07/03/2026

Law Guide Kannada

Online Guide

ಮರಣ ದಾಖಲೆಗಳ ನಿರ್ವಹಣೆಗೆ ಡಿಜಿಟಲ್ ಕಾರ್ಯವಿಧಾನ ಅನುಸರಿಸಿ- ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಮರಣ ದಾಖಲೆ ದುರುಪಯೋಗ ಪ್ರಕರಣ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಆಸ್ತಿಗಾಗಿ ಮರಣ ದಾಖಲೆಗಳನ್ನು ತಿರುಚುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮರಣ ದಾಖಲೆಗಳ ನಿರ್ವಹಣೆಗೆ ಡಿಜಿಟಲ್ ಕಾರ್ಯವಿಧಾನ ಅನುಸರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ.

ತುಮಕೂರಿನ ಕೋರ ಹೋಬಳಿ ಬುರುಡಗಟ್ಟಿ ಗ್ರಾಮದ ಸಿದ್ದಲಿಂಗಯ್ಯ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ. ಮರಣ ದಾಖಲೆ ದುರುಪಯೋಗ ಪ್ರಕರಣ ಹೆಚ್ಚಾಗುತ್ತಿರುವುದನ್ನು ತಡೆಗಟ್ಟುವ ಸಲುವಾಗಿ, ಮರಣ ದಾಖಲೆಗಳ ನಿರ್ವಹಣೆಗೆ ಹೊಸದಾಗಿ ಸಮಗ್ರ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ.

ಇ-ಆಡಳಿತ, ಕಂದಾಯ ಇಲಾಖೆ ಮತ್ತು ಪೌರಾಡಳಿತ ಇಲಾಖೆ ಸೇರಿ ಮೂರು ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಸೇರಿ ಮರಣ ದಾಖಲೆಗಳ ನಿರ್ವಹಣೆಗೆ ಡಿಟಿಟಲ್ ಕಾರ್ಯ ವಿಧಾನ ರೂಪಿಸಬೇಕು ಈ ಬಗ್ಗೆ ವಿಸ್ತತ ಯೋಜನಾ ವರದಿ ಸಿದ್ದಪಡಿಸಿ ಯೋಜನೆ ಬಗ್ಗೆ, 6 ವಾರಗಳಲ್ಲಿ ನ್ಯಾಯಪೀಠಕ್ಕೆ ಮಾಹಿತಿ ನೀಡಬೇಕು ಎಂದು ನಿರ್ದೇಶನದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ…
ತಮ್ಮ ಅಜ್ಜಿ ಹೊನ್ನಮ್ಮ ಹೊನ್ನಮ್ಮ 1975ರ ಜೂ.15ರಂದು ಸಾವನ್ನಪ್ಪಿದ್ದರೆಂದು ಹೇಳಿ, ನಿಧನರಾದ 38 ವರ್ಷಗಳ ಬಳಿಕ ತುಮಕೂರಿನ ಮಹದೇವು ಎಂಬವರು ಅರ್ಜಿ ಸಲ್ಲಿಸಿ ಮರಣ ಪ್ರಮಾಣಪತ್ರವನ್ನು ನೀಡುವಂತೆ ಮನವಿ ಮಾಡಿದ್ದರು. ಅರ್ಜಿ ಸ್ವೀಕರಿಸಿದ ಜನನ ಮತ್ತು ಮರಣ ದಾಖಲೆಗಳ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುವ ಉಪ ತಹಸೀಲ್ದಾರ್, ಮರಣ ಪ್ರಮಾಣಪತ್ರ ಕೋರಿ ತಡವಾಗಿ ಅರ್ಜಿ ಸಲ್ಲಿಸಲಾಗಿದೆ. ಹಾಗಾಗಿ, ಮರಣ ದಿನಾಂಕ ದಾಖಲಿಸಿ ಪ್ರಮಾಣಪತ್ರವನ್ನು ನೀಡಲಾಗದು ಎಂಬ ಹಿಂಬರಹ ನೀಡಿದ್ದರು.

ಈ ಹಿಂಬರಹ ಪ್ರಶ್ನಿಸಿ ಮಹದೇವಯ್ಯ ತುಮಕೂರಿನ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ಸಿ ಮುಂದೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಲೋಕ ಅದಾಲತ್ ಗೆ ವರ್ಗಾಯಿಸಲಾಗಿತ್ತು. ಅಲ್ಲಿ ಉಪ ತಹಸೀಲ್ದಾರ್ ಗೈರು ಹಾಜರಾಗಿದ್ದರೂ ಮಹದೇವಯ್ಯ ತಾವು ಹಾಗೂ ಉಪ ತಹಸೀಲ್ದಾರ್ ಸೇರಿ ಜಂಟಿ ಮೆಮೋ ಸಲ್ಲಿಸುತ್ತಿರುವುದಾಗಿ ಹೇಳಿ ವ್ಯಾಜ್ಯ ಇತ್ಯರ್ಥಪಡಿಸಲು ಕೋರಿದ್ದರು. ಜಂಟಿ ಮೆಮೋ ದಾಖಲಿಸಿಕೊಂಡಿದ್ದ ಅದಾಲತ್, ಮೆಮೋದಂತೆ ಮರಣ ಪ್ರಮಾಣಪತ್ರ ವಿತರಿಸಲು ಆದೇಶಿಸಿತ್ತು. ಅದರಂತೆ ತಹಸೀಲ್ದಾರ್ 2014ರ ಜನವರಿ 31ರಂದು ಹೊನ್ನಮ್ಮನ ಮರಣ ಪ್ರಮಾಣಪತ್ರ ವಿತರಿಸಿದ್ದರು.
ಇದೇ ವೇಳೆ, ಹೊನ್ನಮ್ಮ 1985ರಲ್ಲಿಯೇ ಸಾವನ್ನಪ್ಪಿದ್ದಾರೆ. ಸಾಯುವ ಮೊದಲು 1979ರ ಏಪ್ರಿಲ್ 3ರಂದೇ ಹೊನ್ನಮ್ಮ ಅವರು ಕೋರ ಹೋಬಳಿ ಬುರುಡಗಟ್ಟಿ ಗ್ರಾಮದಲ್ಲಿ 3.5 ಎಕರೆ ಜಾಗವನ್ನು ಸಿದ್ದಲಿಂಗಯ್ಯ ಅವರ ಪರವಾಗಿ ಕ್ರಯಪತ್ರ ಮಾಡಿಕೊಟ್ಟಿದ್ದರೆಂದು ತುಮಕೂರಿನ ಸಿದ್ದಲಿಂಗಯ್ಯ ಎಂಬವರ ಕಾನೂನುಬದ್ಧ ವಾರಸುದಾರರಾದ ಪತ್ನಿ ಹಾಗೂ ಮಕ್ಕಳು ಹೈಕೋರ್ಟ್ ನಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಹೊನ್ನಮ್ಮ ಅವರ ಮರಣ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ನ್ಯಾಯಪೀಠ, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಪ್ರಕರಣವನ್ನು ತುಮಕೂರು ನ್ಯಾಯಾಲಯಕ್ಕೆ ಮತ್ತೆ ವರ್ಗಾಯಿಸಿದೆ. ಎಲ್ಲಾ ಪಕ್ಷಗಾರರ ವಾದ ಆಲಿಸಿ ಪ್ರಕರಣ ಇತ್ಯರ್ಥಪಡಿಸುವಂತೆ ಅದು ನಿರ್ದೇಶನ ನೀಡಿದೆ.

ಅಲ್ಲದೆ ಆಸ್ತಿ ವಿವಾದಗಳು ಸೇರಿದಂತೆ ಜಮೀನು ವ್ಯಾಜ್ಯಗಳಿಗೆ ಮರಣ ಪ್ರಮಾಣಪತ್ರಗಳ ದುರ್ಬಳಕೆ ನಡೆಯುತ್ತಿದೆ. ಇದನ್ನು ತಡೆಯಲು ಪಾರದರ್ಶಕ ಮತ್ತು ದೋಷರಹಿತ ಕಾರ್ಯತಂತ್ರ ಅಭಿವೃದ್ಧಿಪಡಿಸಬೇಕು. ಆ ಹೊಸ ವ್ಯವಸ್ಥೆಯಲ್ಲಿ ಮೃತರ ಆಸ್ತಿ ಮತ್ತು ಭೂ ದಾಖಲೆಗಳು ಮಾತ್ರ ಪ್ರತಿಫಲನಗೊಳ್ಳುವ ಜತೆಗೆ, ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ ಅದರ ವಿವರಗಳು, ಅವರ ಪಾನ್, ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಸೇರಿ ಎಲ್ಲಾ ವಿವರಗಳು ಲಭ್ಯವಾಗುವಂತಿರಬೇಕು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಜನನ ಮತ್ತು ಮರಣ ದಾಖಲೆಗಳ ನಿರ್ವಹಿಸುವ ರಿಜಿಸ್ಟ್ರಾರ್ ಅವರಲ್ಲಿ ಯಾವುದೇ ವ್ಯಕ್ತಿ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದರೆ ಕೂಡಲೇ ಆ ವ್ಯಕ್ತಿಗೆ ಸೇರಿದ ಕಂದಾಯ ಇಲಾಖೆ ಮತ್ತು ಸಬ್ ರಿಜಿಸ್ಟ್ರಾರ್ಗಳ ಮುಂದಿರುವ ಮಾಹಿತಿಗಳು ಸ್ವಯಂಚಾಲಿತವಾಗಿ ಲಭ್ಯವಾಗಬೇಕು. ಈ ಬಗ್ಗೆ, ನೂತನ ವ್ಯವಸ್ಥೆ ಅನುಷ್ಠಾನವಾಗಬೇಕು ಎಂದು ನಿರ್ದೇಶನದಲ್ಲಿ ಸೂಚಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.