20/05/2025

Law Guide Kannada

Online Guide

ಬ್ಯಾಂಕ್ ದಿವಾಳಿ ಷರಾದೊಂದಿಗೆ ಚೆಕ್ ಬೌನ್ಸ್ : ಸೆಕ್ಷನ್ 138ರಡಿ ಅಪರಾಧವಲ್ಲ: ಹೈಕೋರ್ಟ್

ಬೆಂಗಳೂರು: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ‘ದಿವಾಳಿ’ ಪ್ರಕ್ರಿಯೆಯಲ್ಲಿ ಇದೆ ಎಂಬ ಷರಾದೊಂದಿಗೆ ಚೆಕ್ ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣ ಎನ್ಐ ಕಾಯ್ದೆಯ ಸೆಕ್ಷನ್ 138ರಡಿ ಅಪರಾಧವಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಅಲ್ಲದೆ ಪ್ರಕರಣವನ್ನು ರದ್ದುಪಡಿಸಿರುವ ಹೈಕೋರ್ಟ್ನ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಬ್ಯಾಂಕ್ ದಿವಾಳಿ ಪ್ರಕ್ರಿಯೆ ಅಡಿಯಲ್ಲಿದೆ ಎಂಬ ಕಾರಣಕ್ಕೆ ಚೆಕ್ ಅಮಾನ್ಯಗೊಂಡಿದೆ. ಈ ಕಾರಣದ ಪ್ರಕಾರ, ಚೆಕ್ ನೀಡಿದಾತನ ಖಾತೆಯಲ್ಲಿ ಹಣದ ಕೊರತೆಯಿಂದ ಚೆಕ್ ಅಮಾನ್ಯಗೊಂಡಿದೆ ಎಂದು ಪರಿಗಣಿಸಲಾಗದು. ಆದ್ದರಿಂದ ಸದ್ರಿ ಅಮಾನ್ಯವನ್ನು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆನ್ ಸೆಕ್ಷನ್ 138ರಡಿ ಅಪರಾಧ ಎಂದು ಪರಿಗಣಿಸುವಂತಿಲ್ಲ ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ:
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ನಿವಾಸಿ ಗೃಹಿಣಿಯಾಗಿರುವ ದೂರುದಾರರಿಗೆ ಆರೋಪಿತರು ದಿವಾಳಿಯ ಪ್ರಕ್ರಿಯೆಗೊಳಪಟ್ಟ ಕರ್ನಾಟಕ ಗುತ್ತಿಗೆದಾರರ ಸಹಕಾರ ಬ್ಯಾಂಕ್ ಬೆಂಗಳೂರು ಶಾಖೆಯ ಚೆಕ್ ಅನ್ನು ನೀಡಿದ್ದರು. ಈ ಚೆಕ್ “ಬ್ಯಾಂಕ್ ದಿವಾಳಿ ಪ್ರಕ್ರಿಯೆಯಲ್ಲಿದೆ” ಎಂಬ ಷರಾದೊಂದಿಗೆ ಬೌನ್ಸ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಲೀಗಲ್ ನೋಟೀಸ್ ಜಾರಿಗೊಳಿಸಿದ್ದ ದೂರುದಾರರು ಶ್ರೀರಂಗಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ವಿಚಾರಣೆ ನಡೆದು ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಈ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿದ್ದ ಆರೋಪಿ ಪರವಾಗಿ ಶ್ರೀರಂಗಪಟ್ಟಣದ ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿಯನ್ನು ದೋಷಮುಕ್ತಗೊಳಿಸಿತ್ತು.

ಇದರಿಂದ ಬಾಧಿತರಾದ ದೂರುದಾರರಾದ ಸಾವಿತ್ರಮ್ಮ ಈ ತೀರ್ಪಿನ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಅಮಾನ್ಯಗೊಂಡ ಷರಾ ವನ್ನು ಪರಿಗಣಿಸಿ ಈ ಪ್ರಕರಣ ಸೆಕ್ಷನ್ 138ರಡಿ ಅಪರಾಧವಲ್ಲ ಎಂದು ಪರಿಗಣಿಸಿ ಅರ್ಜಿಯನ್ನು ತಿರಸ್ಕರಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.