23/04/2026

Law Guide Kannada

Online Guide

ಪುಟ ತಿರುವಲು ಎಂಜಲು ಬಳಕೆ: ಹೈಕೋರ್ಟ್ ಕಳವಳ; ಕಡತ ಸ್ವೀಕರಿಸದಂತೆ ಸೂಚನೆ

ಅಲಹಾಬಾದ್: ಕೆಲ ಸಿಬ್ಬಂದಿಗಳು ಎಂಜಲು ಬಳಸಿ ಪುಟ ತಿರುವು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಗರಂ ಆದ ಅಲಹಾಬಾದ್ ಹೈಕೋರ್ಟ್ ಎಂಜಲು ಗುರುತಿದ್ದರೆ ಕಡತವನ್ನು ಸ್ವೀಕರಿಸದಂತೆ ನಿರ್ದೇಶನ ನೀಡತು.

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶ್ರೀ ಪ್ರಕಾಶ್ ಸಿಂಗ್ ಅವರಿದ್ದ ನ್ಯಾಯಪೀಠ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಅರ್ಜಿಯೊಂದರ ವಿಚಾರಣೆ ನಡೆಸಲು ಕಡತಗಳನ್ನು ಕೈಗೆತ್ತಿಕೊಂಡ ಪೀಠವು, ಹಾಳೆಗಳಲ್ಲಿ ಕೆಂಪು ಗುರುತುಗಳು ಇರುವುದನ್ನು ಗಮನಿಸಿತು. ಪ್ರತಿ ನಿತ್ಯವೂ ಇದು ಚಾಳಿಯಂತಾಗಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತು.

ನ್ಯಾಯಾಲಯದ ಕಡತಗಳ ಪುಟಗಳನ್ನು ತಿರುಗಿಸಲು ಕೆಲ ಸಿಬ್ಬಂದಿ ಲಾಲಾರಸವನ್ನು ಅತ್ಯಂತ ಕೆಟ್ಟ ಹಾಗೂ ಅಸಹ್ಯಕರ ಅಭ್ಯಾಸದಲ್ಲಿ ತೊಡಗಿದ್ದಾರೆ. ಅದರಲ್ಲೂ ಹೆಚ್ಚಿನ ಸಿಬ್ಬಂದಿ ಎಂಜಲು ಬಳಸುವ ಅನೈರ್ಮಲ್ಯ ಪದ್ಧತಿಯಲ್ಲಿ ತೊಡಗಿದ್ದಾರೆ. ಪಾನ್ ಮಸಾಲಾ ಅಥವಾ ಎಲೆ-ಅಡಿಕೆ ಜಗಿಯುವವರು ಹೀಗೆ ಮಾಡಿದರೆ ಹಾಳೆಯ ಮೇಲೆ ಕೆಂಪು ಕಲೆಗಳಾಗುತ್ತವೆ. ಇದು ಸೋಂಕಿನ ಅಪಾಯ ಒಡ್ಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ ಎಂಜಲಿನ ಕೆಂಪು ಗುರುತುಗಳಿರುವ ಕಡತಗಳನ್ನು ಸ್ವೀಕರಿಸದಂತೆ ನ್ಯಾಯಾಲಯದ ನೋಂದಣಿ ಹಾಗೂ ಸರ್ಕಾರಿ ಕಾನೂನು ಕಚೇರಿಗಳಿಗೆ ನಿರ್ದೇಶನ ನೀಡಿತು.

‘ಎಂಜಲು ಬಳಸಿ ಪುಟ ತಿರುಗಿಸುವ ಈ ಅಸಹ್ಯಕರ ಮತ್ತು ಖಂಡನೀಯ ಅಭ್ಯಾಸವು ವಕೀಲರ ಸಹಾಯಕರು, ನೋಂದಣಿ ಅಧಿಕಾರಿಗಳು ಅಥವಾ ಸರ್ಕಾರಿ ವಕೀಲರ ಕಚೇರಿ ಮತ್ತು ಮುಖ್ಯ ವಕೀಲರ ಕಚೇರಿಗಳಲ್ಲಿ ಕಡತಗಳನ್ನು ಸಿದ್ಧಪಡಿಸುವಾಗ ನಡೆಯುತ್ತಿದೆ’ ಎಂದು ಪೀಠವು ತಿಳಿಸಿತು.

‘ಈ ಕೊಳಕು ಅಭ್ಯಾಸವನ್ನು ನಿಲ್ಲಿಸದಿದ್ದರೆ, ಇಂಥ ಕಡತಗಳನ್ನು ಮುಟ್ಟುವವರಿಗೆ ಸೋಂಕು ಹರಡ ಬಹುದು. ನ್ಯಾಯಾಲಯದ ಒಳಬರುವ ಎಲ್ಲಾ ಕಡತಗಳು, ಪುಸ್ತಕಗಳು ಹಾಗೂ ಅರ್ಜಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿದೆಯೇ ಎಂದು ಖಚಿತಪಡಿಸ ಕೊಳ್ಳಬೇಕು’ ಎಂದು ಹಿರಿಯ ನೋಂದಣಿ ಅಧಿಕಾರಿಗಳಿಗೆ ನ್ಯಾಯಪೀಠ ಸೂಚನೆ ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.