06/03/2026

Law Guide Kannada

Online Guide

ಜೀವನ ಪರ್ಯಂತ ಶಿಕ್ಷೆ ವಿಧಿಸುವ ಅಧಿಕಾರ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳಿಗೆ ಮಾತ್ರ: ಸೆಷನ್ಸ್ ಕೋರ್ಟ್ ಗಳಿಗಿಲ್ಲ…!

ಬೆಂಗಳೂರು : ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿಅಪರಾಧಿಗಳಿಗೆ ಸ್ವಾಭಾವಿಕ ಸಾವಿನವರೆಗೆ ಅಂದರೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗೆ ಮಾತ್ರ ಇದೆ ಆದರೆ ಈ ಅಧಿಕಾರ ಸೆಷನ್ಸ್ ಕೋರ್ಟ್ಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಗುವಿನ ಅಪಹರಣ ಮತ್ತು ಕೊಲೆ ಪ್ರಕರಣದ ಆರೋಪಿ ಶಿವಮೊಗ್ಗದ ರುದ್ರೇಶ್ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾಮತ್ತು ಸೆಷನ್ಸ್ ನ್ಯಾಯಾಲಯ ತನಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮತ್ತು ನ್ಯಾ.ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠವು ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್ ಕೋರ್ಟ್ಗಳಿಗೆ ಇಲ್ಲ ಎಂದು ತೀರ್ಪು ಪ್ರಕಟಿಸಿದೆ. ಆರೋಪಿಗೆ ಅಧೀನ ನ್ಯಾಯಾಲಯ 2017ರ ನ.27ರಂದು ನೀಡಿದ್ದ ಜೀವನ ಪರ್ಯಂತ ಶಿಕ್ಷೆಯನ್ನು ಮಾರ್ಪಾಡು ಮಾಡಿರುವ ಹೈಕೋರ್ಟ್ ನ್ಯಾಯಪೀಠವು, ಜೀವಾವಧಿ ಶಿಕ್ಷೆಯನ್ನು ಮಾತ್ರ ವಿಧಿಸಿದೆ.

2025ರ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ‘ಕಿರಣ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ’ ಪ್ರಕರಣದಲ್ಲಿ ಸಿಆರ್ಪಿಸಿ ಸೆಕ್ಷನ್ 428ರ ಪ್ರಕಾರ ಯಾವುದೇ ವಿನಾಯಿತಿ ಇಲ್ಲದೆ ಜೀವಾವಧಿ (ಜೀವನ ಪರ್ಯಂತ ಜೈಲು)ಶಿಕ್ಷೆ ವಿಧಿಸುವ ಅಧಿಕಾರವನ್ನು ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ನೀಡಲಾಗಿದೆಯೇ ಹೊರತು ಸೆಷನ್ಸ್ ನ್ಯಾಯಾಲಯಗಳಿಗಲ್ಲಎಂದು ಆದೇಶಿಸಿತ್ತು.

ಇದನ್ನು ಆಧರಿಸಿ ಈಗ ಹೈಕೋರ್ಟ್ ನ್ಯಾಯಪೀಠವು, ಸೆಷನ್ಸ್ ಕೋರ್ಟ್ ಗಳಿಗೆ ಅಂತಹ ಅಧಿಕಾರ ಇಲ್ಲವೆಂದು ತೀರ್ಪು ನೀಡಿದ್ದು ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸೆಷನ್ಸ್ ಕೋರ್ಟ್ ಗಳು ಪ್ರಕರಣ ಎಷ್ಟೇ ಗಂಭೀರವಾಗಿದ್ದರೂ ಕೇವಲ ಜೀವಾವಧಿ ಶಿಕ್ಷೆ ವಿಧಿಸಬಹುದೇ ಹೊರತು ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಲಾಗದು. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮಾತ್ರ ವಿಧಿಸಬಹುದು.

ಸುಪ್ರೀಂಕೋರ್ಟ್ ತೀರ್ಪಿನ ಮಾನದಂಡಗಳನ್ನು ಅನ್ವಯಿಸಿದರೆ ವಿಚಾರಣಾಧೀನ ನ್ಯಾಯಾಲಯ ಅಪರಾಧಿಗೆ ಯಾವುದೇ ವಿನಾಯಿತಿ ಇಲ್ಲದೆ ಜೀವನ ಪರ್ಯಂತ ಶಿಕ್ಷೆ ವಿಧಿಸಲು ಅವಕಾಶವಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡಬೇಕಾಗಿದೆ. ಅದರಂತೆ ಆದೇಶ ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದೆ.

ಏನಿದು ಪ್ರಕರಣ
ಶಿರಸಿ ಸಮೀಪದ ಅಲವಳ್ಳಿಯವರಾದ ದೂರುದಾರ ಮಹಿಳೆ ಕುಮಾರಸ್ವಾಮಿ ಎಂಬುವರನ್ನು 2011ರಲ್ಲಿವಿವಾಹವಾಗಿದ್ದರು. ಪತಿ ಪುಣೆಯಲ್ಲಿಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಮೂರೂವರೆ ವರ್ಷದ ಸೃಜಯ ಎಂಬ ಪುತ್ರನಿದ್ದನು. ಮಹಿಳೆ ತನ್ನ ತವರು ಮನೆಗೆ ಬಂದಾಗಲೆಲ್ಲಾ ಮೂಲೆಗದ್ಡೆ ಮಠಕ್ಕೆ ಬರುವುದು ವಾಡಿಕೆ. ಅದೇ ರೀತಿ 2017ರ ಏ.8ರಂದು ಆಕೆ ಮಗನೊಡನೆ ಹೊಸ ಸ್ವಾಮೀಜಿಯ ಪೀಠಾರೋಹಣ ಕಾರ್ಯಕ್ರಮದ ಸಲುವಾಗಿ ಮಠಕ್ಕೆ ಭೇಟಿ ನೀಡಿದ್ದರು. ಅದೇ ಮಠದಲ್ಲಿಆರೋಪಿ ರುದ್ರೇಶ್ ಕೆಲಸ ಮಾಡುತ್ತಿದ್ದನು.

ದೂರುದಾರ ಮಹಿಳೆ ತನ್ನ ತಾಯಿ ಮಗನೊಂದಿಗೆ ಏಪ್ರಿಲ್ 10ರಂದು ರಾತ್ರಿ ಮಠದಲ್ಲಿಯೇ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಮಗು ಕಾಣೆಯಾಗಿತ್ತು. ನಂತರ ಹುಡುಕಾಟ ನಡೆಸಿದಾಗ ಮಗುವಿನ ಮೃತದೇಹ ಪತ್ತೆಯಾಗಿತ್ತು. ಬಳಿಕ ತನಿಖೆಯ ವೇಳೆ ಆರೋಪಿ ಹಿಂದಿನ ದಿನ ರಾತ್ರಿ ಸಾಂಬಾರ್ ನಲ್ಲಿ ನಿದ್ರೆ ಮಾತ್ರೆ ಹಾಕಿದ್ದ, ಬಳಿಕ ಗಾಢ ನಿದ್ರೆಯಲ್ಲಿದ್ದ ಮಗುವನ್ನು ಅಪಹರಿಸಿಕೊಂಡು ಹೋಗಿ ಕೊಳದಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ಎನ್ನಲಾಗಿತ್ತು. ಆರೋಪಿ ಒಡವೆ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ. ಆ ಕುರಿತು ಮಹಿಳೆ ಬುದ್ಧಿವಾದ ಹೇಳಿದ್ದರಿಂದ ಆಕೆಯ ಬಗ್ಗೆ ಆರೋಪಿ ದ್ವೇಷ ಬೆಳೆಸಿಕೊಂಡು ಈ ಕೃತ್ಯ ಎಸಗಿದ್ದ ಎನ್ನಲಾಗಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.