ಪಿಟಿಸಿಎಲ್ ಕಾಯ್ದೆ: ಜಮೀನಿನ ಮೇಲೆ ತಮ್ಮ ಹಕ್ಕು ಮರುಸ್ಥಾಪನೆ ಕೋರಿ 28 ವರ್ಷಗಳ ಬಳಿಕ ಅರ್ಜಿ: ಮೇಲ್ಮನವಿ ತಿರಸ್ಕಾರ
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಪರಾಭಾರೆ ನಿರ್ಬಂಧ-ಪಿಟಿಸಿಎಲ್) ಕಾಯಿದೆಯಡಿ ಜಮೀನಿನ ಮೇಲೆ ತಮ್ಮ ಹಕ್ಕುಗಳನ್ನು ಪುನರ್ ಸ್ಥಾಪನೆಗೆ ಕೋರಿ 28 ವರ್ಷಗಳ ಬಳಿಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್ ಈ ಸಂಬಂಧ ಮೇಲ್ಮನವಿ ಅರ್ಜಿಯನ್ನ ವಜಾಗೊಳಿಸಿದೆ.
ಜಮೀನಿನ ಮೇಲೆ ತಮ್ಮ ಹಕ್ಕುಗಳನ್ನು ಪುನರ್ ಸ್ಥಾಪಿಸಿ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ರದ್ದು ಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ವಿನೋಭಾನಗರದ ಪೂಜಾರಿ ನಾರಾಯಣಪ್ಪ ಮತ್ತವರ ವಾರಸುದಾರರು ಸಲ್ಲಿಸಿದ್ದ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಅನುಶಿವರಾಮನ್ ನೇತೃತ್ವದ ವಿಭಾಗೀಯ ನ್ಯಾಯಪೀಠವು , ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದವರಿಗೆ ಸರಕಾರದಿಂದ ಮಂಜೂರಾದ ಜಮೀನನ್ನು ಮಾರಾಟ ಮಾಡಿದ ಬಳಿಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಪರಾಭಾರೆ ನಿರ್ಬಂಧ-ಪಿಟಿಸಿಎಲ್) ಕಾಯಿದೆಯಡಿ ಮರು ಸ್ಥಾಪನೆ ಕೋರಿ 28 ವರ್ಷಗಳ ಬಳಿಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿ ಮೇಲ್ಮನವಿ ತಿರಸ್ಕರಿಸಿತು.
ಏನಿದು ಪ್ರಕರಣ…
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ದುರ್ಗ ಹೋಬಳಿಯ ಜಾತಿಗೆ ಸೇರಿದ್ದ ಮುನಿಗಾ ಎಂಬುವರಿಗೆ ಸರಕಾರ 1935-36ರಲ್ಲಿ 4 ಎಕರೆ 4 ಗುಂಟೆ ಜಮೀನು ಮಂಜೂರು ಮಾಡಿತ್ತು.
ಈ ಜಮೀನನ್ನು 1945ರಲ್ಲಿ ಬೇರೊಬ್ಬರಿಗೆ ಮುನಿಗಾ ಮಾರಾಟ ಮಾಡಿದ್ದರು. ಜಮೀನು ಮಾರಾಟದ 28 ವರ್ಷಗಳ ಬಳಿಕ ಜಮೀನಿನ ಹಕ್ಕುಗಳನ್ನು ಮರು ಸ್ಥಾಪನೆ ಮಾಡಬೇಕು ಎಂದು ಕೋರಿ 2006ರಲ್ಲಿ ಮುನಿಗಾ ವಾರಸುದಾರರು ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಉಪವಿಭಾಗಾಧಿಕಾರಿಗಳು ಮನವಿ ಅಂಗೀಕರಿಸಿ, ಜಮೀನಿನ ಹಕ್ಕುಗಳನ್ನು ಪುನರ್ ಸ್ಥಾಪನೆ ಮಾಡಿ ಆದೇಶಿಸಿದ್ದರು. ಜಮೀನನ್ನು ಖರೀದಿಸಿದ್ದವರ ವಾರಸುದಾರರು ಉಪವಿಭಾಗಾಧಿಕಾರಿಗಳ ಆದೇಶವನ್ನು ಜಿಲ್ಲಾಧಿಕಾರಿಗಳ ಮುಂದೆ ಪ್ರಶ್ನಿಸಿದ್ದರು. ಈ ಮನವಿಯನ್ನು ಜಿಲ್ಲಾಧಿಕಾರಿಗಳು ವಜಾಗೊಳಿಸಿದ್ದರು. ಇದರಿಂದ ಎಸಿ ಹಾಗೂ ಡಿಸಿ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯಪೀಠ, ಅರ್ಜಿ ಪುರಸ್ಕರಿಸಿ ಎಸಿ ಮತ್ತು ಡಿಸಿ ಆದೇಶ ರದ್ದುಪಡಿಸಿತ್ತು. ಆ ಆದೇಶ ಪ್ರಶ್ನಿಸಿ ಜಮೀನು ಮೂಲ ಮಂಜೂರುದಾರ ಮುನಿಗಾ ವಾರಸುದಾರರಾಗಿರುವ ಮೇಲ್ಮನವಿದಾರರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಮಂಜೂರಾದ ಜಮೀನು ಪರಾಭಾರೆ ತಡೆ ಹಿಡಿಯಲು 1978ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಪರಾಭಾರೆ ನಿರ್ಬಂಧ) ಕಾಯಿದೆ ಜಾರಿಗೊಳಿಸಲಾಗಿದೆ. ಈ ಕಾಯಿದೆ ಜಾರಿಯಾದ 28 ವರ್ಷಗಳ ನಂತರ ಜಮೀನಿನ ಮೇಲಿನ ಹಕ್ಕುಗಳನ್ನು ಪುನರ್ ಸ್ಥಾಪನೆ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂಬುದನ್ನು ಗಮನಿಸಿದ ಹೈಕೋರ್ಟ್ ನ್ಯಾಯಪೀಠವು, ಇಷ್ಟೊಂದು ಸುದೀರ್ಘ ಅವಧಿಯನ್ನು ಸಮಂಜಸವಾದ ಅವಧಿ ಎಂದು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿತು. ಮಾನ್ಯ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಈ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
