ಮೃತ ಮಗನಿಗೆ ಪತ್ನಿ ಮಕ್ಕಳಿದ್ದರೆ ಆಸ್ತಿಯಲ್ಲಿ ತಾಯಿಗೆ ವಾರಸತ್ವದ ಹಕ್ಕಿದೆಯೇ..?
ಬೆಂಗಳೂರು: ವಿಲ್ ಇಲ್ಲದೆ ಮೃತಪಟ್ಟ ಮಗನಿಗೆ ಪತ್ನಿ, ಮಕ್ಕಳಿದ್ದರೆ ಆಸ್ತಿಯಲ್ಲಿ ತಾಯಿಗೆ ವಾರಸತ್ವ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮೃತ ಸದಸ್ಯನ ವಾರಸತ್ಯ ಪ್ರಮಾಣಪತ್ರ ನೀಡುವಂತೆ ಕುಟುಂಬವು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ಟ್ರಯಲ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಎಂ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಭಾರತೀಯ ಉತ್ತರಾಧಿಕಾರ ಕಾಯ್ದೆಯಡಿ ವಿಲ್ ಇಲ್ಲದೆ ಮೃತನಾದ ಮಗನಿಗೆ ಪತ್ನಿ ಮತ್ತು ಮಕ್ಕಳಿದ್ದರೆ, ಅಂತಹ ಸಂದರ್ಭದಲ್ಲಿ ತಾಯಿಗೆ ವಾರಸತ್ವ ಹಕ್ಕಿಲ್ಲ. ಒಬ್ಬ ಮಗ ವಿಲ್ ಇಲ್ಲದೆ ಮೃತನಾಗಿ, ಅವನಿಗೆ ಪತ್ನಿ ಮತ್ತು ಮಕ್ಕಳು ಎಂಬ ನೇರ ವಾರಸುದಾರರು ಇದ್ದರೆ ಅವನ ತಾಯಿಗೆ ಆತನ ಆಸ್ತಿಯಲ್ಲಿ/ವಾರಸತ್ವದಲ್ಲಿ ಯಾವುದೇ ಹಕ್ಕಿಲ್ಲ ಸ್ಪಷ್ಟಪಡಿಸಿತು.
ಮೃತನ ತಾಯಿಯ ವಾದವನ್ನು ಗಮನದಲ್ಲಿಟ್ಟುಕೊಂಡು. ಟ್ರಯಲ್ ಕೋರ್ಟ್ ಮೃತನ ಪತ್ನಿ ಮತ್ತು ಮಕ್ಕಳ ಮನವಿಯನ್ನು ತಿರಸ್ಕರಿಸಿತ್ತು. ಮೃತನು ವಿಲ್ ಇಲ್ಲದೆ ಮೃತಪಟ್ಟಿದ್ದು, ಅವನಿಗೆ ಪತ್ನಿ ಮತ್ತು ಮಕ್ಕಳು ಎಂಬ ನೇರ ಉತ್ತರಾಧಿಕಾರಿಗಳು ಉಳಿದಿದ್ದಾರೆ; ಆದರೆ ಮೃತನ ತಾಯಿ ಕಾನೂನುಬದ್ಧ ವಾರಸುದಾರೆಯಾಗಿರುವ ಕಾರಣದಿಂದ ಅರ್ಜಿದಾರರ ಹಕ್ಕು ನಿರಾಕರಿಸಲಾಗಿದೆ ಎಂಬ ತಪ್ಪು ಊಹೆಯ ಮೇಲೆ ಟ್ರಯಲ್ ಕೋರ್ಟ್ ವಾರಸತ್ವ ಪ್ರಮಾಣಪತ್ರವನ್ನು ನಿರಾಕರಿಸಿದೆ. ನಿಖರವಾಗಿ ಹೇಳುವುದಾದರೆ, ತಾಯಿಯ ಕಾನೂನುಬದ್ಧ ವಾರಸುದಾರ ಸ್ಥಾನಮಾನವನ್ನೇ ಏಕೈಕ ಕಾರಣವಾಗಿ ಉಲ್ಲೇಖಿಸಿ ಟ್ರಯಲ್ ಕೋರ್ಟ್ ಅರ್ಜಿಯನ್ನು ತಪ್ಪಾಗಿ ತಿರಸ್ಕರಿಸಿದೆ ಇದು ಕಾನೂನಿನ ದೃಷ್ಟಿಯಿಂದ ಊರ್ಜಿತವಲ್ಲ ಎಂದು ನ್ಯಾಯಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.
ಟ್ರಯಲ್ ಕೋರ್ಟ್ ಭಾರತೀಯ ವಾರಸತ್ವ ಕಾಯ್ದೆ, 1925ರ ಕಲಂ 32 ಮತ್ತು 33 ಅನ್ನು ಅನ್ವಯಿಸಲು ವಿಫಲವಾಗಿದ್ದು, ಆ ಕಲಂಗಳ ಪ್ರಕಾರ, ಮೃತನಿಗೆ ವಿಧವೆ ಮತ್ತು ನೇರ ಉತ್ತರಾಧಿಕಾರಿಗಳು (ಮಕ್ಕಳು) ಉಳಿದಿದ್ದರೆ ತಾಯಿ ವಾರಸ ಪಡೆಯುವುದಿಲ್ಲ. ವಿಲ್ ಇಲ್ಲದೆ ಮೃತನಿಗೆ ಪತ್ನಿ ಮತ್ತು ಮಕ್ಕಳು ಉಳಿದಿದ್ದ ಸಂದರ್ಭದಲ್ಲಿ. ಆಸ್ತಿಯ ಸಂಪೂರ್ಣ ಹಕ್ಕು ಅವರಿಗೇ ಸೇರುತ್ತದೆ; ತಾಯಿಗೆ ಯಾವುದೇ ಕಾನೂನು ಹಕ್ಕು ಇರುವುದಿಲ್ಲ.ಕಾಯ್ದೆಯ ಕಲಂ 33 ಪ್ರಕಾರ, ವಿಲ್ ಇಲ್ಲದೆ ಮೃತನಿಗೆ ವಿಧವೆ ಮತ್ತು ನೇರ ವಾರಸುದಾರರು ಉಳಿದಿದ್ದರೆ, ಆಸ್ತಿಯ 1/3 ಭಾಗ ವಿಧವೆಗೆ ಮತ್ತು 2/3 ಭಾಗ ನೇರ ವಾರಸುದಾರರಿಗೆ ಸೇರುತ್ತದೆ. ಟ್ರಯಲ್ ಕೋರ್ಟ್ ತನ್ನ ತೀರ್ಪಿನಲ್ಲಿ ಕಲಂ 32 ಮತ್ತು 33 ಅನ್ನು ತಪ್ಪಾಗಿ ಅರ್ಥಮಾಡಿಕೊಂಡು ಅನ್ವಯಿಸಿದೆ ಎಂದು ಹೇಳಬಹುದು. ಒಬ್ಬ ಮಗ ವಿಲ್ ಇಲ್ಲದೆ ಮೃತನಾಗಿ ಪತ್ನಿ ಮತ್ತು ಮಕ್ಕಳು ಉಳಿದಿದ್ದರೆ, ತಾಯಿಗೆ ಆತನ ಆಸ್ತಿಯಲ್ಲಿ ಪಾಲು ಪಡೆಯಲು ಕಾನೂನುಬದ ಹಕ್ಕಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಮೃತನು ತನ್ನ ಜೀವಿತಾವಧಿಯಲ್ಲಿ ರಿಲಯನ್ಸ್ ಗುಂಪಿನ ಕಂಪನಿಗಳ ಷೇರುಗಳಲ್ಲಿ ಹಣ ಹೂಡಿಕೆ ಮಾಡಿದ್ದರೂ, ತನ್ನ ಮರಣಾನಂತರ ಷೇರು ವರ್ಗಾವಣೆಗಾಗಿ ಯಾವುದೇ ನಾಮಿನಿಯನ್ನು ನೇಮಿಸಿರಲಿಲ್ಲ. ಹೀಗಾಗಿ, ನೇರ ವಂಶಸ್ಥರಾದ ಅಪೀಲುದಾರರು ಆ ಷೇರುಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಅರ್ಹರಾಗಿದ್ದು, ಅದಕ್ಕಾಗಿ ಅರ್ಜಿ ಸಲ್ಲಿಸಿದರು.
ಆದರೆ, ಸಕ್ಷಮ ನ್ಯಾಯಾಲಯದಿಂದ ಹೊರಡಿಸಿದ ವಾರಸತ್ವ ಪ್ರಮಾಣಪತ್ರವನ್ನು ಸಲ್ಲಿಸದೇ ಇದ್ದರೆ ಷೇರುಗಳನ್ನು ಅವರ ಹೆಸರಿಗೆ ವರ್ಗಾಯಿಸಲಾಗುವುದಿಲ್ಲ ಎಂದು ಅವರಿಗೆ ತಿಳಿಸಲಾಯಿತು. ಇದರಿಂದ, ಮೃತನ ಷೇರುಗಳನ್ನು ತಮ್ಮ ಪರವಾಗಿ ಪಡೆಯಲು ಅಪೀಲುದಾರರು ಭಾರತೀಯ ವಾರಸತ್ವ ಕಾಯ್ದೆಯ ಕಲಂ 372 ಅಡಿಯಲ್ಲಿ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ವಾರಸತ್ವ ಪ್ರಮಾಣಪತ್ರಕ್ಕಾಗಿ ಮನವಿ ಸಲ್ಲಿಸಿದರು. ಆದರೆ ಅದು ತಿರಸ್ಕೃತವಾಯಿತು. ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದರು.
ಈ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಪೀಠವು, ಮೃತನ ವಿಲ್ ಇಲ್ಲದ ವಾರಸತ್ಯದಲ್ಲಿ, ಅವನ ಆಸ್ತಿ ನೇರ ವಂಶಸ್ಥರಾದ ವಿಧವೆ ಮತ್ತು ಉಳಿದ ಮಕ್ಕಳ ನಡುವೆ ಹಂಚಿಕೆ ಆಗಬೇಕು. ಈ ಪ್ರಕರಣದಲ್ಲಿ. ಅಪೀಲುದಾರರು ಲೇಟ್ ಶ್ರೀ ಹರೋಲ್ಡ್ ವಾಝ್ ಅವರ ನೇರ ವಂಶಸ್ತರಾಗಿದ್ದಾರೆ; ಆದ್ದರಿಂದ ಕಾನೂನಿನ ಪ್ರಕಾರ ಅವರ ಆಸ್ತಿ/ಸಂಪತ್ತನ್ನು ವಂಶಪಾರಂಪರ್ಯವಾಗಿ ಪಡೆಯುವ ಹಕ್ಕು ಅವರಿಗೆ ಇದೆ,” ಎಂದು ನ್ಯಾಯಾಲಯ ಹೇಳಿದೆ.ಈ ಹಿನ್ನೆಲೆಯಲ್ಲಿ, ಟ್ರಯಲ್ ಕೋರ್ಟ್ ಆದೇಶವನ್ನು ರದ್ದುಪಡಿಸಿ, ಕಾನೂನು ಪ್ರಕಾರ ಒಂದು ವಾರದೊಳಗೆ ಅಪೀಲುದಾರರ ಪರವಾಗಿ ವಾರಸತ್ಯ ಪ್ರಮಾಣಪತ್ರವನ್ನು ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
