ಕಾರ್ಮಿಕನ ಬೆವರು ಆರುವ ಮೊದಲು ವೇತನ ಕೊಟ್ಟುಬಿಡಿ: ವಕೀಲರ ಬಾಕಿ ಶುಲ್ಕ ಪಾವತಿಸಲು ಹೈಕೋರ್ಟ್ ನಿರ್ದೇಶನ
ಚೆನ್ನೈ: ಪಾವತಿಸದೇ ಉಳಿದಿರುವ ವಕೀಲರ ಕಾನೂನು ಶುಲ್ಕವನ್ನು ತಕ್ಷಣ ಪಾವತಿಸುವಂತೆ ಪ್ರವಾದಿ ಮುಹಮ್ಮದ್ ಅವರ ಪ್ರಸಿದ್ದ ಬೋಧನೆ ‘ಕಾರ್ಮಿಕನ ಬೆವರು ಆರುವ ಮೊದಲು ವೇತನ ಕೊಟ್ಟುಬಿಡಿ’ ಮಾತನ್ನು ಉಲ್ಲೇಖಿಸಿ, ಮದ್ರಾಸ್ ಹೈಕೋರ್ಟ್ ಪುರಸಭೆಗೆ ನಿರ್ದೇಶನ ನೀಡಿದೆ.
ಕಾರ್ಪೊರೇಷನ್ ನ ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ಪ್ರತಿನಿಧಿಸಿದ್ದ ವಕೀಲ ಪಿ.ತಿರುಮಲೈ ಅವರು ತಮ್ಮ ಬಾಕಿ ಶುಲ್ಕವಾದ 13.05 ಲಕ್ಷ ರೂಪಾಯಿ ಪಾವತಿಸದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ಪೀಠವು. ಕಾರ್ಮಿಕ ಮತ್ತು ಸೇವಾ ನ್ಯಾಯಶಾಸ್ತ್ರಕ್ಕೆ ನ್ಯಾಯಯುತ ತತ್ವ ಸಮಾನವಾಗಿ ಅನ್ವಯಿಸಬೇಕು. ಈ ತತ್ವವು ನ್ಯಾಯಯುತ ಆಡಳಿತದ ಮೂಲಭೂತ ಅಂಶವಾಗಿದೆ ಎಂದು ಹೇಳಿತು.
ಈ ಹಿಂದೆ ವಕೀಲರ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ಹೈಕೋರ್ಟ್ ನಿಗಮಕ್ಕೆ ಸೂಚಿಸಿದ್ದರೂ, ಹಕ್ಕಿನ ಪ್ರಮುಖ ಭಾಗವನ್ನು ತಿರಸ್ಕರಿಸಿದ ಆದೇಶ ಹೊರಡಿಸಲಾಗಿತ್ತು. ಇದನ್ನೇ ಪ್ರಶ್ನಿಸಿ ಪ್ರಸ್ತುತ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಅರ್ಜಿದಾರರು ಹಾಜರಿದ್ದ ಪ್ರಕರಣಗಳ ವಿವರಗಳನ್ನು ಸಂಗ್ರಹಿಸುವ ಉದ್ದೇಶದಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಲು ನ್ಯಾಯಾಲಯ ಅವಕಾಶ ನೀಡಿತು. ಶುಲ್ಕ ಪಾವತಿಯಲ್ಲಿ 18 ವರ್ಷಗಳ ಕಾಲ ಈಗಾಗಲೇ ವಿಳಂಬವಾಗಿದೆ ಎಂದು ಗಮನಿಸಿದ ನ್ಯಾಯಾಲಯ, ಬಡ್ಡಿ ಇಲ್ಲದೆ ಎರಡು ತಿಂಗಳೊಳಗೆ ಬಾಕಿ ಬಿಲ್ ಗಳನ್ನು ಇತ್ಯರ್ಥಪಡಿಸುವಂತೆ ನಿಗಮಕ್ಕೆ ನಿರ್ದೇಶನ ನೀಡಿತು. ರಾಜ್ಯದಲ್ಲಿ ಒಂದು ಡಜನ್ ಗೂ ಹೆಚ್ಚು ಹೆಚ್ಚುವರಿ ಅಡ್ವಕೇಟ್ ಜನರಲ್ ಗಳ ನೇಮಕವನ್ನು ನ್ಯಾಯಮೂರ್ತಿ ಸ್ವಾಮಿನಾಥನ್ “ಮುಜುಗರದ ವಿಷಯ” ಎಂದು ಹೇಳಿದರು.
ಅನೇಕ ಕಾನೂನು ಅಧಿಕಾರಿಗಳನ್ನು ನೇಮಿಸಿದರೆ, ಪ್ರತಿಯೊಬ್ಬರಿಗೂ ಸೂಕ್ತ ಕೆಲಸ ಒದಗಿಸುವ ಅಗತ್ಯವಿದ್ದು, ಇಲ್ಲದಿದ್ದರೆ ಅನಗತ್ಯವಾಗಿ ಪ್ರಕರಣಗಳನ್ನು ಹಂಚಬೇಕಾದ ಪರಿಸಿತಿ ಉಂಟಾಗುತದೆ ಎಂದು ಹೇಳಿದರು. ಹಿರಿಯ ವಕೀಲರು ಹಾಗೂ ಕೆಲವು ಕಾನೂನು ಅಧಿಕಾರಿಗಳಿಗೆ ಪಾವತಿಸಲಾಗುತ್ತಿರುವ ಶುಲ್ಕದ ಪ್ರಮಾಣವನ್ನು ಪ್ರಶ್ನಿಸಿದ ನ್ಯಾಯಪೀಠವು, ಉತ್ತಮ ಆಡಳಿತವು ಸಾರ್ವಜನಿಕ ಹಣವನ್ನು ಸಮಚಿತ್ತವಾಗಿ ಬಳಸಬೇಕು, ಕೆಲವರಿಗೆ ಮಾತ್ರ ಅಸಮಂಜಸವಾಗಿ ವಿತರಿಸಬಾರದು ಎಂದು ಸ್ಪಷ್ಟಪಡಿಸಿತು.
ತಿರುಮಲೈ ಅವರ ಒಟ್ಟು ಕೇಳಿರುವ ಹಕ್ಕು ಅವರು ಹಾಜರಿದ್ದ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಅಲ್ಪ ಮೊತ್ತವಾಗಿದೆ. ಸರಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಕೆಲವು ಹಿರಿಯ ವಕೀಲರಿಗೆ ಪಾವತಿಸಿರುವ “ಅಗಾಧವಾಗಿ ಹೆಚ್ಚಿನ ಮೊತ್ತ”ಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿತು.
ಏನಿದು ಪ್ರಕರಣ..
1992ರಿಂದ 2006ರವರೆಗೆ 14 ವರ್ಷಗಳ ಕಾಲ ತಿರುಮಲೈ ಅವರು ಮಧುರೈ ನಗರ ಮುನ್ಸಿಪಲ್ ಕಾರ್ಪೊರೇಷನ್ ಪರವಾಗಿ ಸ್ಥಾಯಿ ವಕೀಲರಾಗಿದ್ದು, ಮಧುರೈ ಜಿಲ್ಲಾ ನ್ಯಾಯಾಲಯಗಳಲ್ಲಿ ಸುಮಾರು 818 ಪ್ರಕರಣಗಳಲ್ಲಿ ನಿಗಮವನ್ನು ಪ್ರತಿನಿಧಿಸಿದ್ದರು ಎಂದು ದಾಖಲೆಗಳು ಸೂಚಿಸುತ್ತವೆ. ಆ ಎಲ್ಲಾ ಪ್ರಕರಣಗಳ ಪ್ರಮಾಣೀಕೃತ ಪ್ರತಿಗಳನ್ನು ಪಡೆಯಲು ಅರ್ಜಿದಾರರಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ 818 ತೀರ್ಪುಗಳ ಪ್ರಮಾಣೀಕೃತ ಪ್ರತಿಗಳನ್ನು ಎರಡು ತಿಂಗಳೊಳಗೆ ಸಂಗ್ರಹಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತು. ಈ ಪ್ರಕ್ರಿಯೆಗೆ ಆಗುವ ವೆಚ್ಚವನ್ನು ಮೊದಲು ನಿಗಮವೇ ಭರಿಸಿ, ಅಂತಿಮ ಇತ್ಯರ್ಥದ ವೇಳೆ ಆ ಮೊತ್ತವನ್ನು ಕಡಿತಗೊಳಿಸಬೇಕೆಂದು ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
