ರಾಜ್ಯದಲ್ಲಿ ‘ಜಡ್ಜ್ ಹುದ್ದೆಗೆ ಸ್ಪರ್ಧಿಸಲು ನ್ಯಾಯಾಂಗ ನೌಕರರಿಗೆ’ ಇದೆಯಾ ಪರ್ಮೀಷನ್..?
ಬೆಂಗಳೂರು: ಕಾನೂನು ಪದವಿ ಹೊಂದಿದ ಸೇವಾ ನಿರತ ನ್ಯಾಯಾಂಗ ನೌಕರರಿಗೆ ಸಿವಿಲ್ ಜಡ್ಜ್ ಹುದ್ದೆಗೆ ಸ್ಪರ್ಧಿಸಲು ತೆಲಂಗಾಣ ರಾಜ್ಯದಲ್ಲಿ ಅವಕಾಶವಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ನ್ಯಾಯಾಂಗ ನೌಕರರಿಗೆ ಈ ಅವಕಾಶವಿಲ್ಲ.
ಹೌದು, ಹಿಂದಿನ ನೇಮಕಾತಿ ನಿಯಮಗಳ ಪ್ರಕಾರ ಸೇವಾ ನಿರತ ಕಾನೂನು ಪದವಿ ಹೊಂದಿರುವ ನ್ಯಾಯಾಂಗ ನೌಕರರಿಗೆ ಸಿವಿಲ್ ಜಡ್ಜ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಆದರೀಗ ಈಗ ರಾಜ್ಯದಲ್ಲಿ ಈ ರೀತಿಯ ಅವಕಾಶವಿಲ್ಲ.
ಕಾರಣವಿಷ್ಟೆ..
ನ್ಯಾಯಾಂಗ ಅಧಿಕಾರಿಗಳ ನೇಮಕಾತಿ ನಿಯಮಕ್ಕೆ ಕರ್ನಾಟಕ ಸರಕಾರವು ಇತ್ತೀಚೆಗೆ ತಿದ್ದುಪಡಿಯನ್ನು ತಂದಿದ್ದು ಕರಡು ತಿದ್ದುಪಡಿ ನಿಯಮಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಸರಕಾರ ಪ್ರಕಟಿಸಿರುವ ಕರಡು ನಿಯಮಗಳಲ್ಲಿ ನ್ಯಾಯಾಂಗ ನೌಕರರಿಗೆ ಈ ಅವಕಾಶವನ್ನು ಕೈ ಬಿಡಲಾಗಿದೆ. ಇದಕ್ಕೆ ಕಾರಣ ಸುಪ್ರೀಂ ಕೋರ್ಟ್ ಪ್ರವೇಶ ಹಂತದ ನ್ಯಾಯಾಂಗ ಅಧಿಕಾರಿಗಳ ಹುದ್ದೆಯ ನೇಮಕಾತಿಗಾಗಿ ಮೂರು ವರ್ಷಗಳ ವಕೀಲಿ ವೃತ್ತಿಯ ಅನುಭವ ಕಡ್ಡಾಯ ಎಂಬ ತೀರ್ಪು ನೀಡಿರುವುದು.
ಕರ್ನಾಟಕ ರಾಜ್ಯದಲ್ಲಿ ನ್ಯಾಯಾಂಗ ಇಲಾಖೆಯಲ್ಲಿರುವ ಕಾನೂನು ಪದವೀಧರರ ಅರ್ಹತೆ ಕುರಿತು ನ್ಯಾಯಾಂಗ ಇಲಾಖೆಯಲ್ಲಿ ನ್ಯಾಯಾಂಗೇತರ ಲಿಪಿಕ ಹುದ್ದೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಕಾನೂನು ಪದವೀಧರರು ಸಾಮಾನ್ಯವಾಗಿ ಸಿವಿಲ್ ನ್ಯಾಯಾಧೀಶ (ಜೂನಿಯರ್ ಡಿವಿಷನ್) ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಇದಕ್ಕೆ, ಕಾರಣ. ಪ್ರವೇಶ ಹಂತದ ನ್ಯಾಯಾಂಗ ಹುದ್ದೆಗಳಿಗೆ ಅಗತ್ಯವಿರುವ ಕನಿಷ್ಠ ಮೂರು ವರ್ಷಗಳ ವಕೀಲ ವೃತ್ತಿ ಅನುಭವಕ್ಕೆ, ನ್ಯಾಯಾಂಗ ಸೇವೆಯ ಅನುಭವವನ್ನು ಲೆಕ್ಕಿಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು. 2025ರಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದಂತೆ, ಕೇವಲ ಸಕ್ರಿಯವಾಗಿ ವಕೀಲರಾಗಿ ವೃತ್ತಿ ನಡೆಸಿದ ಅವಧಿಯನ್ನೇ ಈ ಅರ್ಹತಾ ಮಾನದಂಡಕ್ಕೆ ಪರಿಗಣಿಸಬೇಕು.
ವಿವಿಧ ರಾಜ್ಯಗಳಲ್ಲಿ ಏಕರೂಪವಾಗಿಲ್ಲ ಸಿವಿಲ್ ಜಡ್ಜ್ ಹುದ್ದೆಗಳ ನೇಮಕಾತಿ ನಿಯಮ
ಇನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಸಿವಿಲ್ ಜಡ್ಜ್ ಹುದ್ದೆಗಳ ನೇಮಕಾತಿ ನಿಯಮ ಏಕರೂಪವಾಗಿಲ್ಲ. ಹೌದು ಕರ್ನಾಟಕದಲ್ಲಿ ಸಿವಿಲ್ ಜಡ್ಜ್ ಹುದ್ದೆಗಳಗೆ ಸ್ಪರ್ಧಿಸಲು ನ್ಯಾಯಾಂಗ ನೌಕರರಿಗೆ ಅನುಮತಿ ಇಲ್ಲ. ಾದರೆ ತೆಲಂಗಾಣ ಹೈಕೋರ್ಟ್ ಕಾನೂನು ಪದವೀಧರರಿಗೆ, ಅದರಲ್ಲೂ ಹಾಲಿ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲಿಪಿಕ ನೌಕರರಿಗೆ ನೇರ ನೇಮಕಾತಿಯ ಮೂಲಕ ಸಿವಿಲ್ ನ್ಯಾಯಾಧೀಶರಾಗುವ ಅವಕಾಶಗಳನ್ನು ನೀಡಿದೆ. ಇದಕ್ಕಾಗಿ ಎಲ್ಎಲ್ಬಿ (LLB) ಪದವಿ ಹೊಂದಿರಬೇಕು ಮತ್ತು ತೆಲಂಗಾಣ ನ್ಯಾಯಾಂಗ ಸೇವಾ ಪರೀಕ್ಷೆ (TISE) ಉತ್ತೀರ್ಣರಾಗಬೇಕು. ಇತ್ತೀಚಿನ 2025ರ ಕೊನೆಯ ಭಾಗದ ಅಧಿಸೂಚನೆಗಳಲ್ಲಿ ನೇರ ನೇಮಕಾತಿ ಅಭ್ಯರ್ಥಿಗಳಿಗೆ ಸಿವಿಲ್ ನ್ಯಾಯಾಧೀಶ (ಜೂನಿಯರ್ ಡಿವಿಷನ್) ಹುದ್ದೆಗಳಿಗಾಗಿ ಅವಕಾಶಗಳು ಪ್ರಕಟವಾಗಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಅನುಭವದ ಮಾನದಂಡಗಳು ವರ್ಷಕ್ಕಿಂತ ಹೆಚ್ಚು ಕಾಲ ವಕೀಲ ವ್ಯತ್ತಿ ನಡೆಸಿದವರಿಗೆ ಆದ್ಯತೆ ನೀಡುತ್ತವೆ. ಆದರೂ, ನ್ಯಾಯಾಂಗ ಸಿಬ್ಬಂದಿಗೆ ಹಂತ ಹಂತವಾಗಿ ಮೇಲೇರಲು ಆಂತರಿಕ ಪದೋನ್ನತಿ ಮಾರ್ಗಗಳೂ ಲಭ್ಯವಿವೆ.
ಕೆಲವು ಇತ್ತೀಚಿನ ಹುದ್ದೆಗಳು ನೇರ ಪ್ರವೇಶವಾಗಿದ್ದರೂ, ಸಾಮಾನ್ಯವಾಗಿ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಅರ್ಹರಾಗಲು ಸುಮಾರು 3 ವರ್ಷಗಳ ವಕೀಲ ವೃತ್ತಿ ಅನುಭವ ಅಗತ್ಯವಿರುತ್ತದೆ.
ತೆಲಂಗಾಣ ರಾಜ್ಯದ ನ್ಯಾಯಾಂಗ ಇಲಾಖೆಯಲ್ಲಿ ಲಿಪಿಕ, ಆಡಳಿತಾತ್ಮಕ ಹುದ್ದೆಗಳು ಮುಂತಾದವುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನೂನು ಪದವೀಧರರು, ಆಂತರಿಕ ಪದೋನ್ನತಿಯ ಮೂಲಕ ಅಥವಾ ಅರ್ಹತೆ ಪೂರೈಸಿದ ನಂತರ ನೇರ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಧೀಶರಾಗುವ ಕನಸು ಕಾಣಬಹುದು. ಇದಕ್ಕಾಗಿ ಇಲಾಖಾ ಪರೀಕ್ಷೆಗಳು ಅಥವಾ ನೇರ ಪ್ರವೇಶದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ನ್ಯಾಯಾಂಗ ಇಲಾಖೆಯೊಳಗಿನ ಕಾನೂನು ಪದವೀಧರರಿಗೆ ಅವಕಾಶಗಳು ಇದ್ದರೂ, ಸಾಮಾನ್ಯವಾಗಿ ನಿರ್ದಿಷ್ಟ ಅನುಭವ ಅಥವಾ ಪರೀಕ್ಷಾ ಅರ್ಹತೆಗಳನ್ನು ಪೂರೈಸಬೇಕಾಗುತ್ತದೆ. ಸಿವಿಲ್ ನ್ಯಾಯಾಧೀಶ ಹುದ್ದೆಗಳು ಮತ್ತು ಇತರ ನ್ಯಾಯಾಂಗ ಹುದ್ದೆಗಳ ಕುರಿತ ಇತ್ತೀಚಿನ ಅಧಿಸೂಚನೆಗಳು, ಅರ್ಹತೆ ಹಾಗೂ ಅರ್ಜಿ ವಿವರಗಳಿಗಾಗಿ ಸದಾ ತೆಲಂಗಾಣ ಹೈಕೋರ್ಟ್ ಅಧಿಕೃತ ವೆಬ್ ಸೈಟ್ tshc.gov.in ಅನ್ನು ಪರಿಶೀಲಿಸಬಹುದು.
3 ವರ್ಷಗಳ ವಕೀಲ ವೃತ್ತಿ ನಿಯಮ.
ಸಿವಿಲ್ ನ್ಯಾಯಾಧೀಶ (ಜೂನಿಯರ್ ಡಿವಿಷನ್) ಹುದ್ದೆಗೆ ಕನಿಷ್ಠ ಮೂರು ವರ್ಷಗಳ ವಕೀಲ ವ್ಯಕ್ತಿ ಅನುಭವ ಅಗತ್ಯವಿದೆ ಎಂಬ ನಿಯಮವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಮರುಸ್ಥಾಪಿಸಿದೆ. ನ್ಯಾಯಾಂಗ ಇಲಾಖೆಯ ಲಿಪಿಕ ಅಧಿಕಾರಿಯಾಗಿ ಅಥವಾ ನ್ಯಾಯಾಂಗ ಸೇವೆಯಲ್ಲಿ ಕಳೆಯುವ ಅವಧಿಯನ್ನು ವಕೀಲರಾಗಿ ವೃತ್ತಿ ನಡೆಸಿದ ಅನುಭವಕ್ಕೆ, ಸಮಾನವೆಂದು ಪರಿಗಣಿಸಲು ನ್ಯಾಯಾಲಯ ಸ್ಪಷ್ಟವಾಗಿ ನಿರಾಕರಿಸಿದೆ.
ಅನುಭವವು ವಕೀಲರಾಗಿ ಇರಬೇಕು ಅಂದರೆ, ದಾವೆ ರಚನೆ, ಅರ್ಜಿಗಳ ಸಲ್ಲಿಕೆ, ಕಕ್ಷಿಗಾರರೊಂದಿಗೆ ಸಂವಹನ ಹಾಗೂ ನ್ಯಾಯಾಲಯದಲ್ಲಿ ಹಾಜರಾತಿ ಇತ್ಯಾದಿಗಳನ್ನು ಒಳಗೊಂಡಿರಬೇಕು. ಕೇವಲ ಆಡಳಿತಾತ್ಮಕ ಅಥವಾ ಲಿಪಿಕ ಸೇವೆಯ ಪಾತ್ರಗಳನ್ನು ಒಳಗೊಂಡಿರಬಾರದು.
ಕರ್ನಾಟಕ ರಾಜ್ಯದಲ್ಲಿ ಉಚ್ಚ ನ್ಯಾಯಾಲಯ ಹಾಗೂ ಜಿಲ್ಲಾಮಟ್ಟದ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಾಂಗ ನೌಕರರ ಪೈಕಿ ಕಾನೂನು ಪದವಿ ಹೊಂದಿರುವ ಬಹುತೇಕ ನೌಕರರಿದ್ದಾರೆ. ಅವರಲ್ಲಿ ಹಲವರು ನ್ಯಾಯಾಂಗ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಗುರಿಯೊಂದಿಗೆ ಲಿಪಿಕ ನೌಕರರ ಹುದ್ದೆಗೆ ಸೇರಿದವರಾಗಿದ್ದಾರೆ. ಇದೀಗ ಕರ್ನಾಟಕ ಸರಕಾರ ಪ್ರಕಟಿಸಿರುವ ಕರಡು ತಿದ್ದುಪಡಿ ನಿಯಮಗಳಿಂದ ಅವರ ಉತ್ಸಾಹಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಆದರೂ ತೆಲಂಗಾಣ ಹೈಕೋರ್ಟ್ ಸೇವಾ ನಿರತ ನ್ಯಾಯಾಂಗ ನೌಕರರಿಗೆ ನ್ಯಾಯಾಧೀಶರಾಗುವ ಅವಕಾಶವನ್ನು ಕಲ್ಪಿಸಿರುವುದು ಕರ್ನಾಟಕ ರಾಜ್ಯದ ನ್ಯಾಯಾಂಗ ನೌಕರರಲ್ಲಿ ಹೊಸ ಭರವಸೆ ಇದೆ ಎನ್ನಬಹುದು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
