06/03/2026

Law Guide Kannada

Online Guide

ಚೆಕ್ ಬೌನ್ಸ್ ಕೇಸ್ ಗಳ ತ್ವರಿತ ವಿಲೇವಾರಿಗೆ ಗೈಡ್ ಲೈನ್ಸ್ ಪ್ರಕಟಿಸಿದ ಸುಪ್ರೀಂ

ನವದೆಹಲಿ: ವರ್ಷಾನುಗಟ್ಟಲೆ ವಿಳಂಬ ಆಗುವಂತಹ ಚೆಕ್ ಅಮಾನ್ಯ ಪ್ರಕರಣಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿದ್ದು ಚೆಕ್ ಅಮಾನ್ಯ ಪ್ರಕರಣಗಳ ತ್ವರಿತ ವಿಲೇವಾರಿಗೆ ನೂತನ ಮಾರ್ಗಸೂಚಿಯನ್ನು ಪ್ರಕಟಿಸಿದೆ.

“ಸಂಜಬಿತ್ ತರಿ ವಿರುದ್ಧ ಕಿಶೋರ್ ಎಸ್. ಬೋರ್ಕರ್” ಪ್ರಕರಣ ಕುರಿತು ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಎನ್. ವಿ. ಅಂಜಾರಿಯಾ ಅವರಿದ್ದ ವಿಭಾಗೀಯ ನ್ಯಾಯಪೀಠು ಈ ಮಾರ್ಗಸೂಚಿಗಳನ್ನ ಹೊರಡಿಸಿದೆ. “ದಾಮೋದರ್ ಎಸ್. ಪ್ರಭು ವರ್ಸಸ್ ಸಯೀದ್ ಬಾಬಾಲಾಲ್ ಹೆಚ್.” (2010) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎನ್.ಐ. ಕಾಯ್ದೆಯ ಅಡಿಯಲ್ಲಿ ರಾಜಿ ಮಾಡಿಕೊಳ್ಳಲು ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಈ ಮಾರ್ಗಸೂಚಿ ಪ್ರಕಟಿಸಿ ಸುಮಾರು 15 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ನೂತನ ಮಾರ್ಗಸೂಚಿಯನ್ನು ಪ್ರಕಟಿಸುವುದು ಸೂಕ್ತ ಎಂದು ಮನಗಂಡು ಸುಪ್ರೀಂ ಕೋರ್ಟ್ ಹೊಸ ಮಾರ್ಗಸೂಚಿಗಳನ್ನು ನೀಡಿದೆ.

ದೇಶಾದ್ಯಂತ ಚೆಕ್ ಬೌನ್ಸ್ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಬಾಕಿ ಇದೆ. ಚೆಕ್ ನೆಗೋಷಿಯೇಬಲ್ ಇನ್ನುಮೆಂಟ್ಸ್ ಆಕ್ಟ್ನ ಸೆಕ್ಷನ್ 138 ರ ಅಡಿಯಲ್ಲಿ ಸಲ್ಲಿಸಲಾದ ದೂರಿನಲ್ಲಿ ಆರೋಪಿಗಳ ಮೇಲೆ ಸಮನ್ಸ್ ಜಾರಿಯು ದೂರುಗಳ ವಿಲೇವಾರಿಯಲ್ಲಿ ವಿಳಂಬಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಗಮನಿಸಿತು. ನೆಗೋಷಿಯೇಬಲ್ ಇನ್ಸುಮೆಂಟ್ಸ್ ಆಕ್ಟ್, 1881 (NI ಆಕ್ಟ್) ನ ಸೆಕ್ಷನ್ 138 ರ ಅಡಿಯಲ್ಲಿ ಚೆಕ್ ಬೌನ್ಸ್ ಪ್ರಕರಣಗಳಿಗೆ ಸಮನ್ಸ್ ಜಾರಿ (ದಸ್ತಿ ಮತ್ತು ಎಲೆಕ್ಟ್ರಾನಿಕ್ ವಿಧಾನಗಳು ಸೇರಿದಂತೆ), ಆನ್ಲೈನ್ ಪಾವತಿ ಸೌಲಭ್ಯಗಳು, ಸಾರಾಂಶವನ್ನು ಸಲ್ಲಿಸುವುದು ಮತ್ತು ತ್ವರಿತ ವಿಲೇವಾರಿಗಾಗಿ ಇತರ ಕಾರ್ಯವಿಧಾನದ ಸುಧಾರಣೆಗಳಿಗಾಗಿ ಸಮಗ್ರ ನಿರ್ದೇಶನಗಳನ್ನು ನೀಡಿದೆ.

ನೆಗೋಷಿಯೇಬಲ್ ಇನ್ಸುಮೆಂಟ್ಸ್ ಆಕ್ಟ್ ಅಡಿಯಲ್ಲಿ ಶಿಕ್ಷೆಯು ಪ್ರತೀಕಾರವನ್ನು ಪಡೆಯುವ ಸಾಧನವಲ್ಲ ಆದರೆ ಹಣದ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಗದು ಪಾವತಿಗೆ ವಿಶ್ವಾಸಾರ್ಹ ಪರ್ಯಾಯವಾಗಿ ಚೆಕ್ ಗಳ ವಿಶ್ವಾಸಾರ್ಹತೆಯನ್ನು ಉತ್ತೇಜಿಸಲು ಒಂದು ಸಾಧನವಾಗಿದೆ ಎಂಬ ಅಂಶವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ನಿರ್ದೇಶನಗಳನ್ನು ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.