ಬಡ ಭೂಮಾಲೀಕರ ಭೂಮಿ ಸ್ವಾಧೀನವು ಕಾನೂನಿನ ಮೇಲೆ ನಡೆಸಿದ ವಂಚನೆ – ಹೈಕೋರ್ಟ್ ಛೀಮಾರಿ
ಬೆಂಗಳೂರು: ಬಡ ಭೂಮಾಲೀಕರ ಹಿತಾಸಕ್ತಿಗೆ ಧಕ್ಕೆ ತಂದು ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಹೈಕೋರ್ಟ್, ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC)ದ ಪಾರ್ಕಿಂಗ್ ವಲಯಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.
ಲಾಭ ಗಳಿಸುವ ಖಾಸಗಿ ಸಂಸ್ಥೆಯ ವಿಸ್ತರಣೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾಗಿದೆ. ಅಲ್ಪ ಪರಿಹಾರ ನೀಡಿ ಜನರ ಭೂಮಿಯನ್ನು ಕಸಿದುಕೊಳ್ಳಲು ಅಧಿಕಾರಿಗಳು ಕಾನೂನಿನ ಮೇಲೆ ನಡೆಸಿದ ವಂಚನೆಯಾಗಿದೆ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ. ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಟಿ ಎಂ ನಡಾಫ್ ಅವರಿದ್ದ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.
ಈ ಭೂಮಿಯನ್ನು M/s Indian Machine Tools Manufacturers’ Association (IMTMA) ಸ್ಥಾಪಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದ ಪಾರ್ಕಿಂಗ್ ಪ್ರದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಐಎಂಟಿಎಂಎಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂಪೂರ್ಣ ಪ್ರಕ್ರಿಯೆಯು ಸಂವಿಧಾನಾತ್ಮಕ ವ್ಯವಸ್ಥೆಗೆ ವಿರುದ್ಧವಾಗಿದೆ. ಬಡ ಭೂಮಾಲೀಕರ ಹಿತಾಸಕ್ತಿಗೆ ಧಕ್ಕೆ ತಂದು ಸರ್ಕಾರ ತನ್ನ ಆಯ್ಕೆಯ ಖಾಸಗಿ ಸಂಸ್ಥೆಗೆ ಭೂಮಿಯನ್ನು ಒದಗಿಸಲು ಸಾಧ್ಯವಿಲ್ಲ. ಸರ್ಕಾರದ ‘ಎಮಿನೆಂಟ್ ಡೊಮೇನ್’ ಅಧಿಕಾರದ ಬಳಕೆ ಕಾನೂನುಬದ್ಧ ವಂಚನೆಯಾಗಬಾರದು ಅಥವಾ ಖಾಸಗಿ ಕೈಗಳಿಗೆ ಭೂಮಿ ವರ್ಗಾಯಿಸುವ ಸಾಧನವಾಗಬಾರದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
2013ರಲ್ಲಿ ಭೂಮಾಲೀಕರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಅಂಗೀಕರಿಸಿದ ನ್ಯಾಯಪೀಠವು, KIADB ಮತ್ತು IMTMA ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದೆ. ಜೊತೆಗೆ, ಏಕಸದಸ್ಯ ನ್ಯಾಯಮೂರ್ತಿಗಳ ಆದೇಶವನ್ನು ರದ್ದುಪಡಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನೇ ಅಮಾನ್ಯಗೊಳಿಸಿದೆ.
ಅಂತಿಮ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 14 ವರ್ಷಗಳಾದರೂ ಪರಿಹಾರದ ಮೊತ್ತ ನಿಗದಿಪಡಿಸುವ ಪ್ರಶಸ್ತಿ (Award) ಘೋಷಿಸಿಲ್ಲ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆಯು ಕಾಲಹರಣಗೊಂಡಿದೆ ಎಂದು ನಾವು ಅಭಿಪ್ರಾಯಪಡುತ್ತೇವೆ. ಹಣಕಾಸು ದಾಖಲೆಗಳಿಂದ ಸ್ಪಷ್ಟವಾಗುವಂತೆ ಲಾಭದಾಯಕ ಖಾಸಗಿ ಸಂಸ್ಥೆಗಾಗಿ ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿರಲಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB ) ಕಾಯ್ದೆಯ ಉದ್ದೇಶವು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಭೂಮಿ ಸ್ವಾಧೀನಪಡಿಸಿಕೊಳ್ಳುವುದೇ ಹೊರತು, ನಿರ್ದಿಷ್ಟ ಖಾಸಗಿ ಸಂಸ್ಥೆಗಾಗಿ ಭೂಮಿ ಸಂಗ್ರಹಿಸುವುದಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದ ನಂತರ, ಅಲ್ಲಿ ಕೈಗಾರಿಕೆ ಸ್ಥಾಪಿಸಲು ಅರ್ಜಿದಾರರಿಗೆ ಭೂಮಿ ಹಂಚಿಕೆ ಮಾಡಬಹುದು ಎಂದು ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
