23/04/2026

Law Guide Kannada

Online Guide

ವಿಲ್ ಆಧಾರದ ಮೇಲೆ ಕಂದಾಯ ದಾಖಲೆಗಳ ಬದಲಾವಣೆ ಮಾಡಬಹುದೇ? : ಸವಿವರವಗಿ ಸ್ಪಷ್ಟಪಡಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ವಿಲ್ ಆಧಾರದ ಮೇಲೆ ಭೂ ದಾಖಲೆಗಳಲ್ಲಿ ಖಾತಾ ಬದಲಾವಣೆ ಮಾಡುವುದಕ್ಕೆ ಯಾವುದೇ ಕಾನೂನು ಅಡೆತಡೆ ಇಲ್ಲ. ವಿಲ್ ಆಧಾರದ ಮೇಲೆ ಕಂದಾಯ ದಾಖಲೆಗಳ ಬದಲಾವಣೆ (ಮ್ಯೂಟೇಶನ್) ಮಾಡಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

‘ತಾರಾಚಂದ್ರ ವಿರುದ್ಧ ಭಾವರ್ಲಾಲ್ ಮತ್ತಿತರರು” ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ವಿಭಾಗೀಯ ನ್ಯಾಯಪೀಠವು, ವಿಲ್ ಆಧಾರದಲ್ಲಿ ಮ್ಯೂಟೇಶನ್ ಅರ್ಜಿಗಳನ್ನು ತಿರಸ್ಕರಿಸಲಾಗದು. ವಿಲ್ ಪ್ರಕಾರ ಕಂದಾಯ ದಾಖಲೆಗಳ ಬದಲಾವಣೆ ಮಾಡಬಹುದು ಎಂದು ತಿಳಿಸಿದೆ.

ಈ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಪಡಿಸಿ, ನೋಂದಾಯಿತ ವಿಲ್ ಆಧಾರದಲ್ಲಿ ಮಾಡಿದ ಖಾತಾ ಬದಲಾವಣೆಯನ್ನು ಸುಪ್ರೀಂ ಕೋರ್ಟ್ ಪುನಃಸ್ಥಾಪಿಸಿದೆ. ಆದರೆ, ಆ ದಾಖಲೆಗಳು ಆಸ್ತಿಯ ಹಕ್ಕಿನ ಕುರಿತು ಯಾವುದೇ ನಾಗರಿಕ ವ್ಯಾಜ್ಯಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂಬುದನ್ನೂ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕಂದಾಯ ದಾಖಲೆಗಳಲ್ಲಿ ಖಾತಾ ಬದಲಾವಣೆಯಿಂದ ಆಸ್ತಿಯ ಹಕ್ಕು ದೊರೆಯುವುದಿಲ್ಲ; ಅದು ಕೇವಲ ರಾಜಸ್ವ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದು, ವಿಲ್ ಮಾನ್ಯತೆ ಮತ್ತು ಜಾರಿಗೊಳಿಸುವ ಕುರಿತು ತತ್ವಗಳನ್ನು ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ…
ಮಧ್ಯಪ್ರದೇಶದ ಭೋಪಾಲಿ ಮೌಜಾದಲ್ಲಿರುವ ಕೃಷಿ ಭೂಮಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಭೂಮಿ ರೋಡಾ ಅಲಿಯಾಸ್ ರೊಡಿಲಾಲ್ ಅವರ ಹೆಸರಿನಲ್ಲಿ ದಾಖಲಾಗಿತ್ತು. 2019ರ ನವೆಂಬರ್ ನಲ್ಲಿ ಅವರ ರೊಡಿಲಾಲ್ ನಿಧನದ ನಂತರ ಮೇಲ್ಮನವಿದಾರ ತಾರಾಚಂದ್ರ ಅವರು 2017ರ ಮೇ ತಿಂಗಳಲ್ಲಿ ರೊಡಿಲಾಲ್ ಅವರು ಮಾಡಿದ್ದ ನೋಂದಾಯಿತ ವಿಲ್ ಆಧಾರದ ಮೇಲೆ ಭೂ ದಾಖಲೆಗಳ ಬದಲಾವಣೆಗೆ ಅರ್ಜಿ ಸಲ್ಲಿಸಿದರು.

ತಹಶೀಲ್ದಾರ್ ಮಾನಸಾ ಅವರು ಸಾರ್ವಜನಿಕ ನೋಟಿಸ್ ನೀಡಿದ ನಂತರ, ಆಕ್ಷೇಪಣೆಗಳನ್ನು ಪರಿಗಣಿಸಿ, ವಿಲ್ ಗೆ ಸಾಕ್ಷಿಗಳಾದ ಸಾಕ್ಷಿದಾರರನ್ನು ಒಳಗೊಂಡಂತೆ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿ ಖಾತಾ ಬದಲಾವಣೆ ಮಂಜೂರು ಮಾಡಿದರು. ಈ ಆದೇಶವು ಈಗಾಗಲೇ ಬಾಕಿ ಇರುವ ನಾಗರಿಕ ದಾವೆಯಲ್ಲಿ ಪಕ್ಷಗಳ ಹಕ್ಕುಗಳನ್ನು ಅಂತಿಮವಾಗಿ ನಿರ್ಧರಿಸುವುದಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಮೊದಲ ಪ್ರತಿವಾದಿ ಭಾವರ್ಲಾಲ್ ಅವರು, ನೋಂದಾಯಿಸದ ಮಾರಾಟ ಒಪ್ಪಂದ ಹಾಗೂ ಪ್ರತಿಕೂಲ ಸ್ವಾಧೀನ (ಚಿಜveಡಿse ಠಿossessioಟಿ) ಆಧಾರದ ಮೇಲೆ ಸರ್ವೇ ಸಂಖ್ಯೆಗಳಲ್ಲೊಂದರ ಆಸ್ತಿ ಮೇಲಿನ ಸ್ವಾಧೀನವನ್ನು ಹಕ್ಕುಪಡಿಸಿಕೊಂಡು, ಖಾತಾ ಬದಲಾವಣೆ ಆದೇಶವನ್ನು ಪ್ರಶ್ನಿಸಿದರು. ಅವರ ಮೇಲ್ಮನವಿಗಳನ್ನು ಉಪ ವಿಭಾಗಾಧಿಕಾರಿ ಮತ್ತು ಆಯುಕ್ತರು ತಿರಸ್ಕರಿಸಿದರು. ಆದರೆ, ಸಂವಿಧಾನದ ವಿಧಿ 227ರ ಅಡಿಯಲ್ಲಿ ಮೇಲ್ವಿಚಾರಣಾಧಿಕಾರವನ್ನು ಬಳಸಿಕೊಂಡು, ಹೈಕೋರ್ಟ್ ಕಂದಾಯ ಅಧಿಕಾರಿಗಳ ಆದೇಶಗಳನ್ನು ರದ್ದುಪಡಿಸಿತು.

ರಂಜಿತ್ ವಿರುದ್ಧ ನಂದಿತಾ ಸಿಂಗ್ ಎಂಬ ತನ್ನ ಹಿಂದಿನ ತೀರ್ಪನ್ನು ಆಧರಿಸಿ, ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಪ್ರಕಾರ ಕಾನೂನುಬದ್ಧ ವಾರಸುದಾರರ ಹೆಸರಿಗೆ ಭೂಮಿಯನ್ನು ಬದಲಾವಣೆ ಮಾಡಲು, ಅವರು ಲಭ್ಯವಿರದಿದ್ದಲ್ಲಿ ಸಿವಿಲ್ ದಾವೆಗೆ ಒಳಪಟ್ಟಂತೆ ರಾಜ್ಯ ಸರ್ಕಾರದ ಪರವಾಗಿ ನಾಮಾಂತರ ಮಾಡಲು ಹೈಕೋರ್ಟ್ ನಿರ್ದೇಶನ ನೀಡಿತು.

ಈ ಸಂಬಂಧ ಸಲ್ಲಿಕೆಯಾಗಿದ್ದ ಮೇಲ್ಮನವಿ ಅಂಗೀಕರಿಸಿದ ಸುಪ್ರೀಂ ಕೋರ್ಟ್. ವಿಧಿ 227ರ ಅಡಿಯಲ್ಲಿ ಹಸ್ತಕ್ಷೇಪ ಮಾಡಲು ಅಗತ್ಯವಿರುವ ನ್ಯಾಯಾಧಿಕಾರ ದೋಷ ಅಥವಾ ಕಾನೂನು ದೌರ್ಬಲ್ಯ. ಆದಾಯ ಅಧಿಕಾರಿಗಳ ಆದೇಶಗಳಲ್ಲಿ ಇದೆಯೇ ಎಂಬುದನ್ನು ಹೈಕೋರ್ಟ್ ಪರಿಶೀಲಿಸದೇ ತಪ್ಪು ಮಾಡಿದೆ ಎಂದು ಅಭಿಪ್ರಾಯಪಟ್ಟಿತು. ಹೈಕೋರ್ಟ್ನ ದೃಷ್ಟಿಕೋನವನ್ನು ತಿರಸ್ಕರಿಸಿದ ಪೀಠ, ವಿಲ್ ಆಧಾರದ ಮೇಲಿನ ಖಾತಾ ಬದಲಾವಣೆ ಅರ್ಜಿಯನ್ನು ಅದು ವಿಲ್ ಸ್ವರೂಪದ್ದಾಗಿದೆ ಎಂಬ ಕಾರಣಕ್ಕಷ್ಟೇ ಪ್ರಾರಂಭದಲ್ಲೇ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿತು.

“ವಿಲ್ ಆಧಾರದ ಮೇಲೆ ಖಾತಾ ಬದಲಾವಣೆ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬುದು ಪೂರ್ಣ ಪೀಠದ ತೀರ್ಪಿನಿಂದ ಸ್ಪಷ್ಟವಾಗುತ್ತದೆ” ಎಂದು ನ್ಯಾಯಾಲಯ ತಿಳಿಸಿದೆ. ಖಾತೆ ಬದಲಾವಣೆ ಹಕ್ಕು ನೀಡುವುದಲ್ಲ, ಕಂದಾಯ ಉದ್ದೇಶಕ್ಕೆ ಮಾತ್ರ ನಾಮಾಂತರ ಕಾರ್ಯವಿಧಾನದ ಸೀಮಿತ ಸ್ಮರೂಪವನ್ನು ಒತ್ತಿ ಹೇಳಿದ ನ್ಯಾಯಪೀಠವು, ನಾಮಾಂತರ ದಾಖಲಾತಿಗಳು ಸ್ಮೃತ್ತಿನ ಮೇಲೆ ಯಾವುದೇ ಹಕ್ಕು, ಶೀರ್ಷಿಕೆ ಅಥವಾ ಆಸಕ್ತಿಯನ್ನು ನೀಡುವುದಿಲ್ಲ; ಅವು ಕೇವಲ ಹಣಕಾಸು ಮತ್ತು ಕಂದಾಯ ಉದ್ದೇಶಗಳಿಗಾಗಿ ಮಾತ್ರ ಎಂದು ಪುನರುಚ್ಚರಿಸಿತು.

ಕಂದಾಯ ಅಧಿಕಾರಿಗಳ ಸಮಾನಾಂತರ ಆದೇಶಗಳಲ್ಲಿ ಹಸ್ತಕ್ಷೇಪ ಮಾಡಿದ ಹೈಕೋರ್ಟ್ ತಪ್ಪು ಮಾಡಿದೆ ಎಂದು ತೀರ್ಮಾನಿಸಿದ ಸುಪ್ರೀಂ ಕೋರ್ಟ್, ಪ್ರಶ್ನಿತ ತೀರ್ಪನ್ನು ರದ್ದು ಪಡಿಸಿ, ಮೇಲ್ಮನವಿದಾರರ ಪರವಾಗಿ ಖಾತಾ ಬದಲಾವಣೆಯನ್ನು ಪುನಃಸ್ಥಾಪಿಸಿದೆ.

ಆದರೂ ಭೂ ಒಡೆತನಕ್ಕೆ ಸಂಬಂಧಿಸಿದ ಯಾವುದೇ ವಿವಾದ ಉದ್ಭವಿಸಿದಲ್ಲಿ ಅದನ್ನು ಕಾನೂನಿನ ಪ್ರಕಾರ ಅರ್ಹ ಸಿವಿಲ್ ಅಥವಾ ಕಂದಾಯ ನ್ಯಾಯಾಲಯ ನಿರ್ಧರಿಸಿದಲ್ಲಿ, ಖಾತಾ ಬದಲಾವಣೆಯ ನಮೂದನೆಗಳು ಆ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.