20/05/2025

Law Guide Kannada

Online Guide

ಪತಿ-ಪತ್ನಿ ಡೈವರ್ಸ್ ಪಡೆದಾಗ ಮಕ್ಕಳು ಯಾವ ಜಾತಿಗೆ ಸೇರ್ತಾರೆ?ಸುಪ್ರೀಂ ಕೊಟ್ಟ ತೀರ್ಪಿದು

ನವದೆಹಲಿ: ಮಕ್ಕಳ ಜಾತಿ ತಂದೆ ಜಾತಿಯಿಂದಲೋ ಅಥವಾ ತಾಯಿ ಜಾತಿಯಿಂದಲೋ..? ಯಾರ ಜಾತಿಯಿಂದ ನಿರ್ಧಾರವಾಗುತ್ತದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ
ಸಂವಿಧಾನದ 142ನೇ ವಿಧಿಯಡಿ ತನ್ನ ವಿಶೇಷಾಧಿಕಾರವನ್ನು ಬಳಸಿಕೊಂಡು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ದಲಿತೇತರ ಮಹಿಳೆ ಮತ್ತು ದಲಿತ ಪುರುಷನ ನಡುವಿನ ಮದುವೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು, ಕಳೆದ ಆರು ವರ್ಷಗಳಿಂದ ತಾಯಿಯೊಂದಿಗೆ ಇರುವ ಅಪ್ರಾಪ್ತ ಮಕ್ಕಳಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುವಂತೆ ಪತಿಗೆ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು, ಜೂಹಿ ಪೋರಿಯಾ ನೀ ಜವಾಲ್ಕರ್ ಮತ್ತು ಪ್ರದೀಪ್ ಪೋರಿಯಾ ದಂಪತಿಗೆ ವಿಚ್ಚೇದನ ಮಂಜೂರು ಮಾಡಿದ್ದು ದಲಿತೇತರ ಮಹಿಳೆಯೊಬ್ಬಳು ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಮದುವೆಯಾದ ಮಾತ್ರಕ್ಕೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಲು ಸಾಧ್ಯವಿಲ್ಲವಾದರೂ ಪರಿಶಿಷ್ಟ ಜಾತಿಯ ಪುರುಷನಿಗೆ ಜನಿಸಿದ ಅವರ ಮಕ್ಕಳು ಎಸ್​ಸಿ ಟ್ಯಾಗ್​ ಗೆ ಅರ್ಹರಾಗಿರುತ್ತಾರೆ ಎಂದು ಅಭಿಪ್ರಾಯ ಪಟ್ಟಿದೆ. ಸುಪ್ರೀಂ ಕೋರ್ಟ್ ಅನೇಕ ತೀರ್ಪುಗಳಲ್ಲಿ ಈ ತತ್ವವನ್ನು ಪುನರುಚ್ಚರಿಸಿದೆ ಮತ್ತು 2018 ರಲ್ಲಿ ನೀಡಲಾದ ತೀರ್ಪೊಂದರಲ್ಲಿ, “ಜಾತಿಯನ್ನು ಹುಟ್ಟಿನಿಂದ ನಿರ್ಧರಿಸಲಾಗುತ್ತದೆ ಮತ್ತು ಪರಿಶಿಷ್ಟ ಜಾತಿಯ (ಸಮುದಾಯ) ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಜಾತಿಯನ್ನು ಬದಲಾಯಿಸಲಾಗುವುದಿಲ್ಲ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಮಹಿಳೆಯೊಬ್ಬಳ ಪತಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಕಾರಣಕ್ಕೇ ಆಕೆಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ.” ಎಂದು ಹೇಳಿತ್ತು. ಪ್ರಸ್ತುತ ಪ್ರಕರಣದಲ್ಲಿ, ಹನ್ನೊಂದು ವರ್ಷದ ಮಗ ಮತ್ತು ಆರು ವರ್ಷದ ಮಗಳು ಕಳೆದ ಆರು ವರ್ಷಗಳಿಂದ ರಾಯ್ಪುರದ ತನ್ನ ಹೆತ್ತವರ ಮನೆಯಲ್ಲಿ ದಲಿತೇತರ ಮಹಿಳೆಯೊಂದಿಗೆ ವಾಸಿಸುತ್ತಿದ್ದಾರೆ. ಸದ್ಯ ದಂಪತಿಗೆ ಸುಪ್ರೀಂ ಕೋರ್ಟ್ ವಿಚ್ಛೇದನ ಮಂಜೂರು ಮಾಡಿದ್ದು, ಮಕ್ಕಳು ದಲಿತೇತರ ಕುಟುಂಬದಲ್ಲಿಯೇ ಇರಲಿದ್ದಾರೆ. ಆದಾಗ್ಯೂ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಉದ್ಯೋಗದ ಉದ್ದೇಶಕ್ಕಾಗಿ ಅವರನ್ನು ಪರಿಶಿಷ್ಟ ಜಾತಿಗೆ ಸೇರಿದವರೆಂದೇ ಪರಿಗಣಿಸಲಾಗುತ್ತದೆ.

ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಆರು ತಿಂಗಳೊಳಗೆ ಇಬ್ಬರು ಮಕ್ಕಳಿಗೆ ಎಸ್​ಸಿ ಪ್ರಮಾಣಪತ್ರಗಳನ್ನು ಪಡೆಯುವಂತೆ ಪತಿಗೆ ನ್ಯಾಯಮೂರ್ತಿ ಕಾಂತ್ ನೇತೃತ್ವದ ನ್ಯಾಯಪೀಠ ಸೂಚಿಸಿದ್ದು ಪ್ರವೇಶ ಮತ್ತು ಬೋಧನಾ ಶುಲ್ಕ, ಊಟ ಮತ್ತು ವಸತಿ ವೆಚ್ಚಗಳು ಸೇರಿದಂತೆ ಸ್ನಾತಕೋತ್ತರ ಪದವಿಯವರೆಗೆ ಅವರ ಶಿಕ್ಷಣದ ಎಲ್ಲಾ ವೆಚ್ಚಗಳನ್ನು ತಂದೆಯೇ ಭರಿಸುತ್ತಾರೆ ಎಂದು ಅದು ಹೇಳಿದೆ.
ಮಹಿಳೆ ಮತ್ತು ಮಕ್ಕಳ ಜೀವನಪರ್ಯಂತ ನಿರ್ವಹಣೆಗಾಗಿ ಪುರುಷನು ಮಹಿಳೆಗೆ ಒಂದು ಬಾರಿಯ ಪರಿಹಾರವಾಗಿ ಈಗಾಗಲೇ 42 ಲಕ್ಷ ರೂ. ಪಾವತಿಸಿದ್ದು, ಅಲ್ಲದೆ ವ್ಯಕ್ತಿಯು ರಾಯ್ಪುರದಲ್ಲಿ ತನ್ನ ಒಡೆತನದಲ್ಲಿರುವ ಪ್ಲಾಟ್ ಒಂದನ್ನು ಸಹ ಮಹಿಳೆಗೆ ನೀಡಬೇಕು.

ಪರಸ್ಪರರ ವಿರುದ್ಧ ಪಕ್ಷಗಳು ದಾಖಲಿಸಿದ ಅಡ್ಡ-ಎಫ್ಐಆರ್ ಮತ್ತು ಪ್ರಕರಣಗಳನ್ನು ರದ್ದುಗೊಳಿಸಿದ ನ್ಯಾಯಪೀಠವು ಮುಂದಿನ ವರ್ಷ ಆಗಸ್ಟ್ 31 ರೊಳಗೆ ಮಹಿಳೆಯ ವೈಯಕ್ತಿಕ ಬಳಕೆಗಾಗಿ ದ್ವಿಚಕ್ರ ವಾಹನವೊಂದನ್ನು ಖರೀದಿಸಿ ನೀಡುವಂತೆ ವಿಚ್ಛೇದನಕ್ಕಾಗಿ ಷರತ್ತು ಹಾಕಿದೆ.

ತಂದೆಯು ನಿಯಮಿತವಾಗಿ ಮಕ್ಕಳನ್ನು ಭೇಟಿ ಮಾಡಲು ಅನುಕೂಲ ಮಾಡಿಕೊಡಬೇಕು, ಅವರನ್ನು ರಜೆಯ ಮೇಲೆ ಕರೆದೊಯ್ಯಲು ಅವಕಾಶ ನೀಡಬೇಕು ಮತ್ತು ಅವರ ನಡುವೆ ಉತ್ತಮ ಸಂಬಂಧವನ್ನು ಬೆಳೆಸಬೇಕು ಎಂದು ಸುಪ್ರೀಂ ಕೋರ್ಟ್ ಮಹಿಳೆಗೆ ಸೂಚನೆ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.