ವಕೀಲರ ಮೇಲೆ ಹಲ್ಲೆ ಕೇಸ್ ಗಂಭೀರ ಪರಿಗಣನೆ: ‘ಗೂಂಡಾರಾಜ್ ಸಹಿಸಲ್ಲ’ ಎಂದು CJI ಕಠಿಣ ಎಚ್ಚರಿಕೆ
ನವದೆಹಲಿ: ನ್ಯಾಯಾಲಯದ ಆವರಣದೊಳಗೆಯೇ ವಕೀಲರೊಬ್ಬರ ಮೇಲೆ ಹಲ್ಲೆ , ಇಂತಹ ‘ಗೂಂಡಾರಾಜ್ ‘ಅನ್ನು ನಾವು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಕಠಿಣ ಎಚ್ಚರಿಕೆ ನೀಡಿದರು.
ಫೆಬ್ರವರಿ 7 ರಂದು ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ತಮ್ಮ ಮೇಲೆ ಭೀಕರ ಹಲ್ಲೆ ನಡೆದಿದೆ ಎಂದು ವಕೀಲರೊಬ್ಬರು ಸುಪ್ರೀಂ ಕೋರ್ಟ್ನಲ್ಲಿ ಮೌಖಿಕವಾಗಿ ಮನವಿ ಮಾಡಿದರು. ಈ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯಯ್ಮಲ್ಯ ಬಾಗ್ಚಿ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು.
ಘಟನೆ ಬಗ್ಗೆ ವಿವರಿಸಿದ ಸಂತ್ರಸ್ತ ವಕೀಲರು, “ನಾನು ಎಡಿಜೆ ಹರ್ಜಿತ್ ಸಿಂಗ್ ಪಾಲ್ ಅವರ ನ್ಯಾಯಾಲಯದಲ್ಲಿ ಆರೋಪಿಯ ಪರವಾಗಿ ವಾದಮಂಡಿಸುತ್ತಿದ್ದೆ. ಈ ವೇಳೆ ದೂರುದಾರರ ಪರ ವಕೀಲರು ಅನೇಕ ಗೂಂಡಾಗಳೊಂದಿಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿದರು. ನ್ಯಾಯಾಧೀಶರು ಮತ್ತು ನ್ಯಾಯಾಲಯದ ಸಿಬ್ಬಂದಿಗಳ ಎದುರೇ ಈ ಕೃತ್ಯ ನಡೆದಿದೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ,” ಎಂದು ನ್ಯಾಯಪೀಠದ ಮುಂದೆ ಪ್ರಸ್ತಾಪಿಸಿದರು.
ದೂರುದಾರ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಪೀಠವು, ನ್ಯಾಯಾಲಯದ ಒಳಗೆ ನಡೆಯುವ ಇಂತಹ ಅಶಿಸ್ತು ಮತ್ತು ಹಿಂಸಾಚಾರವು ನ್ಯಾಯಾಂಗ ವ್ಯವಸ್ಥೆಯ ಘನತೆಗೆ ಧಕ್ಕೆ ತರುತ್ತದೆ. ಎಂದು ಆತಂಕ ವ್ಯಕ್ತಪಡಿಸಿತು.
ಇಂತಹ ಘಟನೆಗಳು ಕಾನೂನಿನ ಆಡಳಿತದ ವೈಫಲ್ಯವನ್ನು ತೋರಿಸುತ್ತವೆ. ಇದು ನ್ಯಾಯದಾನ ವ್ಯವಸ್ಥೆಯ ಮೇಲಿನ ಹಲ್ಲೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ,” ಈ ವಿಚಾರವಾಗಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಲಿಖಿತ ದೂರು ನೀಡಿ ಎಂದು ಸೂಚಿಸಿತು. ಹಾಗೆಯೇ ಅದರ ಪ್ರತಿಯನ್ನು ತಮಗೂ ಕಳುಹಿಸುವಂತೆ ವಕೀಲರಿಗೆ ನಿರ್ದೇಶನ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
