ಕಿರುಕುಳ, ರಾಜೀನಾಮೆ: ಮತ್ತೆ ನ್ಯಾಯಾಂಗ ಸೇವೆಗೆ ಮರಳಿದ ಸಿವಿಲ್ ಜಡ್ಜ್
ಭೂಪಾಲ್: ನ್ಯಾಯಾಂಗ ಅಧಿಕಾರಿಯ ವಿರುದ್ದ ಕಿರುಕುಳ ಆರೋಪ ಮಾಡಿ ರಾಜೀನಾಮೆ ನೀಡಿದ್ದ ಮಧ್ಯಪ್ರದೇಶ ಸಿವಿಲ್ ನ್ಯಾಯಾಧೀಶರಾದ ಅದಿತಿ ಕುಮಾರ್ ಶರ್ಮಾ ತಮ್ಮ ರಾಜೀನಾಮೆ ಹಿಂತೆಗೆದುಕೊಂಡಿದ್ದು, ಇದೀಗ ಮತ್ತೆ ನ್ಯಾಯಾಂಗ ಸೇವೆಗೆ ಮರಳಿದ್ದಾರೆ.
ಕಿರುಕುಳ ಆರೋಪ ಹೊತ್ತಿದ್ದ ನ್ಯಾಯಾಂಗ ಅಧಿಕಾರಿ ರಾಜೇಶ್ ಕುಮಾರ್ ಗುಪ್ತಾ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಿದ ನಂತರ ಸಿವಿಲ್ ನ್ಯಾಯಾಧೀಶರಾಗಿದ್ದ ಅದಿತಿ ಕುಮಾರ್ ಶರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ಜಿಲ್ಲಾ ನ್ಯಾಯಾಧೀಶ ರಾಜೇಶ್ ಕುಮಾರ್ ಗುಪ್ತಾ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಬಡ್ತಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಕೆಲವೇ ಗಂಟೆಗಳಲ್ಲಿ ಅದಿತಿ ಕುಮಾರ್ ಶರ್ಮಾ ರಾಜೀನಾಮೆ ಬಂದಿತು.
ಈ ಆರೋಪಗಳ ಹೊರತಾಗಿಯೂ, ಸುಪ್ರೀಂ ಕೋರ್ಟ್ ಕೊಲಿಜಿಯಂ ಜುಲೈ 2025 ರ ಆರಂಭದಲ್ಲಿ ‘ಆರೋಪ ಹೊರಿಸಲಾಗಿದ್ದ’ ಗುಪ್ತಾ ಅವರ ಬಡ್ತಿಗೆ ಶಿಫಾರಸು ಮಾಡಿತ್ತು. ಮತ್ತು ಈ ಶಿಫಾರಸ್ಸನ್ನು ಕೇಂದ್ರ ಸರ್ಕಾರವು ಜುಲೈ 28ರಂದು ಅನುಮೋದಿಸಿತು. ಈ ಹಿನ್ನೆಲೆಯಲ್ಲಿ ಜುಲೈ 30ರಂದು ಗುಪ್ತಾ ಅವರು ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದಿತಿ ಕುಮಾರ್ ಶರ್ಮಾ ದೂರುಗಳ ಬಗ್ಗೆ ವಿಚಾರಣೆ ನಡೆಸಿದ್ದ ‘ಹೈಕೋರ್ಟ್ ಆಂತರಿಕ ಸಮಿತಿಯು ಸೇವೆಯಿಂದ ಹಿಂದೆ ಸರಿಯದಂತೆ ಒತ್ತಾಯಿಸಿತು . ಸೂಕ್ತ ವೇದಿಕೆಗಳ ಮೂಲಕ ದೂರುಗಳನ್ನು ಇನ್ನೂ ಮುಂದುವರಿಸಬಹುದು ಎಂದು ಸಮಿತಿ ಭರವಸೆ ನೀಡಿತು.
ಮಧ್ಯಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಅದಿತಿ ಕುಮಾರ್ ಶರ್ಮಾ, “ನನ್ನ ನೈತಿಕ ಶಕ್ತಿ ಮತ್ತು ಭಾವನಾತ್ಮಕ ಬಳಲಿಕೆಯ ಪ್ರತಿ ಔನ್ಸ್ ನೊಂದಿಗೆ, ನಾನು ನ್ಯಾಯಾಂಗ ಸೇವೆಗೆ ರಾಜೀನಾಮೆ ನೀಡುತ್ತಿರುವುದು. ಇದು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಕ್ಕಾಗಿ ಅಲ್ಲ, ಬದಲಿಗೆ ನ್ಯಾಯವು ಅದನ್ನು ರಕ್ಷಿಸಲು ಪ್ರತಿಜ್ಞೆ ಮಾಡಿದ ಸಂಸ್ಥೆಯೊಳಗೆ ತನ್ನ ದಾರಿಯನ್ನು ಕಳೆದುಕೊಂಡಿದ್ದರಿಂದ” ಎಂದು ತಮ್ಮ ರಾಜೀನಾಮೆಗೆ ಕಾರಣ ತಿಳಿಸಿದ್ದರು. ಅಲ್ಲದೆ, ತಮ್ಮ ರಾಜೀನಾಮೆ ನೀಡುವ ನಿರ್ಧಾರವನ್ನು ಅವರು “ಪ್ರತಿಭಟನೆಯ ಹೇಳಿಕೆ” ಎಂದು ಬಣ್ಣಿಸಿದರು.
ರಾಜೀನಾಮೆ ನೀಡುವ ಮೊದಲು, ಶರ್ಮಾ ಜುಲೈನಲ್ಲಿ ಭಾರತದ ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಪತ್ರ ಬರೆದು, “ಗಂಭೀರವಾಗಿ ಬಗೆಹರಿಯದ ಆರೋಪಗಳಿರುವ ವ್ಯಕ್ತಿಗೆ ಬಡ್ತಿ ನೀಡಬಾರದು” ಎಂದು ವಾದಿಸಿದರು. ಆಗಸ್ಟ್ 11 ರಂದು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಚಿಸಿದ ಇಬ್ಬರು ಸದಸ್ಯರ ಸಮಿತಿಯು ಶರ್ಮಾ ಅವರ ಕಳವಳಗಳನ್ನು ಗೌರವಯುತ ರೀತಿಯಲ್ಲಿ ಮತ್ತು ಕಾನೂನಿನ ಪ್ರಕಾರ ಆಲಿಸಲಾಗುವುದು ಎಂದು ಭರವಸೆ ನೀಡಿತು. ಆಡಳಿತಾತ್ಮಕ ಅಧಿಕಾರಿಗಳನ್ನು ಅಥವಾ ನ್ಯಾಯಾಂಗ ವೇದಿಕೆಯನ್ನು ಸಂಪರ್ಕಿಸುವ ಅವರ ಹಕ್ಕಿಗೆ ಯಾವುದೇ ಬಾಧಿತವಾಗುವುದಿಲ್ಲ ಎಂದು ತಿಳಿಸಿದ ನಂತರ ಅವರು ಮತ್ತೆ ಸೇವೆಗೆ ಸೇರಲು ಸಮ್ಮತಿಸಿ ನ್ಯಾಯಾಂಗ ಸೇವೆಗೆ ಮರಳಿದರು. ಆಗಸ್ಟ್ 20 ರಂದು ಸಿವಿಲ್ ನ್ಯಾಯಾಧೀಶರಾಗಿ (ಕಿರಿಯ ವಿಭಾಗ) ಮತ್ತೆ ಕರ್ತವ್ಯಕ್ಕೆ ಸೇರ್ಪಡೆಗೊಂಡರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
