2 ಎಕರೆವರೆಗೆ ಉದ್ದಿಮೆ ಆರಂಭಿಸಲು ಭೂಪರಿವರ್ತನೆಗೆ ವಿನಾಯಿತಿ: ನೂತನ ಭೂ ಸುಧಾರಣೆ(ತಿದ್ದುಪಡಿ) ಕಾಯ್ದೆ ಅಂಗೀಕಾರ
ಬೆಂಗಳೂರು: ರಾಜ್ಯದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಬಳಸಲಾಗುವ ಕೃಷಿ ಭೂಮಿಯನ್ನು ಎರಡು ಎಕರೆಯ ವರೆಗೆ ಬಳಸಿದಲ್ಲಿ ಕೃಷಿಯೇತರ ಎಂದು ಭೂಪರಿವರ್ತನೆ ಮಾಡುವ ಅಗತ್ಯವಿಲ್ಲ.
ಹೌದು ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮೈಕ್ರೋ, ಕಿರು ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜಿಸಲು ತರಲಾಗಿರುವ ಕರ್ನಾಟಕ ಭೂ ಸುಧಾರಣೆಗಳು ಮತ್ತು ಕೆಲ ಇತರ ಕಾನೂನು (ತಿದ್ದುಪಡಿ) ಮಸೂದೆ-2025ಕ್ಕೆ ಅಂಗೀಕಾರ ನೀಡಲಾಗಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದ ವಿಧೇಯಕದ ಮೇಲೆ ಸುದೀರ್ಘ ಚರ್ಚೆ ಹಾಗೂ ಸಲಹೆಗಳ ಬಳಿಕ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.
ಇನ್ಮುಂದೆ ನೂತನವಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು ಎರಡು ಎಕರೆಯವರೆಗೆ ಕೃಷಿ ಭೂಮಿ ಬಳಕೆ ಮಾಡಿದಲ್ಲಿ ಆ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡುವ ಅಗತ್ಯವಿರುವುದಿಲ್ಲ ಎಂದು ನೂತನ. ನೂತನ ಭೂ ಸುಧಾರಣೆ(ತಿದ್ದುಪಡಿ) ಕಾಯ್ದೆಯಲ್ಲಿ ತಿಳಿಸಲಾಗಿದೆ. ಇನ್ನು ಸದನದಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ರಾಜ್ಯದಲ್ಲಿ ಎಲ್ಲ ಕಡೆಗಳಲ್ಲೂ 2 ಎಕರೆ ವರೆಗೆ ಉದ್ದಿಮೆ ಆರಂಭಿಸಲು ಭೂಪರಿವರ್ತನೆಗೆ ವಿನಾಯಿತಿ ನೀಡಲಾಗಿದೆ. ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ. ‘ನವೀಕರಿಸಬಹುದಾದ ಇಂಧನ’ ಕ್ಷೇತ್ರದ ಉತ್ತೇಜನಕ್ಕಾಗಿ ಸೋಲಾರ್, ಪವನ ಶಕ್ತಿ ಘಟಕ ಸ್ಥಾಪಿಸಲು ಅನುಮತಿ ಕೊಡಿಸುವ ನೆಪದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದನ್ನು ಸಮರ್ಪಕವಾಗಿ ತಡೆಯಲು ಈ ತಿದ್ದುಪಡಿಯಲ್ಲಿ ತರಲಾಗಿದೆ ಎಂದರು.
ಖಾಸಗಿ ವ್ಯಕ್ತಿಗಳ ಕೃಷಿ ಜಮೀನನ್ನು ಶಿಕ್ಷಣ ಸಂಸ್ಥೆಗಳು ಅಥವಾ ಸಣ್ಣ ಉದ್ದಿಮೆ /ಕೈಗಾರಿಕೆಗಳಿಗೆ ಖರೀದಿಸಲು ಸೆಕ್ಷನ್ 109ರ ಅಡಿಯಲ್ಲಿ ಈ ಹಿಂದೆಯೇ ಅನುಮತಿ ನೀಡಲಾಗಿದೆ. ಆದರೆ, ಈ ಮೊದಲು ಅರ್ಧ ಹೆಕ್ಟೇರ್ ಭೂಮಿ ಖರೀದಿಸಲು ಮಾತ್ರ ಅವಕಾಶವಿತ್ತು. ಅದನ್ನು ಈಗ ನಾಲ್ಕು ಹೆಕ್ಟೇರ್ ಗೆ ಏರಿಕೆ ಮಾಡಲಾಗಿದೆ. ಇದೇ ವೇಳೆ, ಈ ಹಿಂದೆ, ಆ ಭೂಮಿ ಖರೀದಿಗೆ ಅನುಮತಿ ನೀಡಲು ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಮಾತ್ರ ಅಧಿಕಾರವಿತ್ತು. ಸದಿ ನೂತನ ತಿದ್ದುಪಡಿಯಲ್ಲಿ ಆ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವಹಿಸಿ ಕೊಡಲಾಗಿದೆ. ಜಿಲ್ಲಾಧಿಕಾರಿ ಅನುಮತಿ ನೀಡಿದ ಬಳಿಕ ಆ ಭೂಮಿ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಆಗಿರುತ್ತದೆ ಎಂದು ತಿಳಿಸಿದರು.
ಹಾಗೆಯೇ ಈ ಹಿಂದೆ ಸಣ್ಣ ಉದ್ದಿಮೆದಾರರು/ಶಿಕ್ಷಣ ಸಂಸ್ಥೆಗಳು ಭೂಮಿಯನ್ನು ಯಾವ ಉದ್ದೇಶಕ್ಕೆ ಪಡೆದಿರುತ್ತಾರೋ ಅದನ್ನು ಬಿಟ್ಟು ಬೇರೆ ಉದ್ದೇಶಕ್ಕೆ ಬಳಸಲು ಅನುಮತಿ ಕೇಳಿದರೆ ಕೊಡಲು ಅವಕಾಶ ಇರಲಿಲ್ಲ. ಪ್ರಸ್ತುತ ಅದಕ್ಕೂ ಅವಕಾಶ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿ ಅನುಮತಿಸಿದರೆ ಯಾವುದೇ ಉದ್ದೇಶಕ್ಕಾಗಿ ಆ ಜಮೀನಿನ ಬಳಕೆ ಮತ್ತು ಮಾರಾಟ ಮಾಡಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
