ಬಾರ್ ಕೌನ್ಸಿಲ್ ಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರ ಪ್ರಾತಿನಿಧ್ಯ ಸಾಂಸ್ಥಿಕಗೊಳಿಸಲು ಶಾಸನಬದ್ಧ ತಿದ್ದುಪಡಿ ಅಗತ್ಯ – ಸುಪ್ರೀಂ ಕೋರ್ಟ್
ನವದೆಹಲಿ: ಬಾರ್ ಕೌನ್ಸಿಲ್ ಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರ ಪ್ರಾತಿನಿಧ್ಯವನ್ನು ಸಾಂಸ್ಥಿಕಗೊಳಿಸಲು ಶಾಸನಬದ್ಧ ತಿದ್ದುಪಡಿಯ ಅಗತ್ಯವಿದೆ ಎಂಬುದನ್ನು ಗಮನಿಸಿದ ಸುಪ್ರೀಂಕೋರ್ಟ್, ಬಾರ್ ಕೌನ್ಸಿಲ್ಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರ ಪ್ರಾತಿನಿಧ್ಯವನ್ನು ಖಾತರಿಪಡಿಸುತ್ತೇವೆ ಎಂದು ತಿಳಿಸಿದೆ.
ವಕೀಲ ಪಂಕಜ್ ಸಿನ್ಹಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಜಾಯ್ ಮಾಲ್ಯ ಬಾಗ್ಚಿ ಅವರ ಪೀಠವು ವಿಚಾರಣೆ ನಡೆಸಿತು. ಭಾರತೀಯ ವಕೀಲರ ಪರಿಷತ್ತು ಶಾಸನಬದ್ಧವಾದ ಚೌಕಟ್ಟಿನಲ್ಲಿದ್ದು, ವಕೀಲರ ರಾಜ್ಯ ಪರಿಷತ್ತುಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರ ಭಾಗವಹಿಸುವಿಕೆಗೆ ಪೂರಕವಾದ ನಾಮನಿರ್ದೇಶನ ಶುಲ್ಕ, ನಿಯಮಾವಳಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿತು.
ವಕೀಲರ ಪರಿಷತ್ತಿನ ವಿವಿಧ ಸಮಿತಿಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರಿಗೆ ಅವಕಾಶ ನೀಡುವುದನ್ನು ಬಿಸಿಐ ಕೋರ್ಟ್ಗೆ ಖಾತರಿಪಡಿಸಬೇಕು. ನ್ಯಾಯಾಲಯದ ಕಾಳಜಿಯನ್ನು ತಿಳಿಯಬೇಕು. ಬಿಸಿಐನ ನಿರ್ಧಾರ ತೆಗೆದುಕೊಳ್ಳುವ ಸಮಿತಿಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರು ಸಕ್ರಿಯರಾಗಿ ಭಾಗಿಯಾಗಬೇಕು. ಆದರೆ, ಚುನಾವಣಾ ಶುಲ್ಕವೇ ದುಬಾರಿಯಾಗಿದೆ. ಇಂತಹವರಿಗೆ ಸಾಂಕೇತಿಕ ಶುಲ್ಕವನ್ನಷ್ಟೇ ವಿಧಿಸಬೇಕು ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು.
ವಿಶೇಷ ಸಾಮರ್ಥ್ಯ ಹೊಂದಿದ ವಕೀಲರಿಗೆ ₹25 ಸಾವಿರ ಶುಲ್ಕ ಭರಿಸುವುದು ಸಹ ಹೊರೆಯಾಗಬಹುದು ಎಂಬುದನ್ನು ವಕೀಲೆ ಇಂದಿರಾ ಜೈಸಿಂಗ್ ನ್ಯಾಯಪೀಠದ ಗಮನಕ್ಕೆ ತಂದರು. ಈ ವೇಳೆ ವಕೀಲರ ಕಳವಳವನ್ನು ಅರ್ಥಮಾಡಿಕೊಂಡ ಬಿಸಿಐ ಅಧ್ಯಕ್ಷ ಮತ್ತು ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು ಸಾಂಕೇತಿಕ ನಾಮನಿರ್ದೇಶನದ ಶುಲ್ಕವಾಗಿ ₹15 ಸಾವಿರ ನಿಗದಿಪಡಿಸಬಹುದು ಎಂದು ಹೇಳಿದರು. ಇದಕ್ಕೆ ವಕೀಲರ ಪರಿಷತ್ತು ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಸುಪ್ರೀಂಕೋರ್ಟ್ ನ್ಯಾಯಪೀಠವು, ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ (ಬಿಸಿಐ) ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ವಕೀಲರಿಂದ ₹1.25 ಲಕ್ಷದ ಬದಲು, ₹15 ಸಾವಿರ ನಾಮನಿರ್ದೇಶನ ಶುಲ್ಕ ಪಡೆಯುವಂತೆ ಸೂಚಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
