06/03/2026

Law Guide Kannada

Online Guide

ನ್ಯಾಯಮೂರ್ತಿ ಬದಲಾದ ಮಾತ್ರಕ್ಕೆ ತೀರ್ಪುಗಳ ಬದಲಾವಣೆ ಸಲ್ಲದು – ನ್ಯಾ. ನಾಗರತ್ನ

ನವದೆಹಲಿ: ನ್ಯಾಯಮೂರ್ತಿಗಳು ನೀಡುವ ತೀರ್ಪುಗಳನ್ನು ಶಾಯಿಯಲ್ಲಿ ಬರೆಯಲಾಗುತ್ತದೆಯೇ ವಿನಃ ಮರಳಿನ ಮೇಲಲ್ಲ. ಹೀಗಾಗಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಬದಲಾಗಿದ್ದಾರೆ ಎಂಬ ಕಾರಣಕ್ಕೆ, ಅವರು ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಬದಲಾವಣೆ ಮಾಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ನಾಗರತ್ನ ಅವರು ತಿಳಿಸಿದ್ದಾರೆ.

ಹರಿಯಾಣದ ಸೋನಿಪತ್ ನಲ್ಲಿರುವ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯದ ಕುರಿತ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ನ್ಯಾ.ನಾಗರತ್ನ ಅವರು ಹಿಂದಿನ ಪೀಠಗಳು ನೀಡಿದ್ದ ತೀರ್ಪುಗಳನ್ನು ಬದಲಿಸುವ ರೂಢಿಯ ಕುರಿತು ಈ ರೀತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘ನ್ಯಾಯಾಂಗ ವ್ಯವಸ್ಥೆಯು ದೇಶದ ಆಡಳಿತದ ಪಾಲಿಗೆ ಅವಿಭಾಜ್ಯ ಅಂಗವಾಗಿದೆ’ ಎಂದು ಒತ್ತಿ ಹೇಳಿರುವ ಅವರು, ‘ನ್ಯಾಯಮೂರ್ತಿಗಳು ನೀಡುವ ತೀರ್ಪುಗಳಿಂದ ಮಾತ್ರವಲ್ಲದೆ, ಅವರ ನಡವಳಿಕೆಯಿಂದಲೂ ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆಯಾಗುತ್ತದೆ. ‘ನ್ಯಾಯಮೂರ್ತಿಗಳು ನೀಡುವ ತೀರ್ಪುಗಳನ್ನು ಶಾಯಿಯಲ್ಲಿ ಬರೆಯಲಾಗುತ್ತದೆಯೇ ವಿನಃ ಮರಳಿನ ಮೇಲಲ್ಲ. ನ್ಯಾಯಾಂಗದ ಸ್ವಾತಂತ್ರ್ಯದ ಬಗೆಗೆ ಹಂತಹಂತವಾಗಿ ರೂಪುಗೊಂಡ ತಿಳಿವಳಿಕೆಯು, ಕಾನೂನು ವ್ಯವಸ್ಥೆಯ ಮೇಲಿನ ಭರವಸೆಯನ್ನು ಸಮರ್ಥಿಸುತ್ತದೆ ಎಂದು ನ್ಯಾ. ನಾಗರತ್ನ ಅವರು ತಿಳಿಸಿದರು.

ತೀರ್ಪುಗಳನ್ನು ಅವು ಇದ್ದಂತೆಯೇ ಗೌರವಿಸಬೇಕು. ಹಾಗೆಯೇ, ಕಾನೂನಿನ ವ್ಯಾಪ್ತಿಗೆ ಅನುಸಾರವಾಗಿ ಮಾತ್ರವೇ ಆಕ್ಷೇಪಣೆಗಳನ್ನು ಎತ್ತಬೇಕು. ಅದರ ಹೊರತಾಗಿ, ಮುಖಗಳು ಬದಲಾಗಿವೆ ಎಂಬ ಕಾರಣಕ್ಕಾಗಿ ತೀರ್ಪುಗಳನ್ನು ಬದಲಿಸಬಾರದು. ಇದು, ನ್ಯಾಯಾಂಗ ವ್ಯವಸ್ಥೆಯ ಭ್ರಾತೃತ್ವ ಮತ್ತು ಆಡಳಿತದ ಚೌಕಟ್ಟಿನಲ್ಲಿ ಪಾಲ್ಗೊಳ್ಳುವವರ ಕರ್ತವ್ಯವಾಗಿದೆ’ ಎಂದು ನ್ಯಾ. ನಾಗರತ್ನ ಕಿವಿಮಾತು ಹೇಳಿದರು.

ಹಿಂದಿನ ಪೀಠಗಳು ನೀಡಿದ್ದ ತೀರ್ಪುಗಳಿಂದ ಬಾಧಿತರಾದ ಪಕ್ಷಗಳ ವಾದಗಳನ್ನು ಆಲಿಸಿದ ನಂತರ ತೀರ್ಪುಗಳನ್ನು ರದ್ದುಗೊಳಿಸುವ ಪ್ರವೃತ್ತಿ ಬೆಳೆಯುತ್ತಿರುವ ಕುರಿತು ಸುಪ್ರೀಂಕೋರ್ಟ್ ನವೆಂಬರ್ 26ರಂದು ಕಳವಳ ವ್ಯಕ್ತಪಡಿಸಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.