07/03/2026

Law Guide Kannada

Online Guide

ನಿಯಮ ಸಡಿಲ: ಇನ್ಮುಂದೆ ನೇರವಾಗಿ ಹೈಕೋರ್ಟ್ ನಲ್ಲೇ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಗೆ ಅವಕಾಶ

ನವದೆಹಲಿ: ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ನಿಯಮವನ್ನ ಸಡಿಲಿಸಲಾಗಿದ್ದು, ನಿರೀಕ್ಷಣಾ ಜಾಮೀನು ಕೋರಿ ಸೆಷನ್ಸ್ ಕೋರ್ಟನ್ನು ಮೊದಲು ಸಂಪರ್ಕಿಸದೇ ಹೈಕೋರ್ಟ್ ನಲ್ಲೇ ನೇರವಾಗಿ ಅರ್ಜಿ ಸಲ್ಲಿಸಬಹುದು.

ಹೌದು, ಸುಪ್ರೀಂಕೋರ್ಟ್ ಈ ಕುರಿತು ಮಹತ್ವದ ತೀರ್ಪು ನೀಡಿದ್ದು, ನಿರೀಕ್ಷಣಾ ಜಾಮೀನಿಗೆ ಮೊದಲು ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023ರ ಸೆಕ್ಷನ್ 482 ರ ಅಡಿಯಲ್ಲಿ ಹೈಕೋರ್ಟ್ ನಲ್ಲಿ ನೇರವಾಗಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಂಜೀತ್ ಸಿಂಗ್ ಎಂಬುವವರು ಸಲ್ಲಿಸಿದ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ. ಸಂಜಯ್ ಕುಮಾರ್ ಮತ್ತು ನ್ಯಾ. ಎನ್.ವಿ. ಅಂಜಾರಿಯಾ ಅವರಿದ್ದ ವಿಭಾಗೀಯ ನ್ಯಾಯಪೀಠವು ದಿನಾಂಕ 7.8.2025 ರಂದು ಈ ತೀರ್ಪು ನೀಡಿದೆ.

ಅಲಹಾಬಾದ್ ಹೈಕೋರ್ಟ್ ಅರ್ಜಿದಾರರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಸ್ವೀಕರಿಸಲು ನಿರಾಕರಿಸಿತ್ತು ಮತ್ತು ಬದಲಿಗೆ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಲು ನಿರ್ದೇಶಿಸಿತ್ತು. ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಮಂಜೀತ್ ಸಿಂಗ್, ಕಾನೂನಿನಡಿಯಲ್ಲಿ ಗುರುತಿಸಲ್ಪಟ್ಟ ಏಕಕಾಲಿಕ ನ್ಯಾಯವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರೀಕ್ಷಣಾ ಜಾಮೀನನ್ನು ಕೋರಿ ನೇರವಾಗಿ ಅಲಹಾಬಾದ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಬದಿಗಿಟ್ಟು ಅರ್ಜಿಗಳನ್ನು ನಿರ್ವಹಿಸುವಾಗ ಈ ಏಕಕಾಲಿಕ ನ್ಯಾಯವ್ಯಾಪ್ತಿಯನ್ನು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಪೀಠವು ಗಮನಿಸಿತು.

ಆರೋಪಿಯು ಹೈಕೋರ್ಟ್ಗೆ ಹೋಗುವ ಮೊದಲು ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಬೇಕು ಎಂಬುದು ನಿಯಮವಿಲ್ಲ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ರ ಸೆಕ್ಷನ್ 482 ರ ಅಡಿಯಲ್ಲಿ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ಎರಡೂ ಏಕಕಾಲಿಕ ನ್ಯಾಯವ್ಯಾಪ್ತಿಯನ್ನು ಹೊಂದಿವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅರವಿಂದ್ ಕೇಜಿವಾಲ್ vs. ಜಾರಿ ನಿರ್ದೇಶನಾಲಯ (2024) ಕನುಮುರಿ ರಘುರಾಮ ಕೃಷ್ಣಂ ರಾಜು vs. ರಾಜ್ಯ ಆಂಧ್ರ ಪ್ರದೇಶ (2021) ಪ್ರಕರಣಗಳಲ್ಲಿ ತನ್ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, “ಆರೋಪಿಯು ನಿಯಮದಂತೆ, ಹೈಕೋರ್ಟ್ ಅನ್ನು ಸಂಪರ್ಕಿಸುವ ಮೊದಲು ಮೊದಲ ಹಂತದಲ್ಲಿ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸುವ ಅಗತ್ಯವಿಲ್ಲ” ಎಂದಿದೆ.

‘ಕಾನೂನುಬದ್ಧವಲ್ಲದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಆರೋಪಿಯನ್ನು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸದೆ, ಮೊದಲ ಹಂತದಲ್ಲಿಯೇ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ಹೈಕೋರ್ಟ್ ತನ್ನ ವಿವೇಚನೆಯನ್ನು ಬಳಸಬೇಕಾಗಿತ್ತು ಎಂದು ಅಭಿಪ್ರಾಯಿಸಿರುವ ನ್ಯಾಯಪೀಠವು, ಹೈಕೋರ್ಟ್ ಅಂತಹ ವಿಚಾರಣೆಯನ್ನು ಕೈಗೊಳ್ಳಲು ವಿಫಲವಾದ ಕಾರಣ, ನಾವು ಆಕ್ಷೇಪಾರ್ಹ ಆದೇಶಗಳನ್ನು ರದ್ದುಗೊಳಿಸಬೇಕು ಮತ್ತು ಜಾಮೀನು ಅರ್ಜಿಗಳ ಪರಿಗಣನೆಗಾಗಿ ವಿಷಯಗಳನ್ನು ಹೈಕೋರ್ಟ್ಗೆ ರವಾನಿಸಬೇಕು ಮತ್ತು ವಾಸ್ತವಾಂಶಗಳ ಮೇಲೆ ಮತ್ತು ಕಾನೂನಿನ ಪ್ರಕಾರ ಹೊಸದಾಗಿ ವಿಚಾರಣೆ ನಡೆಸಬೇಕು. ಇದು ಎರಡನೇ ಸುತ್ತಿನ ವಿಚಾರಣೆಯಾಗಿದೆ ಎಂದು ಪರಿಗಣಿಸಿ, ಸಾಧ್ಯವಾದಷ್ಟು ಬೇಗ ಈ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ಗೆ ನ್ಯಾಯಪೀಠ ಸೂಚನೆ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.