ಲಂಚಕ್ಕೆ ಬ್ರೇಕ್ , ಇನ್ಮುಂದೆ ಕೈಬೆರಳ ತುದಿಯಲ್ಲೇ ಭೂ ದಾಖಲೆ: ಏನಿದು ಮಾಸ್ಟರ್ ಪ್ಯಾನ್
ಬೆಂಗಳೂರು: ಇನ್ಮುಂದೆ , ಜನರು ತಮ್ಮ ಭೂಮಿಯ ಹಳೆಯ ದಾಖಲೆಗಾಗಿ ಪರದಾಡಬೇಕಾಗಿಲ್ಲ. ಲಂಚ ನೀಡಬೇಕಾಗಿಲ್ಲ. ದಿನ ದಿನವೂ ರೆಕಾರ್ಡ್ ರೂಮ್ ಕಚೇರಿಗೆ ಅಲೆಯಬೇಕಾಗಿಲ್ಲ. ಅರ್ಜಿ ಹಾಕಿದ ಕೆಲವೇ ಗಂಟೆಗಳಲ್ಲಿ ಕೋರಲಾದ ದಾಖಲೆಗಳ ಡಿಜಿಟಲ್ ಪ್ರತಿಗಳು ನಿಮ್ಮ ಕೈಗೆ ಲಭಿಸಲಿದೆ.
ಹೌದು ಇಂತಹದೊಂದು ಮಾಸ್ಟರ್ ಪ್ಲಾನ್ ಮಾಡಲು ಕಂದಾಯ ಇಲಾಖೆ ಮುಂದಾಗಿದೆ. ಸುಲಭವಾಗಿ ಜನರ ಕೈಬೆರಳ ತುದಿಯಲ್ಲೇ ಭೂಮಿಯ ದಾಖಲೆಗಳು ಲಭ್ಯವಾಗುವಂತೆ ಮಾಡುವ ಕ್ರಾಂತಿಕಾರಿ ಹೆಜ್ಜೆಯನ್ನ ರಾಜ್ಯದ ಕಂದಾಯ ಇಲಾಖೆ ಇಟ್ಟಿದೆ.
ರಾಜ್ಯದ ವಿವಿಧ ಸರ್ಕಾರಿ ರೆಕಾರ್ಡ್ ರೂಮ್ ಗಳಲ್ಲಿ ಧೂಳು ತಿನ್ನುತ್ತಿದ್ದ ಲಕ್ಷಾಂತರ ದಾಖಲೆಗಳು ಈಗಾಗಲೇ ಸ್ಕ್ಯಾನ್ ಆಗಿ ಡಿಜಿಟಲ್ ದಾಖಲೆಯಾಗಿ ರೂಪುಗೊಂಡಿದೆ. ಇನ್ನೂ ಕೋಟ್ಯಂತರ ದಾಖಲೆಗಳು ಕಂಪ್ಯೂಟರ್ ಹಾರ್ಡ್ ಡಿಸ್ಕ್ ಸೇರಲಿದೆ. ಇಂತಹ ವಿನೂತನ ಡಿಜಿಟಲ್ ಸ್ನೇಹಿ ಪ್ರಯತ್ನಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಕೈ ಹಾಕಿದ್ದು, ವ್ಯಾಪಕ ಜನಮೆಚ್ಚುಗೆಗೆ ಪಾತ್ರವಾಗಿದೆ.
ಭೂ ದಾಖಲೆಗಳ ಡಿಜಿಟಲೀಕರಣದಿಂದ ನಕಲಿ ಎಂಟ್ರಿಗಳು ಹಾಗೂ ತೊಟ್ಟಿ (ಫೇಕ್) ದಾಖಲೆಗಳು ಸೃಷ್ಟಿಯಾಗುವುದನ್ನು ತಪ್ಪಿಸಬಹುದಾಗಿದೆ. ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳಲಿದೆ. ನಕಲಿ ದಾಖಲೆ ಎಂಬ ಅನುಮಾನ ಬಂದ ಪ್ರಕರಣಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ (ಫಾರೆನ್ಸಿಕ್ ಲ್ಯಾಬ್) ಮೂಲಕ ಅದರ ನೈಜತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ರಾಜ್ಯದ ಸುಮಾರು 100 ಪುಟಗಳ ದಾಖಲೆಗಳ ಪೈಕಿ 35.36 ಕೋಟಿ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಉಳಿದ 65 ಕೋಟಿ ಪುಟಗಳ ದಾಖಲೆಯ ಸ್ಕ್ಯಾನ್ ಕಾರ್ಯ ಪೂರ್ಣಗೊಳ್ಳಲಿದೆ. ಸಾರ್ವಜನಿಕರು ಭೂ ಸುರಕ್ಷಾ ವೆಬ್ಸೈಟ್ ಮೂಲಕ ತಮ್ಮ ಭೂ ದಾಖಲೆಗಳಿಗೆ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನೇರವಾಗಿ ತಮ್ಮ ಮನೆಯಲ್ಲಿಯೇ ದಾಖಲೆಗಳನ್ನು ಪಡೆಯಬಹುದಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
