07/03/2026

Law Guide Kannada

Online Guide

ಯಾವುದೇ ನ್ಯಾಯಾಲಯ ಪಕ್ಷಕಾರರಿಗೆ, ವಕೀಲರಿಗೆ ವೀಡಿಯೋ ಕಾನ್ಫರೆನ್ಸ್ ಸೌಲಭ್ಯ ನಿರಾಕರಿಸುವಂತಿಲ್ಲ- ಹೈಕೋರ್ಟ್

ಚೆನ್ನೈ: ಯಾವುದೇ ನ್ಯಾಯಾಲಯ ಪಕ್ಷಕಾರರಿಗೆ, ವಕೀಲರಿಗೆ ವೀಡಿಯೋ ಕಾನ್ಫರೆನ್ಸ್ ಸೌಲಭ್ಯ ನಿರಾಕರಿಸುವಂತಿಲ್ಲ. ಹೈಕೋರ್ಟ್ ನಿಯಮದಂತೆ ವೀಡಿಯೋ ಸೌಲಭ್ಯ ನೀಡಬೇಕು. ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ.

2013ರಲ್ಲಿ ನಡೆದಿದ್ದ ವಿವಿಧ ಬಾಂಬ್ ಸ್ಪೋಟದ ಪ್ರಕರಣಗಳಿಗೆ ಸಂಬಂಧಿಸಿದಂತೆ 11 ವರ್ಷಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇದ್ದ ಫಕ್ರುದ್ದೀನ್ ಎಂಬ ರಿಮಾಂಡ್ ಕೈದಿ ತನಗೆ ಏಕಾಂತ ಸೆರೆವಾಸ ಮುಂದುವರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ನ್ಯಾ. ಎಸ್.ಎಂ. ಸುಬ್ರಮಣಿಯಂ ಮತ್ತು ನ್ಯಾ. ಎಂ. ಜ್ಯೋತಿರಾಮನ್ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಕೈದಿ ಫಕ್ರುದ್ದೀನ್ ತಾನು ಸಲ್ಲಿಸಿದ್ದ ಅರ್ಜಿಯಲ್ಲಿ ಪೂನಮಲ್ಲಿಯ ವಿಚಾರಣಾ ನ್ಯಾಯಾಲಯ ದೂರದಲ್ಲಿದೆ. ವಕೀಲರು ಅಲ್ಲಿಗೆ ಭೌತಿಕ ವಿಚಾರಣೆಗೆ ತೆರಳಲು ಅನಾನುಕೂಲ ಇದೆ. ಅಲ್ಲಿಗೆ ಯಾರೂ ವಾದ ಮಂಡಿಸಲು ಬರುವುದಿಲ್ಲ. ಅದ್ದರಿಂದ ತನಗೆ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತನ್ನ ಅರ್ಜಿಯಲ್ಲಿ ನಿವೇದಿಸಿಕೊಂಡಿದ್ದ. ಹಾಗೆಯೇ ನ್ಯಾಯಾಲಯದಲ್ಲಿ ಶೌಚಾಲಯ, ಕುಡಿಯುವ ನೀರಿನ ಕೊರತೆ ಹಾಗೂ ವೀಡಿಯೋ ಕಾನ್ಸರೆನ್ಸ್ ಮೂಲಕ ವಕೀಲರಿಗೆ ಹಾಜರಾಗಲು ಅವಕಾಶ ನೀಡದಿರುವುದು ಸೇರಿದಂತೆ ಹಲವು ಕೊರತೆಗಳನ್ನು ವಕೀಲರು ಹೈಕೋರ್ಟ್ ನ್ಯಾಯಪೀಠದ ಗಮನಕ್ಕೆ ತಂದರು. ಈ ದೂರುಗಳಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸುವಂತೆ ನ್ಯಾಯಪೀಠ ಇದೇ ವೇಳೆ ನಿರ್ದೇಶನ ನೀಡಿತು.

ವಿಚಾರಣಾ ನ್ಯಾಯಾಲಯದಲ್ಲಿ ವಕೀಲರನ್ನು ಸೌಜನ್ಯದಿಂದ ನಡೆಸಿಕೊಳ್ಳುವುದಿಲ್ಲ. ಪ್ರಕರಣದ ವಿಚಾರಣೆಗಾಗಿ ಗಂಟೆಗಟ್ಟಲೆ ಕಾಯುವಾಗ ಕುಡಿಯಲು ನೀರು ಕೂಡ ಸಿಗುವುದಿಲ್ಲ ಎಂಬ ಆರೋಪವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.

ವಿಶೇಷ ನ್ಯಾಯಾಲಯವು ವಕೀಲರು ವೀಡಿಯೋ ಕಾನ್ಸರೆನ್ಸ್ ಮೂಲಕ ಹಾಜರಾಗಲು ಅವಕಾಶ ನೀಡುತ್ತಿಲ್ಲ ಎಂಬುದು ಒಂದು ದೂರು. ಪ್ರಸ್ತುತ ಹೈಕೋರ್ಟ್ ನಿಯಮದಂತೆ ವೀಡಿಯೋ ಕಾನ್ವರೆನ್ಸ್ ಸೌಲಭ್ಯವನ್ನು ಯಾವುದೇ ನ್ಯಾಯಾಲಯ ತನ್ನ ಪಕ್ಷಕಾರರಿಗೆ ಮತ್ತು ವಕೀಲರಿಗೆ ನಿರಾಕರಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸೂಚನೆ ನೀಡಿತು.

ಇದೇ ವೇಳೆ, ಕೈದಿ ತಾನು ಬಿ.ಎ. ರಾಜ್ಯಶಾಸ್ತ್ರದಲ್ಲಿ ಎರಡನೇ ವರ್ಷ ಓದುತ್ತಿದ್ದೇನೆ. ಅದಕ್ಕೆ ಜೈಲು ಅಧಿಕಾರಿಗಳು ಶಿಕ್ಷಣ ಮುಂದುವರಿಸಲು ಪುಸ್ತಕಗಳನ್ನು ಒದಗಿಸುತ್ತಿಲ್ಲ ಎಂದು ನ್ಯಾಯಾಲಯಕ್ಕೆ ದೂರು ನೀಡಿದ್ದು ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಖೈದಿಗಳಿಗೆ ಶಿಕ್ಷಣ ನೀಡುವುದು ಭರವಸೆ ಮತ್ತು ಆಕಾಂಕ್ಷೆಯ ಸೆಲೆಯಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.