ಸರ್ಕಾರಿ ನೌಕರ ಮೃತಪಟ್ಟರೇ ಆತನ ಸಹೋದರಿಗೆ ಅನುಕಂಪದ ಆಧಾರದ ನೌಕರಿ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ..?
ಬೆಂಗಳೂರು: ಅವಲಂಬನೆಯನ್ನು ದೃಢೀಕರಿಸದಿದ್ದಾಗ ಅನುಕಂಪದ ಆಧಾರದ ನೌಕರಿಯನ್ನ ನೀಡಲಾಗದು. ಹೀಗಾಗಿ ಸರ್ಕಾರಿ ನೌಕರ ಮೃತಪಟ್ಟಲ್ಲಿ ಆತನ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ತುಮಕೂರು ಜಿಲ್ಲೆ ಗೆದ್ದಹಳ್ಳಿ ನಿವಾಸಿ ಪಲ್ಲವಿ ಎಂಬುವರು ಬೆಸ್ಕಾಂನಲ್ಲಿ ಲೈನ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ತನಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬೇಕೆಂದು ಕೋರಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಅವಲಂಬನೆ ದೃಢೀಕರಿಸದಿದ್ದಾಗ ಅನುಕಂಪದ ನೌಕರಿ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿ ಅರ್ಜಿ ವಜಾಗೊಳಿಸಿದೆ.
ಮೇಲ್ಮನವಿದಾರರ ಸಹೋದರ (ಮೃತ ನೌಕರ) ಸಾವನ್ನಪ್ಪಿದ ವೇಳೆ ಅವರ ಆದಾಯದ ಮೇಲೆ ತಾನು ಅವಲಂಬಿಸಿದೆ ಎಂಬುದನ್ನು ದೃಢಪಡಿಸುವ ಯಾವುದೇ ಸಾಕ್ಷಿಯನ್ನು ಮೇಲ್ಮನವಿದಾರರು ಸಲ್ಲಿಸಿಲ್ಲ. ಹಾಗೆಯೇ ಅನುಕಂಪದ ಉದ್ಯೋಗ ಕ್ಷೇಮು ಸಮರ್ಥಿಸಿಕೊಳ್ಳಲು ಮೃತ ನೌಕರನ ಕುಟುಂಬವು ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿದೆ ಎಂಬುದನ್ನು ದೃಢಪಡಿಸಲು ದಾಖಲೆಗಳಿಲ್ಲ. ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶ ಸೂಕ್ತವಾಗಿದ್ದು, ಈ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸಕಾರಣಗಳಿಲ್ಲ ಎಂದು ವಿಭಾಗೀಯ ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತು.
ಕರ್ನಾಟಕ ನಾಗರಿಕ ಸೇವೆಗಳ ಅನುಕಂಪದ ಆಧಾರದ ನೇಮಕಾತಿ ನಿಯಮಗಳು 1996ರ 2(1) (ಬಿ) ಪ್ರಕಾರ ಒಂದು ವೇಳೆ ಸರ್ಕಾರಿ ನೌಕರನಾಗಿರುವ ಪುರುಷ ಅನಾರೋಗ್ಯದಿಂದ ಸೇವಾವಧಿಯಲ್ಲಿ ಮೃತಪಟ್ಟಲ್ಲಿ ಅವರನ್ನು ಅವಲಂಬಿಸಿರುವ ವಿಧವಾ ಪತ್ನಿ, ಮಗ ಅಥವಾ ಮಗಳು (ಅವಿವಾಹಿತೆ, ವಿವಾಹಿತ, ವಿಚ್ಛೇದಿತೆ ಹಾಗೂ ವಿಧವೆ) ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಬಹುದು ಎಂದು ಕಾನೂನು ಸ್ಪಷ್ಟಪಡಿಸುತ್ತದೆ. ಈ ವ್ಯಾಖ್ಯಾನದಲ್ಲಿ ಸಹೋದರಿಯನ್ನು ಸೇರಿಸಿಲ್ಲ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
