ಚೆಕ್ ಬೌನ್ಸ್ ಕೇಸ್: ನೋಟೀಸ್ ಜಾರಿ ನಿರೂಪಿಸುವ ಹೊಣೆಗಾರಿಕೆ ಫಿರ್ಯಾದುದಾರರ ಮೇಲಿರುತ್ತೆ – ಹೈಕೋರ್ಟ್
ಕೇರಳ: ಚೆಕ್ ಅಮಾನ್ಯಕ್ಕೆ ಸಂಬಂಧಿಸಿದಂತೆ ನೀಡುವ ಲೀಗಲ್ ನೋಟೀಸ್ ಜಾರಿಯಾಗಿಲ್ಲ ಎಂದು ತಕರಾರರು ತೆಗೆದರೆ, ಆಗ ನೋಟೀಸ್ ಜಾರಿ ನಿರೂಪಿಸುವ ಹೊಣೆಗಾರಿಕೆ ಫಿರ್ಯಾದುದಾರರ ಮೇಲಿರುತ್ತದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
“ನೂರುದ್ದೀನ್ ವಿರುದ್ಧ ಕೇರಳ ರಾಜ್ಯ” ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಪಿ.ವಿ. ಕುಂ ಕೃಷ್ಣನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಚೆಕ್ ಅಮಾನ್ಯಗೊಂಡ ಬಳಿಕ, ಫಿರ್ಯಾದುದಾರರು ಎನ್.ಐ. ಕಾಯ್ದೆಯ ಸೆಕ್ಷನ್ 138(b) ಪ್ರಕಾರ ಲೀಗಲ್ ನೋಟೀಸ್ ನೀಡಬೇಕಾಗುತ್ತದೆ. ಸದರಿ ಪ್ರಕರಣದಲ್ಲಿ ಲೀಗಲ್ ನೋಟೀಸ್ ಇನ್ನೊಬ್ಬ ವ್ಯಕ್ತಿಗೆ ಜಾರಿಯಾಗಿರುತ್ತದೆ ಎಂಬುದನ್ನು ಆರೋಪಿ ಪರ ವಕೀಲರು ವಾದಿಸಿದರು. ಹಾಗಾಗಿ, “ಸಾಜು ವಿರುದ್ದ ಶಾಲಿಮಾರ್ ಹಾರ್ಡ್ ವೇರ್ಸ್, ಕಟ್ಟಣಂ” ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಉಲ್ಲೇಖಿಸಿದ ಅಂಶವನ್ನು ಆರೋಪಿ ಪರ ವಕೀಲರು ಒತ್ತಿ ಹೇಳಿದರು.
ಥಾಮಸ್ ಎಂ.ಡಿ. ವಿರುದ್ಧ ಪಿ.ಎಸ್. ಜಲೀಲ್ ಮತ್ತಿತರರು (2009 KHC 4398) ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಆರೋಪಿಗೆ ನೋಟೀಸಿನ ಮಾಹಿತಿ ಇದೆ ಎಂಬ ಬಗ್ಗೆ ಯಾವುದೇ ಪುರಾವೆ ಇಲ್ಲದಿದ್ದರೆ, ಅಂತಹ ಸಂದರ್ಭದಲ್ಲಿ ಎನ್.ಐ. ಕಾಯ್ದೆಯ ಸೆಕ್ಷನ್ 138(b) ಪ್ರಕಾರ ನೋಟೀಸ್ ಜಾರಿಯಾಗಿಯೇ ಇಲ್ಲ ಎಂಬ ಪೂರ್ವಭಾವನೆ ಬರುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
