05/03/2026

Law Guide Kannada

Online Guide

ನ್ಯಾಯಾಧೀಶರು ಪರಿಪೂರ್ಣರಂತೆ ನಟಿಸಿದಾಗ ನ್ಯಾಯಾಂಗ ನಾಯಕತ್ವಕ್ಕೆ ಹಿನ್ನಡೆ- CJI ಸೂರ್ಯಕಾಂತ್

ನವದೆಹಲಿ: ನ್ಯಾಯಾಧೀಶರು ತಾವು ಪರಿಪೂರ್ಣರಾಗಿದ್ದಾರೆ ಎಂದು ತೋರಿಸಲು ಪ್ರಯತ್ನಿಸಿದಾಗ ನ್ಯಾಯಾಂಗ ನಾಯಕತ್ವಕ್ಕೆ ತೊಂದರೆ ಹಿನ್ನಡೆಯಾಗುತ್ತದೆ. ಜಾಗತಿಕ ನ್ಯಾಯಾಂಗ ಸಮುದಾಯದ ಸದಸ್ಯರು ವಿನಯ ಮತ್ತು ನಿರಂತರ ಅಧ್ಯಯನವನ್ನು ನ್ಯಾಯಾಂಗ ಹುದ್ದೆಯ ಮೂಲ ತತ್ವಗಳಾಗಿ ಅಳವಡಿಸಿಕೊಳ್ಳಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಕಿವಿಮಾತು ಹೇಳಿದರು.

ನವದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ನ್ಯಾಯಾಂಗ ಶಿಕ್ಷಣವೇತ್ತರ 11ನೇ ದೈವಾರ್ಷಿಕ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ವಿಶೇಷ ಭಾಷಣ ಮಾಡಿದ ಸಿಜೆಐ ಸೂರ್ಯಕಾಂತ್ ಅವರು, ನ್ಯಾಯಾಧೀಶರನ್ನು “ಪೂರ್ಣವಾಗಿ ರೂಪುಗೊಂಡ ಉತ್ಪನ್ನಗಳು” ಎಂದು ನೋಡುವ ಕಲ್ಪನೆ ಮೆಚ್ಚುಗೆಯಾದರೂ ಸಂಸ್ಥೆಗೆ ಹಾನಿಕಾರಕವಾಗಿದೆ. ಬಹಳ ಕಾಲದಿಂದ ನಾವು ನ್ಯಾಯಾಧೀಶರು ನೇಮಕವಾಗುವ ಕಣದಲ್ಲೇ ಸಂಪೂರ್ಣರಾಗಿದ್ದಾರೆ, ರೂಪುಗೊಂಡಿದ್ದಾರೆ, ಪರಿಪೂರ್ಣರಾಗಿದ್ದಾರೆ ಎಂಬ ದೃಷ್ಟಿಕೋನದಲ್ಲಿ ಆರಾಮವಾಗಿದ್ದೇವೆ. ನ್ಯಾಯಾಧೀಶರು ಅಪೂರ್ಣರಾಗಿರುವುದರಿಂದ ನ್ಯಾಯಾಂಗ ನಾಯಕತ್ವ ಹಿನ್ನಡೆಯಾಗುವುದಿಲ್ಲ ಅವರು ಅಪೂರ್ಣರಲ್ಲ ಎಂದು ನಾವು ನಟಿಸಿದಾಗ ಅದು ಹಿನ್ನಡೆಯಾಗುತ್ತದೆ. ಆದ್ದರಿಂದ ನ್ಯಾಯಾಂಗ ನಾಯಕತ್ವಕ್ಕಾಗಿ ಶಿಕ್ಷಣ ನೀಡಬೇಕಾದರೆ, ಮೊದಲು ನಾವು ಒಂದು ಪ್ರಾಮಾಣಿಕ ಮೂಲಭೂತ ತತ್ವವನ್ನು ಒಪ್ಪಿಕೊಳ್ಳಬೇಕು. ನ್ಯಾಯಾಧೀಶರು, ಅವರು ಮುನ್ನಡೆಸುವ ಸಂಸ್ಥೆಗಳಂತೆಯೇ, ಬೆಳವಣಿಗೆ, ತಿದ್ದುಪಡಿ ಮತ್ತು ಸುಧಾರಣೆಗೆ ಸದಾ ಸಾಮರ್ಥ್ಯ ಹೊಂದಿರುತ್ತಾರೆ,” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದರು.

“Educating for Judicial Leadership” ಎಂಬ ವಿಷಯಾಧಾರಿತ ಸಮ್ಮೇಳನವನ್ನು ಉದ್ಘಾಟಿಸುತ್ತಾ, ಉಪನಿಷತ್ತಿನ ಪ್ರಾಚೀನ ಭಾರತೀಯ ಸೂಕ್ತಿ ವಿದ್ಯಾ ದದಾತಿ ವಿನಯಂ” (ನಿಜವಾದ ವಿದ್ಯೆ ವಿನಯವನ್ನು ಉಂಟುಮಾಡುತ್ತದೆ) ಅನ್ನು ಉಲ್ಲೇಖಿಸಿದ ಸಿಜೆಐ ಸೂರ್ಯಕಾಂತ್, ಇತಿಹಾಸದಲ್ಲಿನ ಅತ್ಯಂತ ಗೌರವಾನ್ವಿತ ನ್ಯಾಯಾಂಗ ನಾಯಕರು ತಮ್ಮನ್ನು ದೋಷರಹಿತರಾಗಿ ಪ್ರದರ್ಶಿಸಿದವರು ಅಲ್ಲ. ತಮ್ಮ ಜ್ಞಾನಕ್ಕೆ ಮಿತಿಗಳಿವೆ ಎಂಬ ಅರಿವು ಹೊಂದಿ, ತಿದ್ದುಪಡಿ ಸ್ವೀಕರಿಸಲು ಸದಾ ತೆರೆದ ಮನಸ್ಸು ಹೊಂದಿದ್ದವರೇ ಆಗಿದ್ದರು. ಅದು “ವಿನಯ,” ಎಂದು ಅವರು ಹೇಳಿದರು, “ವೈಯಕ್ತಿಕ ಗುಣ ಮಾತ್ರವಲ್ಲ. ಅದು ವೃತ್ತಿಪರ ರಕ್ಷಣಾ ಸಾಧನವಾಗಿದೆ. ಈ ಮಹತ್ವದ ಗುಣವನ್ನು ಪ್ರತಿಯೊಬ್ಬ ನ್ಯಾಯಾಧಿಕಾರಿಗೆ ವಿನಾಯಿತಿ ಇಲ್ಲದೆ ಕಲಿಸಬೇಕು ಎಂದು ನಾನು ನಂಬುತ್ತೇನೆ ಎಂದು ನುಡಿದರು.

ಕಾಮನ್ವೆಲ್ತ್ ನ್ಯಾಯಾಂಗ ಶಿಕ್ಷಣ ಸಂಸ್ಥೆಯ ಕೆಲಸವನ್ನು ಅವರು ಪರಂಪರೆ ನಿರ್ಮಾಣದ ಕಾರ್ಯವೆಂದು ವರ್ಣಿಸಿ, ಬದಲಾವಣೆಗಳಿಂದ ಕೂಡಿದ ಜಗತ್ತಿನಲ್ಲಿ ನೈತಿಕ ಹಾಗೂ ತಾಂತ್ರಿಕ ಸವಾಲುಗಳನ್ನು ನಿಭಾಯಿಸಲು ಸಮರ್ಥರಾಗಿರುವ “ಜ್ಞಾನಿ ನ್ಯಾಯದ ಸಂರಕ್ಷಕರು” ಆಗಿ ನ್ಯಾಯಾಧೀಶರನ್ನು ರೂಪಿಸುತ್ತಿದೆ. ಕಾಮನ್ ವೆಲ್ತ್ ವ್ಯಾಪ್ತಿಯಲ್ಲಿ ನ್ಯಾಯಾಂಗ ವ್ಯವಸ್ಥೆಗಳು ಸ್ಥಿರತೆ, ಪರಿವರ್ತನೆ ಮತ್ತು ಸಾಮಾಜಿಕ ಒತ್ತಡಗಳ ವಿಭಿನ್ನ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಗಮನಿಸಿದರು. ಇಂತಹ ವೈವಿಧ್ಯತೆಯಲ್ಲಿ ಸಹಪಾಠ ಅಧ್ಯಯನ ಮತ್ತು ಸಂರಚಿತ ಸಂವಾದ ಅತ್ಯಾವಶ್ಯಕವಾಗುತ್ತದೆ.

CJEI ಸಂಸ್ಥೆಯನ್ನು ಕೇವಲ ಆಚರಣಾತ್ಮಕ ಸಂಸ್ಥೆಯಾಗಿ ಅಥವಾ ಏಕಮುಖ ಉಪದೇಶ ವೇದಿಕೆಯಾಗಿಯಾಗಿ ಸ್ಥಾಪಿಸಲಾಗಿಲ್ಲ ಎಂದು ಅವರು ಹೇಳಿದರು. ಸ್ಥಾಪನೆಯಿಂದಲೂ ಇದು ನ್ಯಾಯಾಂಗ ಶಿಕ್ಷಣಕರನ್ನು ಸಂಪರ್ಕಿಸುವ, ಸಹಪಾಠ ಅಧ್ಯಯನವನ್ನು ಉತ್ತೇಜಿಸುವ ಮತ್ತು ಪ್ರತ್ಯೇಕ ನ್ಯಾಯವ್ಯವಸ್ಥೆಗಳು ತಮ್ಮ ವೈಶಿಷ್ಟ್ಯ ಕಳೆದುಕೊಳ್ಳದೆ ಪರಸ್ಪರ ಕಲಿಯಲು ನೆರವಾಗುವ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಿದೆ ಎಂದು ಸಿಜೆಐ ಸೂರ್ಯಕಾಂತ್ ತಿಳಿಸಿದರು.

2014ರಲ್ಲಿ ಹ್ಯಾಲಿಫ್ಯಾಕ್ಸ್ನಲ್ಲಿ ನಾನು ಇದನ್ನು ಅತ್ಯಂತ ಸ್ಪಷ್ಟವಾಗಿ ಕಂಡೆ, ಮತ್ತು ಕಳೆದ ವರ್ಷ ಮಾಲ್ಟಾದಲ್ಲಿ ನಡೆದ ಮುಖ್ಯ ಪೋಷಕರ ಸಭೆಯಲ್ಲಿ ಭಾಗವಹಿಸಿದಾಗಲೂ ಕಂಡೆ,” ಎಂದು ಅವರು ಸ್ಮರಿಸಿದರು. ಸಮ್ಮೇಳನದ ಕಾರ್ಯಸೂಚಿಯನ್ನು ಉಲ್ಲೇಖಿಸಿ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯೊಂದಿಗೆ ಸಂವಹನ, ಪರಿಸರ ನ್ಯಾಯ, ಅಖಂಡತೆ ಮತ್ತು ಸಾರ್ವಜನಿಕ ನಂಬಿಕೆ ರಕ್ಷಣೆ, ನ್ಯಾಯಾಧೀಶರ ಕಲ್ಯಾಣ ಮತ್ತು ತೀರ್ಪು ಬರವಣಿಗೆಯ ಕೌಶಲ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಎಂದು ಅವರು ಹೇಳಿದರು.

ಕಾನೂನು ಒಂದು ಜೀವಂತ, ಉಸಿರಾಡುವ ಘಟಕವಾಗಿದೆ. ಅದು ತನ್ನ ಸುತ್ತಲಿನ ಜಗತ್ತಿನೊಂದಿಗೆ ಅಭಿವೃದ್ಧಿಯಾಗುತ್ತದೆ,” ಎಂದು ಅವರು ಹೇಳಿ, ನ್ಯಾಯಾಧೀಶರು ಪೂರ್ವನಿದರ್ಶನಗಳ ಪಾಠದಲ್ಲಿ ಪರಿಣತಿ ಹೊಂದುವುದರ ಜೊತೆಗೆ ಸಮಕಾಲೀನ ಕಾಲಘಟ್ಟದಲ್ಲಿ ನ್ಯಾಯ ಸಾಧಿಸುವಂತೆ ಕಾನೂನನ್ನು ವ್ಯಾಖ್ಯಾನಿಸುವ ಚಾತುರ್ಯವೂ ಹೊಂದಿರಬೇಕು ಎಂದು ಒತ್ತಿ ಹೇಳಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.