06/06/2026

Law Guide Kannada

Online Guide

ಪತಿ ವಿರುದ್ದ ನಿರಂತರ ಸುಳ್ಳು ದೂರು ಮಾನಸಿಕ ಕ್ರೌರ್ಯಕ್ಕೆ ಸಮ: ವಿಚ್ಚೇದನ ಆದೇಶ ಸರಿಯಿದೆ – ಹೈಕೋರ್ಟ್

ಬೆಂಗಳೂರು: ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ, ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಅರ್ಜಿಯನ್ನ ವಜಾಗೊಳಿಸಿದೆ. ಪತಿಯ ವೃತ್ತಿ ಜೀವನ ಹಾಗೂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಸುಳ್ಳು ಆರೋಪಗಳನ್ನು ಹೊರಿಸಿ ಆತನ ಮೇಲಾಧಿಕಾರಿಗಳಿಗೆ ಪತ್ರ ಬರೆಯುವ ಮತ್ತು ದೂರು ನೀಡುವ ಪತ್ನಿಯ ಕೃತ್ಯವು ಮಾನಸಿಕ ಕ್ರೌರ್ಯಕ್ಕೆ ಸಮಾನ. ಪತ್ನಿಯ ನಿರಂತರ ಸುಳ್ಳು ದೂರುಗಳು ಮತ್ತು ವರ್ತನೆಯಿಂದ ಪತಿಯು ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಈ ಹಿನ್ನಲೆಯಲ್ಲಿ ವಿಚ್ಛೇದನ ನೀಡಿರುವ ಆದೇಶವು ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದೆ.

ವಿಚಾರಣೆಯ ವೇಳೆ ದಂಪತಿಯು 2013ರಿಂದಲೇ ಯಾವುದೇ ಸಂಪರ್ಕ ಮತ್ತು ಸಹಜೀವನವಿಲ್ಲದೆ ದೂರು ಉಳಿದಿರುವುದು ನ್ಯಾಯಲಯದ ಗಮನಕ್ಕೆ ಬಂದಿದೆ. ಪತ್ನಿಯು ತನ್ನ ಕ್ರಾಸ್ ಎಕ್ಸಾಮಿನೇಷನ್ ನಲ್ಲಿ ತನಗೆ ಪತಿಯೊಂದಿಗೆ ಮರಳಿ ಸಂಸಾರ ನಡೆಸುವ ಇಚ್ಛೆ ಇದೆ ಎಂದು ಎಲ್ಲೂ ಹೇಳಿಲ್ಲ. ಬದಲಿಗೆ ಪತಿಯು ಹೊಸದಾಗಿ ನಿರ್ಮಿಸಿರುವ ಮನೆಯ ಒಂದು ಭಾಗದಲ್ಲಿ ವಸತಿ ಮತ್ತು ಜೀವನಾಂಶದ ಹಣದ ಹೆಚ್ಚಳವನ್ನು ಮಾತ್ರ ಕೋರಿದ್ದಾರೆ. ಇದರಿಂದಾಗಿ ಇಬ್ಬರ ನಡುವಿನ ವೈವಾಹಿಕ ಸಂಬಂಧವು ಸಂಪೂರ್ಣವಾಗಿ ಕೊನೆಗೊಂಡಿದೆ ಎಂದು ತಿಳಿಯುತ್ತದೆ ಎಂದು ನ್ಯಾಯಪೀಠ ಹೇಳಿತು.

ಪ್ರಕರಣದ ವಿವರ..
ದಂಪತಿಗಳು 2008ರಲ್ಲಿ ಕೊಡಗಿನಲ್ಲಿ ವಿವಾಹವಾಗಿದ್ದು, ಒಬ್ಬ ಗಂಡು ಮಗನಿಂದ್ದಾನೆ. ತಾನು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ, ಪತ್ನಿಯು ಪದೇ ಪದೇ ಯಾವುದೇ ಕಾರಣ ನೀಡದೆ ಮನೆ ಬಿಟ್ಟು ಆಕೆಯ ತವರಿಗೆ ಹೋಗುತ್ತಿದ್ದಳು. ನಂತರದ ದಿನಗಳಲ್ಲಿ ಮಹಿಳಾ ಸಾಂತ್ವನ ಕೇಂದ್ರ ಮತ್ತು ತನ್ನ ಸೇನಾ ಮೇಲಾಧಿಕಾರಿಗಳಿಗೆ ನಿರಂತವಾಗಿ ಸುಳ್ಳು ಆರೋಪಗಳನ್ನು ಹೊರಿಸಿ ದೂರು ನೀಡಿದ್ದಾಳೆ. ಈ ಆರೋಪಗಳು ತನ್ನ ಸೇನಾ ವೃತ್ತಿ ಮತ್ತು ಗೌರವಕ್ಕೆ ತೀವ್ರ ಚ್ಯುತಿ ತಂದಿವೆ ಎಂದು ಕೋರಿ ಪತಿಯು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ಮಂಜೂರು ಮಾಡಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.