ಮಾಲೀಕರ ಸಾಲಕ್ಕೆ ಬಾಡಿಗೆದಾರ ಹೊಣೆಗಾರನಲ್ಲ: ಹೈಕೋರ್ಟ್
ಬೆಂಗಳೂರು: ಮಾಲೀಕರು ಬ್ಯಾಂಕುಗಳಿಂದ ಸಾಲ ಪಡೆದ ಆಸ್ತಿ-ಕಟ್ಟಡಗಳಲ್ಲಿ ವಾಸಿಸುವ ಬಾಡಿಗೆದಾರರು ಆ ಸಾಲಕ್ಕೆ ಹೊಣೆಗಾರರಲ್ಲ. ಅವರನ್ನು ಯಾವುದೇ ಕಾರಣಕ್ಕೂ ಸಾಲಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಇಟ್ಟಿಯಂ ಸಿಸ್ಟಮ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಸೂರಜ್ ಗೋವಿಂದರಾಜ್ ಅವರ ನೇತೃತ್ವದ ವಿಭಾಗೀಯಪೀಠ, ಬ್ಯಾಂಕುಗಳಿಂದ ಸಾಲ ಪಡೆದ ಆಸ್ತಿ-ಕಟ್ಟಡಗಳ ಮಾಲೀಕರು ಸುಸ್ತಿದಾರರಾದಾಗ, ಆ ಆಸ್ತಿಯಲ್ಲಿ ವಾಸವಿರುವ ಅಥವಾ ಕಚೇರಿ ಹೊಂದಿರುವ ಬಾಡಿಗೆದಾರರು ಸಾಲ ವಸೂಲಾತಿಗೆ ನ್ಯಾಯಾಧಿಕರಣ (ಡಿಆರ್ಟಿ) ನೀಡಿದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಾಲದ ಮೊತ್ತದ ಶೇ.50ರಷ್ಟನ್ನು ಠೇವಣಿ ಇಡಬೇಕು ಎಂಬುದು ಕಡ್ಡಾಯವಲ್ಲ . ಕಟ್ಟಡದಲ್ಲಿರುವ ಬಾಡಿಗೆದಾರರನ್ನು ಯಾವುದೇ ಕಾರಣಕ್ಕೂ ಸಾಲಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ, ಸಾಲದ ಹೊಣೆಗಾರಿಕೆಯನ್ನು ಬಾಡಿಗೆ ದಾರನ ಮೇಲೆ ಹೇರಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ…
ಉತ್ತಮ್ ಚಂದಾನಿ ಎಂಬುವರ ಮಾಲೀಕತ್ವದ ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ‘ಕಾನ್ಸುಲೇಟ್-1’ ಕಟ್ಟಡದ 4ನೇ ಮಹಡಿಯಲ್ಲಿ 7,045 ಚ.ಅಡಿ ಯಲ್ಲಿ ಇಟ್ಟಿಯಂ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ 2001ರಿಂದ ಬಾಡಿಗೆಗೆ ಇದೆ. ಈ ಕಟ್ಟಡದ ಮಾಲೀಕ ಉತ್ತಮ್ ಚಂದಾನಿ ಎಂಬುವವರು ಮುಂಬೈನ ‘ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನಿಂದ’ ಸಾಲ ಪಡೆದಿದ್ದರು. ಆದರೆ, ಸಾಲ ಮರುಪಾವತಿಸಲು ವಿಫಲರಾದಾಗ ಬ್ಯಾಂಕ್ ‘ಸರ್ಫೇಸಿ’ ಕಾಯ್ದೆಯಲ್ಲಿ ಕಟ್ಟಡದ ಸ್ವಾಧೀನ ಪ್ರಕ್ರಿಯೆ ಆರಂಭಿಸಿ ಕಂಪನಿ ಕಚೇರಿಯನ್ನು ತೆರವಿಗೆ ಮುಂದಾಯಿತು. ಅದನ್ನು ಪ್ರಶ್ನಿಸಿ ಕಂಪನಿಯು ಸಾಲ ವಸೂಲಾತಿ ನ್ಯಾಯಾಧೀಕರಣದ (ಡಿಆರ್ ಟಿ) ಮೊರೆ ಹೋಗಿತ್ತು. ಆ ಅರ್ಜಿಯನ್ನು ಡಿಆರ್ಟಿಯು ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಕಂಪನಿಯು ಚೆನ್ನೈನ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಬೇಕಾದರೆ ನಿಯಮಾವಳಿಗಳ ಪ್ರಕಾರ ಪೂರ್ವ ಠೇವಣಿ ಇಡಬೇಕು ಎಂದು ಡಿಆರ್ಎಟಿ ಆದೇಶಿಸಿ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಕಂಪನಿ ಹೈಕೋರ್ಟ್ ಮೊರೆಹೋಗಿತ್ತು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು, ಹಣಕಾಸು ಆಸ್ತಿಗಳ ಸಕ್ಯುರಿಟೈಸೇಶನ್ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಆಸಕ್ತಿ ಜಾರಿ(ಸರ್ಫೇಸಿ) ಕಾಯ್ದೆಯ ಸೆಕ್ಷನ್ 18ರಲ್ಲಿ ‘ಸಾಲಗಾರ’ ಮತ್ತು ‘ಸಾಲಗಾರನಲ್ಲದ ಇತರ ವ್ಯಕ್ತಿ’ ಎಂದು ಇಬ್ಬರನ್ನೂ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. 2ನೇ ನಿಬಂಧನೆಯಲ್ಲಿ ಕೇವಲ ‘ಸಾಲಗಾರ’ ಮಾತ್ರ ಶೇ.50 ರಷ್ಟು ಪೂರ್ವ ಠೇವಣಿ ಇಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹಾಗಾಗಿ, ಸಾಲಗಾರನಲ್ಲದ 3ನೇ ವ್ಯಕ್ತಿಯ ಮೇಲೆ ಸಾಲದ ಹೊರೆ ಹೊರಿಸುವುದು ತಾರತಮ್ಯ ಮತ್ತು ಅನ್ಯಾಯವಾಗಲಿದೆ. ಅದ್ದರಿಂದ ಮಾಲೀಕರ ಸಾಲದ ಹೊಣೆಗಾರಿಕೆಯನ್ನ ಬಾಡಿಗೆದಾರರ ಮೇಲೆ ಹೇರಲಾಗುವುದಿಲ್ಲ ಎಂದು ಹೇಳಿದೆ
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
