ದೇಶದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಆರ್ ಗವಾಯಿ

ನವದೆಹಲಿ: ಭಾರತದ 52 ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ನಡೆದ ಸಂಕ್ಷಿಪ್ತ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸುಪ್ರೀಂಕೋರ್ಟ್ ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಗವಾಯಿ ಅವರು ಅಧಿಕಾರ ಸ್ವೀಕಾರ ಮಾಡಿದರು.
ಕೆ ಜಿ ಬಾಲಕೃಷ್ಣನ್ ಅವರ ನಂತರ ನ್ಯಾಯಾಂಗದ ಮೊದಲ ಬೌದ್ಧ ಸಿಜೆಐ ಮತ್ತು ಎರಡನೇ ದಲಿತ ಮುಖ್ಯಸ್ಥ ಎಂಬ ಹೆಗ್ಗಳಿಕೆಗೆ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ (64) ಪಾತ್ರರಾಗಿದ್ದಾರೆ.
ಸಂಜೀವ್ ಖನ್ನ ಅವರ ನಿವೃತ್ತಿಯಿಂದ ತೆರವಾದ ಈ ಗೌರವಾನ್ವಿತ ಹುದ್ದೆಯನ್ನು ನ್ಯಾಯಮೂರ್ತಿ ಬಿಆರ್ ಗವಾಯಿ ಅವರು ಅಲಂಕರಿಸಿದ್ದು, ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ನವೆಂಬರ್ 23 2025 ರಂದು ನಿವೃತ್ತರಾಗಲಿದ್ದಾರೆ.
ಮಹಾರಾಷ್ಟ್ರದ ಅಮರಾವತಿಯಲ್ಲಿ ನವಂಬರ್ 24, 1960ರಂದು ಜನಿಸಿದ ನ್ಯಾಯಮೂರ್ತಿ ಗವಾಯಿ, ಅಂಬೇಡ್ಕರ್ ತತ್ತ್ವಗಳಲ್ಲಿ ಆಳವಾಗಿ ಬೇರೂರಿರುವ ಕುಟುಂಬದಿಂದ ಬಂದವರು.
ಅವರ ತಂದೆ ಆರ್ಎಸ್ ಗವಾಯಿ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಪ್ರಮುಖ ನಾಯಕರಾಗಿದ್ದರು. ಜೊತೆಗೆ ಬಿಹಾರ ಸಿಕ್ಕಿಂ ಮತ್ತು ಕೇರಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ