ಪತ್ನಿ, ಮಗುವಿನ ಪೋಷಣೆ ಪತಿಯ ಆದ್ಯ ಕರ್ತವ್ಯ; ನಿರುದ್ಯೋಗ, ಸಂಬಳ ಕಡಿಮೆ ಎಂಬ ಕಾರಣ ಸಲ್ಲದು – ಹೈಕೋರ್ಟ್
ಬೆಂಗಳೂರು: ಪತ್ನಿ, ಮಗುವಿನ ಪೋಷಣೆ ಮಾಡುವುದು ಪತಿಯ ಆದ್ಯ ಕರ್ತವ್ಯ. ಹೀಗಾಗಿ ನಾನು ನಿರುದ್ಯೋಗಿ, ಸಂಬಳ ಕಡಿಮೆ ಇದೆ ಎಂಬ ಕಾರಣಕ್ಕೆ ಅವರನ್ನು ನಿರ್ಲಕ್ಷಕ್ಕೆ ಒಳಪಡಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ದಂಡ ಪ್ರಕ್ರಿಯಾ ಸಂಹಿತೆಯ ಕಲಂ 125ರ ಅಡಿಯಲ್ಲಿ ಪತ್ನಿ ಮತ್ತು ಮಗುವಿಗೆ ತಲಾ ತಿಂಗಳಿಗೆ 28,000ರಂತೆ ಒಟ್ಟು ₹16,000 ನಿರ್ವಹಣಾ ಭತ್ಯೆ ನೀಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಮರುಪರಿಶೀಲನಾ ನ್ಯಾಯಾಲಯದ ಆದೇಶಗಳನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ವಜಾಗೊಳಿಸಿತು. ಪತಿ ನಿರುದ್ಯೋಗಿಯಾಗಿದ್ದರೆ ಉದ್ಯೋಗ ಹುಡುಕಬೇಕು. ಸಂಬಳ ಕಡಿಮೆಯಿದ್ದರೆ ಹೆಚ್ಚಿನ ಸಂಬಳದ ಕೆಲಸ ಹುಡುಕಿ ಪತ್ನಿ ಮತ್ತು ಮಗುವಿನ ಪೋಷಣೆ ಮಾಡಬೇಕು ಎಂದು ತಾಕೀತು ಮಾಡಿತು.
ಪತ್ನಿ ಮತ್ತು ಮಗುವಿನ ಪೋಷಣೆಗಾಗಿ ದೈಹಿಕವಾಗಿ ಸಮರ್ಥನಾಗಿರುವ ಪತಿಯು ಉದ್ಯೋಗವಿಲ್ಲದಿದ್ದರೆ ಉದ್ಯೋಗವನ್ನು ಹುಡುಕುವುದು, ಪ್ರಸ್ತುತ ಉದ್ಯೋಗದಲ್ಲಿ ಸಂಬಳ ಕಡಿಮೆಯಿದ್ದರೆ ಹೆಚ್ಚಿನ ಸಂಬಳದ ಉದ್ಯೋಗವನ್ನು ಹುಡುಕುವುದು ಅವನ ಕಾನೂನುಬದ್ಧ ಕರ್ತವ್ಯವಾಗಿದೆ. ಪತಿಯು ನಿರುದ್ಯೋಗಿ ಅಥವಾ ಕಡಿಮೆ ಸಂಬಳ ಪಡೆಯುತ್ತಿದ್ದಾನೆ ಎಂಬ ಕಾರಣಕ್ಕೆ ಪತ್ನಿ ಮತ್ತು ಮಗುವನ್ನು ನಿರ್ಲಕ್ಷಕ್ಕೆ ಒಳಪಡಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ತಾನು ಪ್ರಸ್ತುತ ನಿರುದ್ಯೋಗಿಯಾಗಿರುವುದರಿಂದ ತಿಂಗಳಿಗೆ ₹16,000 ನಿರ್ವಹಣಾ ಭತ್ಯೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ತನ್ನ ಪತ್ನಿ ನೋಂದಾಯಿತ ವಕೀಲೆಯಾಗಿದ್ದು ತನಗಿಂತ ಹೆಚ್ಚು ಆದಾಯ ಹೊಂದಿದ್ದಾಳೆ ಎಂದು ಪತಿ ವಾದ ಮಂಡಿಸಿದರು. ಆದರೆ, ಸ್ವತಃ ನ್ಯಾಯಾಲಯದಲ್ಲಿ ಹಾಜರಾದ ಪತ್ನಿಯು, ತಾನು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಒಂದು ದಿನವೂ ವಕೀಲ ವೃತ್ತಿ ನಡೆಸಲು ಸಾಧ್ಯವಾಗಿಲ್ಲ; ಆದ್ದರಿಂದ ತನಗೆ ಮತ್ತು ಮಗುವಿಗೆ ನೀಡಿರುವ ನಿರ್ವಹಣಾ ಭತ್ಯೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದರು.
ವಿಚಾರಣೆಯ ವೇಳೆ, 2022ರ ಫೆಬ್ರವರಿಯಲ್ಲಿ ನೀಡಿದ್ದ ನಿರ್ವಹಣಾ ಭತ್ಯೆ ಆದೇಶವನ್ನು ಪತಿಯು ಇದುವರೆಗೆ ಪಾಲಿಸದೇ ಇದ್ದು, ಬಾಕಿ ಮೊತ್ತವು ಸುಮಾರು 21 ಲಕ್ಷ ರೂ.ಗೆ ಏರಿಕೆಯಾಗಿದೆ ಎಂಬ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಈ ಹಿನ್ನೆಲೆಯಲ್ಲಿ, ನಾಲ್ಕು ವರ್ಷಗಳ ಹಿಂದೆ ನೀಡಿದ್ದ ನಿರ್ವಹಣಾ ಭತ್ಯೆ ಆದೇಶವನ್ನು ಇಂದಿಗೂ ಅಲ್ಪ ಪ್ರಮಾಣದಲ್ಲಿಯೂ ಪಾಲಿಸದಿರುವುದಕ್ಕೆ “ಪ್ರಸ್ತುತ ಉದ್ಯೋಗವಿಲ್ಲ” ಎಂಬ ಕಾರಣವನ್ನು ಒಪ್ಪಿಕೊಳ್ಳಬೇಕೇ ಎಂಬ ಪ್ರಶ್ನೆಯೇ ನ್ಯಾಯಾಲಯದ ಮುಂದೆ ಇತ್ತು ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು.
ಪತಿಯ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಅಂಜು ಗರ್ಗ್ ವಿರುದ್ಧ ದೀಪಕ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅವಲಂಬಿಸಿ, ದೈಹಿಕವಾಗಿ ಸಮರ್ಥನಾಗಿರುವ ಪತಿಯು ತನ್ನ ಪತ್ನಿ ಮತ್ತು ಅಪ್ರಾಪ್ತ ಮಗುವಿನ ಆರ್ಥಿಕ ನಿರ್ವಹಣೆ ಮಾಡುವುದು ಪವಿತ್ರ ಹಾಗೂ ಕಡ್ಡಾಯ ಕರ್ತವ್ಯ ಎಂದು ಪುನರುಚ್ಚರಿಸಿತು.
ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಉಲ್ಲೇಖಿಸಿದ ಹೈಕೋರ್ಟ್ ಹೀಗೆ ಹೇಳಿತು:
”ಪತಿಗೆ ಉದ್ಯೋಗವಿಲ್ಲದಿದ್ದರೆ, ಉದ್ಯೋಗವನ್ನು ಹುಡುಕುವುದು ಅವನ ಜವಾಬ್ದಾರಿ. ಅವನಿಗೆ ಕಡಿಮೆ ಸಂಬಳದ ಉದ್ಯೋಗವಿದ್ದರೆ, ಹೆಚ್ಚಿನ ಸಂಬಳದ ಉದ್ಯೋಗವನ್ನು ಹುಡುಕಿ ಪತ್ನಿ ಮತ್ತು ಮಗುವಿನ ಆರೈಕೆ ಹಾಗೂ ಪೋಷಣೆ ಮಾಡುವುದು ಅವನ ಕರ್ತವ್ಯ. ಪತ್ನಿ ಮತ್ತು ಮಗುವನ್ನು ನಿರ್ಲಕ್ಷಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅಧೀನ ನ್ಯಾಯಾಲಯಗಳ ಏಕಕಾಲಿಕ ತೀರ್ಪುಗಳಲ್ಲಿ ಯಾವುದೇ ಕಾನೂನು ದೋಷ ಕಂಡುಬರದ ಕಾರಣ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ, ಪತ್ನಿ ಮತ್ತು ಮಗನಿಗೆ ನೀಡಿದ್ದ ನಿರ್ವಹಣಾ ಭತ್ಯೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
