ರಾಜಕೀಯ ಹೋರಾಟ ಕೋರ್ಟ್ ಹೊರಗೆ ಇರಲಿ: ಸಚಿವ ಶಿವಾನಂದ ಪಾಟೀಲ್ ಗೆ ಸುಪ್ರೀಂ ಚಾಟಿ: ಮೇಲ್ಮನವಿ ಅರ್ಜಿ ವಜಾ
ನವದೆಹಲಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಸಚಿವ ಶಿವನಾಂದ ಪಾಟೀಲ್ ಅವರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ನಿಮ್ಮ ರಾಜಕೀಯ ಹೋರಾಟಗಳನ್ನ ಕೋರ್ಟ್ ಹೊರಗಿಟ್ಟುಕೊಳ್ಳಿ. ಇಲ್ಲಿ ಬೇಡ ಎಂದು ಸುಪ್ರೀಂಕೋರ್ಟ್ ಕುಟುಕಿದೆ.
ಬಿಜೆಪಿ ಶಾಸಕ ಬಸನಗೌಡ ಆರ್ ಪಾಟೀಲ್ ಯತ್ನಾಳ್ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈ ಅರ್ಜಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ಪೀಠ , ನ್ಯಾಯಾಲಯದ ಹೊರಗಡೆ ರಾಜಕೀಯ ಹೋರಾಟ ಇರಲಿ, ಇಲ್ಲಿ ಬೇಡ ಎಂದು ಯಾವಾಗಲೂ ಎಲ್ಲರಿಗೂ ಹೇಳುತ್ತಿರುವುದಾಗಿ ಹೇಳಿದರು. ಬಿ. ಆರ್ ಗವಾಯಿ ಅವರೊಂದಿಗೆ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ನ್ಯಾಯಪೀಠದಲ್ಲಿದ್ದರು.
ಭಾರತೀಯ ನ್ಯಾಯ ಸುರಕ್ಷಾ ಸಂಹಿತಾ ಅಡಿಯಲ್ಲಿ ಕಾರ್ಯವಿಧಾನವನ್ನು ಅನುಸರಿಸದ ಕಾರಣ ಯತ್ನಾಳ್ ಅವರ ಮಾನನಷ್ಟ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 28, 2024 ರಂದು ರದ್ದುಗೊಳಿಸಿದ್ದು, ಅರ್ಜಿದಾರರು ಹಾಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದಾರೆ ಎಂದು ವಕೀಲರು ಹೇಳಿದರು.
ಈ ವೇಳೆ ಗರಂ ಆದ ನ್ಯಾಯಪೀಠವು, ನಿಮ್ಮ ರಾಜಕೀಯ ಹೋರಾಟ ಕೋರ್ಟ್ ಹೊರಗೆ ಇಟ್ಟುಕೊಳ್ಳಿ. ಕೋರ್ಟ್ಗೆ ರಾಜಕೀಯ ವಿಚಾರ ಯಾಕೆ ತರುತ್ತೀರಿ? ಎಂದು ಚಾಟಿ ಬೀಸಿತು. ಅಲ್ಲದೇ ದಂಡ ಸಹಿತ ಯಾಕೆ ಈ ಅರ್ಜಿಯನ್ನ ವಜಾ ಮಾಡಬಾರದು? ಅರ್ಜಿದಾರರು ಸಚಿವರಲ್ಲವೇ 1 ಲಕ್ಷ ರೂ. ದಂಡ ಯಾಕೆ ವಿಧಿಸಬಾರದು ಎಂದು ಪ್ರಶ್ನಿಸಿತು. ಸಿಜೆಐ ಆಕ್ಷೇಪದ ಬೆನ್ನಲ್ಲೇ ಸಚಿವ ಶಿವಾನಂದ ಪಾಟೀಲ್ ಪರ ವಕೀಲರು ಅರ್ಜಿ ವಾಪಸ್ ಪಡೆದಿದ್ದಾರೆ
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
