02/07/2026

Law Guide Kannada

Online Guide

ಅಪಘಾತದಲ್ಲಿ ಗಾಯಾಳು ಆದಾಯ ನಷ್ಟ ಪರಿಗಣನೆ, ಪರಿಹಾರ ಲೆಕ್ಕಾಚಾರ: ಹೊಸ ಸೂತ್ರ ರೂಪಿಸಿದ ಸುಪ್ರೀಂ

ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ “ಅಂಗವೈಕಲ್ಯ ಪ್ರಮಾಣ” ಮಾತ್ರ ಪರಿಗಣಿಸದೆ ಆ ವ್ಯಕ್ತಿಯ ವೃತ್ತಿ ಮತ್ತು ಅದರಿಂದ ಬರುತ್ತಿದ್ದ ಆದಾಯದಲ್ಲಿ ಆದ ನಷ್ಟವನ್ನು ಗಣನೆಗೆ ತೆಗೆದುಕೊಂಡು ಪರಿಹಾರವನ್ನು ಲೆಕ್ಕಾಚಾರ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಉಜ್ವಲ್ ಭುಯಾನ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ. ಅಲ್ಲದೆ ರಸ್ತೆ ಅಪಘಾತ ಪ್ರಕರಣಗಳಲ್ಲಿ ಗಾಯಾಳುಗಳಿಗಾದ ಆದಾಯ ನಷ್ಟ ಪರಿಗಣನೆ ಮಾಡಲು ಮತ್ತು ಪರಿಹಾರದ ಲೆಕ್ಕಾಚಾರಕ್ಕೆ ನ್ಯಾಯಪೀಠವು ಹೊಸ ಸೂತ್ರ ರೂಪಿಸಿದೆ.

ವೈದ್ಯಕೀಯ ವೆಚ್ಚ, ಆದಾಯ ನಷ್ಟದ ಜೊತೆಗೆ, ಭವಿಷ್ಯದ ದೃಷ್ಟಿಯಿಂದಲೂ ಪರಿಹಾರವನ್ನು ಲೆಕ್ಕಾಚಾರ ಮಾಡಬೇಕು. ಸಾಮಾನ್ಯ ಜೀವನ ನಡೆಸಲು ಕಷ್ಟವಾಗುವಂಥ ಸ್ಥಿತಿ, ಕಾಲು ಕಳೆದುಕೊಂಡಿದ್ದರಿಂದ ಆದ ನೋವು, ಭಯ ಮತ್ತು ಸಂಕಟವನ್ನೂ ಪರಿಗಣಿಸಬೇಕು ಸುಪ್ರೀಂ ನ್ಯಾಯಪೀಠ ತನ್ನ ತೀರ್ಪಿನಲ್ಲಿ ವಿವರಿಸಿದೆ.

ಏನಿದು ಪ್ರಕರಣ
2004ರಲ್ಲಿ ಬಡಗಿ ಕೆಲಸ ಮಾಡುತ್ತಿದ್ದ ಶಂಕರ್ ದತ್ ಎಂಬುವರಿಗೆ ಅಪಘಾತ ವಾಗಿತ್ತು. ಅತಿವೇಗವಾಗಿ ಬಂದ ಜೀಪ್ ವೊಂದು ದತ್ ಅವರ ಬೈಕ್ ಡಿಕ್ಕಿಯಾಗಿ ಅಪಘಾತದಿಂದ ಬಲಗಾಲಿನ ಮಂಡಿಯಿಂದ ಕೆಳಗಿನ ಭಾಗವನ್ನು ದತ್ ಅವರು ಕಳೆದುಕೊಂಡರು. ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯು ದತ್ ಅವರಿಗೆ ₹4.77 ಲಕ್ಷ ಪರಿಹಾರ ಘೋಷಿಸಿತ್ತು. ಬಳಿಕ, ದತ್ ಅವರು ಉತ್ತರಾಖಂಡ ಹೈಕೋರ್ಟ್ ಮೆಟ್ಟಿಲೇರಿದರು. ಪರಿಹಾರ ಮೊತ್ತವನ್ನು 11.51 ಲಕ್ಷಕ್ಕೆ ಏರಿಸಿ ಆದೇಶಿಸಲಾಗಿತ್ತು.ಕಾಲು ಕತ್ತರಿಸಿದ್ದರಿಂದ ನನಗೆ ನನ್ನ ವೃತ್ತಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪರಿಹಾರ ಮೊತ್ತ ಹೆಚ್ಚಿಸಿ’ ಎಂದು ಕೋರಿ ದತ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಇವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಉಜ್ವಲ್ ಭುಯಾನ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠ ನಡೆಸಿತು. ದತ್ ಅವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದಾಗಿನಿಂದ ಆರಂಭಗೊಂಡು ತೀರ್ಪು ಬರುವಲ್ಲಿವರೆಗಿನ ದಿನದವರಗೆ ಲೆಕ್ಕಾಚಾರ ಮಾಡಿ, ದತ್ ಅವರಿಗೆ ನೀಡುವ ಪರಿಹಾರದ ಮೊತ್ತವನ್ನು ₹35.95 ಲಕ್ಷಕ್ಕೆ ಹೆಚ್ಚಿಸಿದೆ. ಈ ಪರಿಹಾರ ಮೊತ್ತಕ್ಕೆ ವಾರ್ಷಿಕ ಶೇ 6ರಷ್ಟು ಬಡ್ಡಿ ಸೇರಿಸಿ ಕೊಡಬೇಕು ಎಂದೂ ಪೀಠ ಹೇಳಿದೆ.

‘ದತ್ ಅವರ ಅಂಗವೈಕಲ್ಯದ ಪ್ರಮಾಣವು ಶೇ 70ರಷ್ಟಿದೆ ಎಂದು ವೈದ್ಯಕೀಯ ಪ್ರಮಾಣಪತ್ರ ನೀಡಲಾಗಿದೆ. ಆದರೆ, ಈ ಪ್ರಮಾಣವು ಅವರಿಗಾದ ಆರ್ಥಿಕ ನಷ್ಟವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ. ಆದ್ದರಿಂದ ಅವರ ಅಂಗವೈಕಲ್ಯದ ಪ್ರಮಾಣವನ್ನು ಶೇ 100 ಎಂದೇ ಪರಿಗಣಿಸಬೇಕಾಗುತ್ತದೆ’ ಎಂದು ಪೀಠ ಹೇಳಿತು.

‘ದತ್ ಅವರು ತಿಂಗಳಿಗೆ ₹8 ಸಾವಿರದಿಂದ ₹10 ಸಾವಿರದವರೆಗೆ ದುಡಿಯುತ್ತಿದ್ದರು. ಇದನ್ನು ಪುಷ್ಟಿಕರಿಸುವ ಸಾಕ್ಷಗಳೂ ಇದ್ದವು. ಆದರೆ, ಉತ್ತರಾಖಂಡ ಹೈಕೋರ್ಟ್, ದತ್ ಅವರ ತಿಂಗಳ ಆದಾಯವು ₹5,000 ಎಂದು ಪರಿಗಣಿಸಿ ಪರಿಹಾರ ಘೋಷಿಸಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿತು. ನಷ್ಟ ಅಂದಾಜಿಸುವಲ್ಲಿ ಹೈಕೋರ್ಟ್ ಈ ತೀರ್ಪು ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಪಘಾತವಾದ ಸಂದರ್ಭದಲ್ಲಿ ದತ್ ಅವರಿಗೆ 38 ವರ್ಷ ಎನ್ನುವುದನ್ನೂ ಗಮನಿಸಿದ ಸುಪ್ರೀಂ ಕೋರ್ಟ್, 2004ರಿಂದ ಇಲ್ಲಿಯವರೆಗೆ ತಿಂಗಳಿಗೆ ₹10 ಸಾವಿರ ಆದಾಯವನ್ನು ಲೆಕ್ಕಾಚಾರ ಮಾಡಿ, ₹35.9 ಲಕ್ಷ ಪರಿಹಾರ ಘೋಷಿಸಿದೆ. ಜೊತೆಗೆ, ಕೃತಕ ಕಾಲಿನ ನಿರ್ವಹಣೆಗಾಗಿ ಹೆಚ್ಚುವರಿ ₹ 10 ಲಕ್ಷವನ್ನೂ ಘೋಷಣೆ ಮಾಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.