯ ಪದನಾಮಗಳು ಅಥವಾ ನ್ಯಾಯಾಂಗ ನೇಮಕಾತಿಗಳಂತಹ ವೃತ್ತಿ ಪ್ರಗತಿಯ ಅವಕಾಶಗಳಿಗೆ ಅವರ ಕೊಡುಗೆಗಳನ್ನು ಲಿಂಕ್ ಮಾಡಲು” ಶಿಫಾರಸು ಮಾಡಿದೆ. ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದಲ್ಲಿ ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ