14/08/2026

Law Guide Kannada

Online Guide

ಸಾರಿಗೆ ನೌಕರರ ಸೇವಾನುಭವ ನೈಜತೆ ಪರಿಶೀಲನೆಗೆ ತನಿಖಾ ಸಮಿತಿ ರಚನೆ ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಸಾರಿಗೆ ಇಲಾಖೆಯ ಸಿ ಗ್ರೂಪ್ ನೌಕರರು ಸಂಜೆ ಕಾಲೇಜುಗಳಲ್ಲಿ ಅರೆಕಾಲಿಕ ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಸಲ್ಲಿಸಿರುವ ಸೇವಾನುಭವ ಪ್ರಮಾಣ ಪತ್ರಗಳ ನೈಜತೆ ಬಗ್ಗೆ ತನಿಖೆ ನಡೆಸಲು ಏಕಸದಸ್ಯ ಸಮಿತಿಯನ್ನು ರಚಿಸಿ ಸಾರಿಗೆ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ

ಸೇವಾನುಭವ ಪ್ರಮಾಣ ಪತ್ರಗಳ ನೈಜತೆ ಬಗ್ಗೆ ತನಿಖೆ ನಡೆಸಲು ಜಿಲ್ಲಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಾರಿಗೆ ಇಲಾಖೇ ಏಕಸದಸ್ಯ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿತ್ತು. ಈ ನಡುವೆ ಸಾರಿಗೆ ಇಲಾಖೆಯ ಆದೇಶ ಪ್ರಶ್ನಿಸಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಶಶಿಕುಮಾರ್ ಸೇರಿ 2023–24ನೇ ಸಾಲಿನಲ್ಲಿ ಬೆಂಗಳೂರಿನ ಆಕ್ಸ್ ಪರ್ಡ್ ಪಾಲಿಟೆಕ್ನಿಕ್ (ಸಂಜೆ) ಕಾಲೇಜಿನಲ್ಲಿ ಡಿಪ್ಲೋಮಾ ಆಟೋಮೊಬೈಲ್ ಕೋರ್ಸ್ ಗೆ ಪ್ರವೇಶ ಪಡೆದಿದ್ದ 11 ಮಂದಿ ಸಿ ಗ್ರೂಪ್ ನೌಕರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ಏಕಸದಸ್ಯ ಪೀಠವು, ದೂರು ಬಂದ ಹಿನ್ನೆಲೆಯಲ್ಲಿ ಇದೇ ವಿಚಾರವಾಗಿ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು 2025ರ ಜುಲೈ 18ರಂದು ತ್ರಿಸದಸ್ಯರ ಸಮಿತಿ ರಚಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ್ದ ಸಮಿತಿಯು ಅರ್ಜಿದಾರರ ಪರವಾಗಿ ವರದಿ ಕೊಟ್ಟಿದೆ. ಆದರೆ, ಈಗ ಪುನಾ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಸಮಿತಿಯನ್ನು ಸಾರಿಗೆ ಆಯುಕ್ತರು ರಚಿಸಿದ್ದಾರೆ. ಹೀಗಾಗಿ, ಒಂದೇ ವಿಷಯಕ್ಕೆ ಎರಡು ತನಿಖಾ ಸಮಿತಿಗಳನ್ನು ರಚಿಸಲಾಗಿರುವುದರಿಂದ ಪ್ರಕರಣವನ್ನು ವಿಚಾರಣೆಗೆ ಒಳಪಡಿಸುವ ಅವಶ್ಯಕತೆಯಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಾಗೆಯೇ ಮುಂದಿನ ವಿಚಾರಣೆವರೆಗೆ ಏಕಸದಸ್ಯ ತನಿಖಾ ಸಮಿತಿ ರಚಿಸಿ ಸಾರಿಗೆ ಇಲಾಖೆ 2026ರ ಜುಲೈ 10ರಂದು ಹೊರಡಿಸಿರುವ ಆದೇಶಕ್ಕೆ ತಡೆ ನೀಡಲಾಗುವುದು ಎಂದು ಪೀಠ ಹೇಳಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.