05/03/2026

Law Guide Kannada

Online Guide

ಪಿತ್ರಾರ್ಜಿತ ಆಸ್ತಿಯ ಮಾಲೀಕತ್ವ ಸಾಬೀತಾಗಲು ಭೂ ಕಂದಾಯ ದಾಖಲೆ ಮಾತ್ರ ಇದ್ದರೆ ಸಾಕೇ..? ಸುಪ್ರೀಂ ಮಹತ್ವದ ತೀರ್ಪೇನು..?

ನವದೆಹಲಿ: ಭೂ ಕಂದಾಯ ದಾಖಲೆ ಇದ್ದ ಮಾತ್ರಕ್ಕೆ ಪಿತ್ರಾರ್ಜಿತ ಆಸ್ತಿಯ ಮಾಲೀಕತ್ವ ಸಾಬೀತಾಗದು. ಆಸ್ತಿಯ ನಿಜವಾದ ಮಾಲೀಕತ್ವವನ್ನು ಸಾಬೀತುಪಡಿಸಲು ಕಾನೂನುಬದ್ಧ ದಾಖಲೆಗಳು ಅಥವಾ ನ್ಯಾಯಾಲಯದ ಆದೇಶ ಅನಿವಾರ್ಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಆಸ್ತಿ ಕಾನೂನು ಮತ್ತು ಉತ್ತರಾಧಿಕಾರ ಸಂಬಂಧಿತವಾಗಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಭೂ ಕಂದಾಯ ದಾಖಲೆಗಳಲ್ಲಿ (ರೆವೆನ್ಯೂ ರೆಕಾರ್ಡ್) ಆಸ್ತಿಯ ಹೆಸರಿನ ರೂಪಾಂತರ ನಡೆದಿದ್ದರೂ ಅದು ಸ್ವಯಂಚಾಲಿತವಾಗಿ ಮಾಲೀಕತ್ವ ವರ್ಗಾವಣೆಯಾದಂತೆ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆಸ್ತಿಯ ನಿಜವಾದ ಮಾಲೀಕತ್ವದ ವರ್ಗಾವಣೆಗಾಗಿ ಕಾನೂನುಬದ್ಧ ಉತ್ತರಾಧಿಕಾರ, ಮಾನ್ಯ ವಿಲ್ (ವಸಿಯತು) ಅಥವಾ ನ್ಯಾಯಾಲಯದ ಆದೇಶ ಅಗತ್ಯ. ಈ ತೀರ್ಪು ದೇಶದಾದ್ಯಂತ ನಡೆಯುತ್ತಿರುವ ಅನೇಕ ಆಸ್ತಿ ವಿವಾದಗಳಿಗೆ ಸ್ಪಷ್ಟ ಮಾರ್ಗಸೂಚಿಯಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ರೆವೆನ್ಯೂ ದಾಖಲೆಗಳಲ್ಲಿ ಯಾರ ಹೆಸರಿದೆ ಎಂಬುದೇ ಮಾಲೀಕತ್ವದ ಸಾಕ್ಷ್ಯವಲ್ಲ. ಈ ದಾಖಲೆಗಳು ಕೇವಲ ಆಡಳಿತಾತ್ಮಕ ಉದ್ದೇಶಕ್ಕಾಗಿ ಮಾತ್ರ ಉಪಯೋಗವಾಗುತ್ತವೆ. ಆಸ್ತಿಯ ನಿಜವಾದ ಮಾಲೀಕತ್ವವನ್ನು ಸಾಬೀತುಪಡಿಸಲು ಕಾನೂನುಬದ್ಧ ದಾಖಲೆಗಳು ಅಥವಾ ನ್ಯಾಯಾಲಯದ ಆದೇಶ ಅನಿವಾರ್ಯ ಎಂದು ತಿಳಿಸಿದೆ.

ಏನಿದು ಪ್ರಕರಣ…
ಪಂಜಾಬ್ ನ ರೋನಕ್ ಸಿಂಗ್ ಅವರು 1924ರಲ್ಲಿ ನಿಧನರಾದರು. ತಮ್ಮ ಪತ್ನಿ ಕರ್ತಾರ್ ಕೌರ್ ಗೆ ಕೆಲವು ಆಸ್ತಿಗಳನ್ನು ಬಿಟ್ಟುಹೋಗಿದ್ದರು. ಆದರೆ ರೋನಕ್ ಸಿಂಗ್ ಸಹೋದರಿಯರಾದ ಚಿಂಕಿ ಮತ್ತು ನಿಕ್ಕಿ ಈ ಆಸ್ತಿಯ ಉತ್ತರಾಧಿಕಾರ ಹಕ್ಕಿನ ಕುರಿತು ವಿವಾದ ಎಬ್ಬಿಸಿದರು. ಕರ್ತಾರ್ ಕೌರ್ ಆಸ್ತಿಯನ್ನು ಹರ್ ಚಂದ್ ಎಂಬ ವ್ಯಕ್ತಿಗೆ ದಾನ ಮಾಡಿರುವುದಾಗಿ ಆರೋಪಿಸಲಾಯಿತು. ಈ ಕ್ರಮವನ್ನು ಸಹೋದರಿಯರು ಪ್ರಶ್ನಿಸಿದರು. ಸ್ಥಳೀಯ ಸಿವಿಲ್ ಕೋರ್ಟ್ 1935ರ ಮಾರ್ಚ್ 22ರಂದು ತೀರ್ಪು ನೀಡುತ್ತಾ, ಕರ್ತಾರ್ ಕೌರ್ ಅವರಿಗೆ ಆಸ್ತಿಯ ಮೇಲೆ ಕೇವಲ ಸೀಮಿತ ಹಕ್ಕು ಇದೆ ಎಂದು ಘೋಷಿಸಿತು. ಹೀಗಾಗಿ ಅವರ ದಾನವನ್ನು ಅಮಾನ್ಯ ಎಂದು ಘೋಷಿಸಲಾಯಿತು. ಆದರೆ ನಂತರದ ಹಂತದಲ್ಲಿ ಕೋರ್ಟ್ ಅವರ ಪರವಾಗಿ ತೀರ್ಪು ನೀಡಿ, ಅವರನ್ನು ಆಸ್ತಿಯ ನಿಜವಾದ ಮಾಲೀಕರನ್ನಾಗಿ ಘೋಷಿಸಿತು. 1976ರಲ್ಲಿ ಆಸ್ತಿಯ ರೂಪಾಂತರ ಕರ್ತಾರ್ ಕೌರ್ ಅವರ ಹೆಸರಿಗೆ ನಡೆಯಿತು. ಆದರೆ ಸಹೋದರಿಯರು ಇದನ್ನು ಪ್ರಶ್ನಿಸಿದರು. ಕರ್ತಾರ್ ಕೌರ್ ಅವರು 1983ರಲ್ಲಿ ನಿಧನರಾದರು. ಅವರ ಮಕ್ಕಳು 1976ರ ವಿಲ್ ಆಧಾರವಾಗಿ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಲು ಯತ್ನಿಸಿದರು.

1984ರ ಏಪ್ರಿಲ್ 29ರಂದು ನ್ಯಾಯಾಲಯವು ಸಹೋದರಿಯರ ಪರವಾಗಿ ತೀರ್ಪು ನೀಡುತ್ತಾ, ನೈಸರ್ಗಿಕ ಉತ್ತರಾಧಿಕಾರದ ಆಧಾರದ ಮೇಲೆ ಆಸ್ತಿಯನ್ನು ವರ್ಗಾಯಿಸಲು ಆದೇಶಿಸಿತು. ಕರ್ತಾರ್ ಕೌರ್ ಅವರ ಮಕ್ಕಳು ಹೈಕೋರ್ಟ್ ಮತ್ತು ನಂತರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು.

ಭೂ ಕಂದಾಯ ದಾಖಲೆಗಳಲ್ಲಿ ರೂಪಾಂತರ ನಡೆದಿದ್ದರೂ ಅದು ಮಾಲೀಕತ್ವದ ಸಾಕ್ಷ್ಯವಲ್ಲ. ಕಾನೂನುಬದ್ಧ ಉತ್ತರಾಧಿಕಾರ, ಮಾನ್ಯ ವಿಲ್ ಅಥವಾ ನ್ಯಾಯಾಲಯದ ಆದೇಶವಿಲ್ಲದೆ ಆಸ್ತಿಯ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ರೋನಕ್ ಸಿಂಗ್ ಅವರ ಸಹೋದರಿಯ ಮಕ್ಕಳ ಪರವಾಗಿ ತೀರ್ಪು ನೀಡಿದ್ದು,ಈ ತೀರ್ಪು ಭಾರತದ ಆಸ್ತಿ ಕಾನೂನಿನಲ್ಲಿ ಐತಿಹಾಸಿಕ ನಿರ್ಣಯ ಎಂದು ಪರಿಗಣಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.